ಕೋಲಾರ: ‘ರಾಜಕೀಯ ದ್ವೇಷ ಅಥವಾ ಹಣಕಾಸು ವ್ಯವಹಾರದಲ್ಲಿನ ವ್ಯತ್ಯಾಸದ ಕಾರಣಕ್ಕೆ ನನ್ನ ಅಪಹರಣ ನಡೆದಿಲ್ಲ. ಬದಲಿಗೆ ವೃತ್ತಿಪರ ಅಪಹರಣಕಾರರು ನನ್ನನ್ನು ಅಪಹರಿಸಿ ₹ 30 ಕೋಟಿ ಹಣಕ್ಕೆ ಬೇಡಿಕೆಯಿಟ್ಟಿದ್ದರು’ ಎಂದು ಮಾಜಿ ಸಚಿವ ವರ್ತೂರು ಪ್ರಕಾಶ್ ತಿಳಿಸಿದರು.
ಇಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ಕೋಲಾರದ ಹಾಲಿ ಶಾಸಕ ಶ್ರೀನಿವಾಸಗೌಡರು ನನಗೆ ರಾಜಕೀಯವಾಗಿ ಶತ್ರುವಷ್ಟೇ. ಅವರು ಕೊಲೆ ಮಾಡಿಸುವಷ್ಟು ಕೆಟ್ಟ ಮನುಷ್ಯರಲ್ಲ. ಕೋಲಾರದಲ್ಲಿ ದ್ವೇಷದ ರಾಜಕಾರಣ ಸಹ ಇಲ್ಲ. ನಾನು ಯಾರಿಗೂ ಹಣ ಕೊಡಬೇಕಾಗಿಲ್ಲ, ಎಲ್ಲಿಯೂ ಸಾಲ ಮಾಡಿಲ್ಲ’ ಎಂದರು.
ವರ್ತೂರು ಪ್ರಕಾಶ್ ಅಪಹರಣ ಪ್ರಕರಣವನ್ನು ಬುಧವಾರ ಬೆಂಗಳೂರಿನ ಬೆಳ್ಳಂದೂರು ಠಾಣೆಯಿಂದ ಕೋಲಾರ ಗ್ರಾಮಾಂತರ ಠಾಣೆಗೆ ವರ್ಗಾಯಿಸಲಾಗಿತು. ಇದರ ಬೆನ್ನಲ್ಲೇ ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಾಹ್ನವಿ ನೇತೃತ್ವದ ಪೊಲೀಸ್ ತಂಡವು ಅಪಹರಣ ನಡೆದಿದೆ ಎನ್ನಲಾದ ತಾಲ್ಲೂಕಿನ ಬೆಗ್ಲಿ ಹೊಸಹಳ್ಳಿ ಬಳಿಯ ಜಂಗಾಲಹಳ್ಳಿ ರಸ್ತೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿತು.
ಅಲ್ಲದೇ, ಬೆಗ್ಲಿ ಹೊಸಹಳ್ಳಿಯಲ್ಲಿನ ವರ್ತೂರು ಪ್ರಕಾಶ್ರ ತೋಟದ ಮನೆ ಹಾಗೂ ಸುತ್ತಮುತ್ತಲ ಪ್ರದೇಶದಲ್ಲಿ ಪೊಲೀಸರು ಪರಿಶೀಲನೆ ಮಾಡಿದರು. ತೋಟದ ಮನೆಯಲ್ಲಿನ ಕೆಲಸಗಾರರು ಮತ್ತು ಪ್ರಕಾಶ್ರ ವಿಚಾರಣೆ ನಡೆಸಿದರು. ಗೃಹ ಸಚಿವರ ಸೂಚನೆಯಂತೆ ವರ್ತೂರು ಪ್ರಕಾಶ್ರ ಭದ್ರತೆಗೆ ಇಬ್ಬರು ಕಾನ್ಸ್ಟೆಬಲ್ಗಳನ್ನು ನಿಯೋಜಿಸಲಾಗಿದೆ.
‘ಸಾಲದ ವಿಚಾರವಾಗಿ ವರ್ತೂರು ಪ್ರಕಾಶ್ರ ಅಪಹರಣ ನಡೆದಿದೆ. ಅವರಿಗೆ ಸಾಲ ಕೊಟ್ಟಿದ್ದ ವ್ಯಕ್ತಿಗಳೇ ಅಪಹರಿಸಿ ಹಲ್ಲೆ ಮಾಡಿಸಿದ್ದಾರೆ. ಹನಿಟ್ರ್ಯಾಪ್ ಅಥವಾ ಮಹಿಳೆ ವಿಚಾರವಾಗಿ ಈ ಕೃತ್ಯ ನಡೆದಿಲ್ಲ. ವರ್ತೂರು ಪ್ರಕಾಶ್ ಪ್ರಕರಣದ ದಿಕ್ಕು ತಪ್ಪಿಸುವ ಪ್ರಯತ್ನ ಮಾಡುತ್ತಿದ್ದಾರೆ’ ಎಂದು ಉನ್ನತ ಪೊಲೀಸ್ ಮೂಲಗಳು ತಿಳಿಸಿವೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.