
ಕೋಲಾರ: ದಕ್ಷಿಣ ಕಾಶಿಯೆಂದೇ ಪ್ರಸಿದ್ಧಿ ಪಡೆದಿರುವ ನಗರ ಸಮೀಪದ ಅಂತರಗಂಗೆಯ ಕಾಶಿ ವಿಶ್ವೇಶ್ವರ ಸನ್ನಿಧಿಯಲ್ಲಿ ಕಾರ್ತಿಕ ಮಾಸದ ಕಡೆ ಸೋಮವಾರ ಪ್ರಯುಕ್ತ ಜಾತ್ರೆ ನಡೆಯಲಿದ್ದು, ಭರದ ಸಿದ್ಧತೆ ನಡೆದಿದೆ.
ಸಾವಿರಾರು ಭಕ್ತರು ಬರುವ ಹಿನ್ನೆಲೆಯಲ್ಲಿ ಭಜರಂಗದಳ, ವಿಶ್ವ ಹಿಂದೂ ಪರಿಷತ್ ಸೇರಿದಂತೆ ಹಿಂದುತ್ವ ಸಂಘಟನೆಗಳ ಮುಖಂಡರು, ಕಾರ್ಯಕರ್ತರು ಭಾನುವಾರ ನಗರದ ಬಸ್ ನಿಲ್ದಾಣ ವೃತ್ತದಲ್ಲಿ ಬೃಹತ್ ಸ್ವಾಗತ ಕಮಾನು, ಕೇಸರಿ ಬಂಟಿಂಗ್, ಫ್ಲೆಕ್ಸ್ ಕಟ್ಟುವ ಮೂಲಕ ಇಡೀ ವೃತ್ತವನ್ನು ಕೇಸರಿಮಯಗೊಳಿಸಿದ್ದಾರೆ. ಶಿವ, ಹನುಮ, ನರಸಿಂಹಸ್ವಾಮಿಯ ಕಟೌಟ್ಗಳು, ಫ್ಲೆಕ್ಸ್ಗಳನ್ನು ಅಳವಡಿಸಲಾಗಿದೆ.
ಕಾರ್ಯಕರ್ತರು ಕಾಶಿ ವಿಶ್ವೇಶ್ವರಸ್ವಾಮಿಯ ದರ್ಶನಕ್ಕೆ ಬರುವ ಭಕ್ತರಿಗೆ ನೆರವಾಗಲು ಸಿದ್ಧಗೊಂಡಿದ್ದು, ಅರ್ಚಕ ಮಂಜುನಾಥ್ ದೀಕ್ಷೀತ್ ನೇತೃತ್ವದಲ್ಲಿ ವಿಶೇಷ ಅಲಂಕಾರ, ಪೂಜೆ ನಡೆಯಲಿದೆ.
ಅತ್ಯಂತ ಅದ್ದೂರಿ ಹಾಗೂ ಶ್ರದ್ಧಾ ಭಕ್ತಿಗಳಿಂದ ಆಚರಿಸುವ ಕಾಶಿ ವಿಶ್ವೇಶ್ವರ ಸ್ವಾಮಿಯ ಕಡೆ ಕಾರ್ತಿಕ ಸೋಮವಾರದ ಜಾತ್ರೆ ಕಾರ್ಯಕ್ರಮಗಳಿಗೆ ಚಾಲನೆ ನೀಡಲು ಬಜರಂಗದಳ, ವಿಹಿಂಪದ ರಾಜ್ಯ ಮತ್ತು ಜಿಲ್ಲಾ ಮುಖಂಡರು, ಮಾಜಿ ಸಂಸದ ಮುನಿಸ್ವಾಮಿ ಸೇರಿದಂತೆ ಹಲವರು ಪಾಲ್ಗೊಳ್ಳಲಿದ್ದಾರೆ.
ಮುಂಜಾನೆ 4 ಗಂಟೆಯಿಂದಲೇ ಉಚಿತ ಬಸ್ ಸಂಚಾರಕ್ಕೆ ಹಲವಾರು ದಾನಿಗಳು ಮುಂದೆ ಬಂದಿದ್ದು, ಭಕ್ತರಿಗೆ ಯಾವುದೇ ಸಮಸ್ಯೆಯಾಗದಂತೆ ಅಗತ್ಯ ಸಿದ್ಧತೆ ಮಾಡಿಕೊಂಡಿದ್ದಾರೆ. ಬಸ್ ನಿಲ್ದಾಣ ವೃತ್ತದಲ್ಲಿ ಪೆಂಡಾಲ್ ನಿರ್ಮಿಸಿದ್ದಾರೆ. ಪ್ರಸಾದ, ಕುಡಿಯುವ ನೀರು, ರಕ್ಷಣೆ ಸೇರಿದಂತೆ ಎಲ್ಲಾ ವ್ಯವಸ್ಥೆಗಳನ್ನು ಮಾಡಿಕೊಂಡಿದ್ದಾರೆ.
ಬಜರಂಗದಳದ ಬಾಲಾಜಿ, ಅಪ್ಪಿ ಆನಂದ್, ವಿಹಿಂಪ ಜಿಲ್ಲಾ ಕಾರ್ಯದರ್ಶಿ ಬಾಬು, ನಗರಾಧ್ಯಕ್ಷ ವಿಶ್ವನಾಥ್, ತಾಲ್ಲೂಕು ಸಂಚಾಲಕ ಶ್ರೀಧರ್, ವೆಂಕಟೇಶ್, ಕನಕೇಶ್, ಮುಖಂಡರಾದ ರವಿ, ಪವನ್, ವಿಶ್ವನಾಥ್, ವಿನಯ್, ಪೃಥ್ವಿ, ಲೋಕೇಶ್, ಸಾಯಿ ಸುಮನ್, ಸಾಯಿಮೌಳಿ, ಸಾಯಿಕುಮಾರ್, ಬದ್ರಿ, ಮಹೇಶ್, ಪ್ರವೀಣ್, ಮೌಳಿ, ಮಂಜು, ದೀಪು, ಲೋಹಿತ್, ಯಶವಂತ್, ಭರತ್, ವೆಂಕಟೇಶಬಾಬಾ, ಭವಾನಿ, ವೆಂಕಿ ಸಿದ್ಧತಾ ಕಾರ್ಯದಲ್ಲಿ ತೊಡಗಿದ್ದಾರೆ.
ಸಾವಿರಾರು ಭಕ್ತರು ಬರುವ ನಿರೀಕ್ಷೆ ಬಹೃತ್ ಸ್ವಾಗತ ಕಮಾನು, ಕಟೌಟ್ ಅಳವಡಿಕೆ ಅಂತರಗಂಗೆಯ ಕಾಶಿ ವಿಶ್ವೇಶ್ವರ ಸನ್ನಿಧಿಯಲ್ಲಿ ವಿವಿಧ ಕಾರ್ಯಕ್ರಮ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.