ಕೋಲಾರ: ಪ್ರಧಾನಿ ನರೇಂದ್ರ ಮೋದಿ ಅವರ ಕರೆಯಂತೆ ಕೊರೋನಾ ವೈರಸ್ ತಡೆಗಟ್ಟಲು ನಿರಂತರವಾಗಿ ಶ್ರಮಿಸುತ್ತಿರುವ ವೈದ್ಯರಿಗೆ ಹಾಗೂ ವೈದ್ಯಕೀಯ ಸಿಬ್ಬಂದಿಗೆ ಮನೆಯ ಮುಂದೆ ನಿಂತು ಸಾರ್ವಜನಿಕರು ಚಪ್ಪಾಳೆ ತಟ್ಟುವ ಮೂಲಕ ಕೃತಜ್ಞತೆ ಸಲ್ಲಿಸಿದರು.
ವಿಶ್ವವನ್ನೇ ಮಾರಕವಾಗಿ ಕಾಡುತ್ತಿರುವ ಕೊರೋನಾ ಮಾರಿಯ ವಿರುದ್ದ ಸಮರ ಸಾರಿರುವ ಸರ್ಕಾರ, ಅದಕ್ಕಾಗಿ ಜನರ ಸಹಕಾರ ಕೋರಿ ಭಾನುವಾರ ಕರೆ ನೀಡಿದ್ದ ಜನತಾ ಕರ್ಫ್ಯೂಗೆ ಅಭೂತಪೂರ್ವ ಬೆಂಬಲ ವ್ಯಕ್ತವಾಯಿತು. ಸಂಜೆ 5 ಗಂಟೆಯಾಗುವುದಕ್ಕೆ ಕಾದಿದ್ದ ನಾಗರಿಕರುಮನೆ ಮುಂಭಾಗಕ್ಕೆ ಬಂದು ಚಪ್ಪಾಳೆ ತಟ್ಟುವ ಮೂಲಕ ಮೋದಿ ಕರೆಗೆ ಓಗೊಟ್ಟು ದೇಶಪ್ರೇಮ ಮೆರೆದರು.
ನಗರದ ವಿವಿಧ ಬಡಾವಣೆಗಳ ನಿವಾಸಿಗಳು ಮನೆಯ ಹೊರಗೂ ಬಾರದ ಜನಸಂಜೆ 5 ಗಂಟೆಗೆ ಸ್ವಯಂಪ್ರೇರಿತರಾಗಿ ಹೊರ ಬಂದು ಮೋದಿ ಆದೇಶ ಪಾಲಿಸಿದರು.
ನಿವೃತ್ತ ಪೋಸ್ಟ್ ಮಾಸ್ಟರ್ ಶ್ರೀರಾಮಪ್ಪ ಮಾತನಾಡಿ, ‘ಇಡೀ ದೇಶವೇ ಕೊರೋನಾವೈರಸ್ವಿರುದ್ದ ಹೋರಾಟ ನಡೆಸುತ್ತಿದೆ. ಪ್ರಧಾನಿ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಕರೆ ನೀಡಿರುವ ಈ ಕರ್ಫ್ಯೂಗೆ ಈ ದೇಶದ ಪ್ರಜೆಯಾಗಿ ಪ್ರತಿಯೊಬ್ಬರೂ ಗೌರವ ನೀಡಬೇಕು’ ಎಂದು ಸಲಹೆ ನೀಡಿದರು.
ವೈರಸ್ ಸೋಂಕಿಗೆ ಒಳಗಾಗದಂತೆ ವೈದ್ಯರು ಸಾರ್ವಜನಿಕರಿಗೆ ಜಾಗೃತಿ ಮೂಡಿಸುತ್ತಿದ್ದಾರೆ, ವೈರಸ್ ಸೋಂಕಿನ ಲಕ್ಷಣಗಳು ಕಾಣಿಸಿಕೊಂಡ ಕೂಡಲೇ ವೈದ್ಯರ ಬಳಿ ಚಿಕಿತ್ಸೆ ಪಡೆದುಕೊಳ್ಳಬೇಕು, ಹೊರ ದೇಶಗಳಿಂದ ಬಂದ ವ್ಯಕ್ತಿಗಳಿಂದ ಸಾಮಾಜಿಕ ಹಂತರ ಕಾಯ್ದುಕೊಳ್ಳಬೇಕು, ಬಡಾವಣೆಗಳಲ್ಲಿ ಸ್ವಚ್ಛತೆ ಕಾಪಾಡಿಕೊಳ್ಳಬೇಕು’ ಎಂದು ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.