ADVERTISEMENT

ಹಲ್ಲೆ ಹಿಂದೆ ಅಧ್ಯಕ್ಷ; ಆರೋಪ

​ಪ್ರಜಾವಾಣಿ ವಾರ್ತೆ
Published 18 ಜೂನ್ 2020, 3:00 IST
Last Updated 18 ಜೂನ್ 2020, 3:00 IST

ಕೋಲಾರ: ಶ್ರೀನಿವಾಸಪುರ ಎಪಿಎಂಸಿ ಮಾರುಕಟ್ಟೆ ಅಧ್ಯಕ್ಷ ಎನ್.ರಾಜೇಂದ್ರ ಪ್ರಸಾದ್ ಸೂಚಿಸಿದ ಅಕ್ರಮ ಬಿಲ್‌ಗಳನ್ನು ಮಾಡಲು ಒಪ್ಪದ ಕಾರಣ ಮಾರುಕಟ್ಟೆ ಸಹಾಯಕ ಕಾರ್ಯದರ್ಶಿ ಪಿ.ಎನ್ ಜಗನ್ನಾಥ್ ಅವರ ಮೇಲೆ ಉದ್ದೇಶಪೂರ್ವಕವಾಗಿ ಹಲ್ಲೆ ನಡೆಸಲಾಗಿದೆ ಎಂದು ಜಗನ್ನಾಥ್ ಕುಟುಂಬದವರುದೂರಿದರು.

ನಗರದಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕುಟುಂಬಸ್ಥರು, ‘ಇತ್ತೀಚೆಗೆ ಜಗನ್ನಾಥ್ ಮಾರುಕಟ್ಟೆ ಕಚೇರಿಯ ಕಂಪ್ಯೂಟರ್ ಆಪರೇಟರ್ ಮಹಿಳೆಯನ್ನು ನಿಂದಿಸಿದ್ದಾರೆ ಎಂದು, ಮಹಿಳೆಯ ಸಂಬಂಧಿಕರು ಹಲ್ಲೆ ಮಾಡಿದ್ದಾರೆ. ಇದರ ಹಿಂದೆ ಅಧ್ಯಕ್ಷರ ಕೈವಾಡವಿದೆ’ ಎಂದು ಆರೋಪಿಸಿದರು.

ಶ್ರೀನಿವಾಸಪುರದ ಮಾರುಕಟ್ಟೆಯಲ್ಲಿ ನಕಲಿ ವಿದ್ಯುತ್ ಬಿಲ್‌ಗಳನ್ನು ಮಾಡಲು ಅಧ್ಯಕ್ಷರು ಹೇಳಿದ್ದಾರೆ. ಇದಕ್ಕೆ ಜಗನ್ನಾಥ್ ಒಪ್ಪದ ಕಾರಣ ದ್ವೇಷದಿಂದ ಹಲ್ಲೆ ಮಾಡಿಸಿದ್ದಾರೆ. ಜಗನ್ನಾಥ್ ಯಾವ ಮಹಿಳೆಯನ್ನು ನಿಂದಿಸಿಲ್ಲ ಎಂದು ತಿಳಿಸಿದರು.

ADVERTISEMENT

ಮಾರುಕಟ್ಟೆಯ ಪ್ರಧಾನ ನಿರ್ದೇಶಕರಿಗೆ ದೂರು ಸಲ್ಲಿಸಿದ್ದೇವೆ. ಜಗನ್ನಾಥ್ ಅವರ ಪ್ರಾಣಕ್ಕೆ ಅಪಾಯವಾದರೆ ಎಪಿಎಂಸಿ ಅಧ್ಯಕ್ಷ ರಾಜೇಂದ್ರ ಪ್ರಸಾದ್ ಅವರೇ ಕಾರಣ. ಅಧ್ಯಕ್ಷರ ಮೇಲೆ ಕಾನೂನು ರೀತಿ ಕ್ರಮ ಜರುಗಿಸಿ ನಮಗೆ ನ್ಯಾಯ ಕೊಡಿಸಬೇಕು ಎಂದು ಮನವಿ
ಮಾಡಿದರು.

ಗೋಷ್ಠಿಯಲ್ಲಿ ಲತಾ, ಸರೋಜಮ್ಮ, ಜ್ಯೋತಿ, ವಿಶ್ವನಾಥ್, ವೆಂಕಟೇಶ್, ಮಂಜುಳಾ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.