ಶ್ರೀನಿವಾಸಪುರ: ‘ನಿವೃತ್ತ ಸರ್ಕಾರಿ ನೌಕರರು ಆರೋಗ್ಯದ ಕಡೆಗೆ ಹೆಚ್ಚಿನ ಗಮನ ಕೊಡಬೇಕು. ಕೋವಿಡ್ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು’ ಎಂದು ಶಿರಸ್ತೇದಾರ್ ಮನೋಹರ ಮಾನೆ
ಹೇಳಿದರು.
ಪಟ್ಟಣದ ಸರ್ಕಾರಿ ನೌಕರರ ಭವನದಲ್ಲಿ ಬುಧವಾರ ಏರ್ಪಡಿಸಿದ್ದ ರಾಜ್ಯ ನಿವೃತ್ತ ನೌಕರರ ಸಂಘದ ತಾಲ್ಲೂಕು ಘಟಕದ ಸರ್ವ ಸದಸ್ಯರ ಸಭೆ ಉದ್ಘಾಟಿಸಿ ಅವರು
ಮಾತನಾಡಿದರು.
ನಿವೃತ್ತ ನೌಕರರು ತಮ್ಮ ನಿವೃತ್ತ ಜೀವನ ಸಂತೋಷವಾಗಿರುವಂತೆ ನೋಡಿಕೊಳ್ಳಬೇಕು. ಯಾವುದಾದರೊಂದು ಸಮಾಜಮುಖಿ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳಬೇಕು. ಕುಟುಂಬ ಹಾಗೂ ಸಮಾಜದ ಕ್ಷೇಮ ಕುರಿತು ಚಿಂತಿಸಬೇಕು ಎಂದು ಹೇಳಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ವಿ. ಉಮಾದೇವಿ ಮಾತನಾಡಿ, ಸರ್ಕಾರಿ ಸೇವೆಯಲ್ಲಿ ಅಧಿಕಾರ ಶಾಶ್ವತವಲ್ಲ. ಆದರೆ, ಸೇವೆಯಲ್ಲಿದ್ದಾಗ ಸಾರ್ವಜನಿಕರ ಹಿತದೃಷ್ಟಿಯಿಂದ ಪ್ರಾಮಾಣಿಕ ಸೇವೆ ಮಾಡಿದರೆ ಜನರು ಗೌರವಿಸುತ್ತಾರೆ. ನಿವೃತ್ತಿ ಬಳಿಕ ನೆಮ್ಮದಿ ಸಿಗುತ್ತದೆ. ಜೀವನದಲ್ಲಿ ಸಾರ್ಥಕ ನೆನಪುಗಳು ಉಳಿಯಲು ಸಾಧ್ಯವಾಗುತ್ತದೆ. ಕುಟುಂಬದೊಂದಿಗಿನ ಒಡನಾಟ ಮನಸ್ಸಿಗೆ ಸಂತೋಷ ನೀಡುತ್ತದೆ ಎಂದು ಹೇಳಿದರು.
ತಾಲ್ಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಎಂ. ನಾಗರಾಜ್ ಮಾತನಾಡಿ, ಸರ್ಕಾರ ಏಳನೇ ವೇತನ ಆಯೋಗ ರಚಿಸಿಲು ಒಪ್ಪಿಗೆ ನೀಡಿದೆ. ವೇತನ ಆಯೋಗದ ಶಿಫಾರಸ್ಸುಗಳು ಜಾರಿಗೆ ಬಂದರೆ ನಿವೃತ್ತ ನೌಕರರಿಗೆ ಲಾಭವಾಗುತ್ತದೆ ಎಂದು ಹೇಳಿದರು.
ತಾಲ್ಲೂಕು ಸರ್ಕಾರಿ ನಿವೃತ್ತ ನೌಕರರ ಸಂಘದ ಅಧ್ಯಕ್ಷ ಶ್ರೀನಿವಾಸರೆಡ್ಡಿ, ಪ್ರಾಂಶುಪಾಲ ಬಷೀರ್ ಮಾತನಾಡಿದರು. ನಿವೃತ್ತ ನೌಕರರನ್ನು ಸನ್ಮಾನಿಸಲಾಯಿತು.
ಸಂಘದ ಗೌರವಾಧ್ಯಕ್ಷ ಎ. ಬೈರಾರೆಡ್ಡಿ, ಪ್ರಧಾನ ಕಾರ್ಯದರ್ಶಿ ಎಸ್. ನಾಗರಾಜ್, ಖಜಾಂಚಿ ತಿಪ್ಪಾರೆಡ್ಡಿ, ಜಿಲ್ಲಾ ಘಟಕದ ನಿರ್ದೇಶಕ ಮುನಿಯಪ್ಪ, ಎಸ್ಬಿಐ ವ್ಯವಸ್ಥಾಪಕಿ ಉಮಾ, ಕ್ಷೇತ್ರಾಧಿಕಾರಿ ಲಲಿತಾ, ಆಂಜನೇಯ ರೆಡ್ಡಿ, ರೇಣುಕಮ್ಮ, ನಾರಾಯಣರೆಡ್ಡಿ, ನಾಗರಾಜಾಚಾರ್, ಎಚ್.ಎಂ. ವೆಂಕಟಶಾಮಿ, ಗೋವಿಂದಯ್ಯ ಹಾಜರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.