ಬಂಗಾರಪೇಟೆ ತಾಲ್ಲೂಕಿನ ಸಾಕರಸನಹಳ್ಳಿ ಗ್ರಾಮದಲ್ಲಿ ವೀಳ್ಯದೆಲೆ ತೋಟದಲ್ಲಿ ಬಳ್ಳಿ ಕಟ್ಟುತ್ತಿರುವ ರೈತ
ಬಂಗಾರಪೇಟೆ: ಗ್ರಾಮೀಣ ಭಾಗದ ರೈತರ ಪ್ರಮುಖ ಆದಾಯ ಮೂಲವಾಗಿರುವ ವೀಳ್ಯದೆಲೆ ದರವು ಭಾರಿ ಪ್ರಮಾಣದಲ್ಲಿ ಕುಸಿತ ಕಂಡಿದೆ. ಇದರಿಂದಾಗಿ ರೈತರು ಸಂಕಷ್ಟಕ್ಕೀಡಾಗಿದ್ದಾರೆ.
ಉತ್ತಮ ಮಳೆ ಮತ್ತು ತೇವಾಂಶ ಹೆಚ್ಚಳದಿಂದ ಉತ್ತಮ ಫಸಲು ಕೈಸೇರಿದೆ. ಆದರೆ, ಬೆಲೆ ಪಾತಾಳಕ್ಕೆ ಇಳಿದಿದ್ದರಿಂದ ರೈತರು ನಷ್ಟದ ಸುಳಿಗೆ ಸಿಲುಕುವಂತಾಗಿದೆ.
ತಾಲ್ಲೂಕಿನಲ್ಲಿ 260 ಹೆಕ್ಟೇರ್ ಪ್ರದೇಶದಲ್ಲಿ ವೀಳ್ಯದೆಲೆ ಬೆಳೆಯಲಾಗಿದೆ. ಗ್ರಾಮೀಣ ಪ್ರದೇಶದ ನೂರಾರು ರೈತರು ಈ ಬೆಳೆಯನ್ನೇ ಅವಲಂಬಿಸಿದ್ದಾರೆ. ಮೂರು ತಿಂಗಳಿಂದ ಇಳಿ ಮುಖವಾಗಿರುವ ವೀಳ್ಯದೆಲೆ ಬೆಲೆಯು ಏರಿಕೆ ಹಾದಿಗೆ ಮರಳಲಿದೆ ಎಂಬ ಆಸೆ ರೈತರಲ್ಲಿ ಚಿಗುರೊಡೆದಿತ್ತು. ಆದರೆ, ಈ ಲಕ್ಷಣಗಳೇ ಕಾಣುತ್ತಿಲ್ಲವಾದ್ದರಿಂದ ರೈತರು ಆತಂಕಗೊಂಡಿದ್ದಾರೆ.
ಫೆಬ್ರುವರಿ ಮತ್ತು ಮಾರ್ಚ್ನಲ್ಲಿ 12,000 ವೀಳ್ಯದೆಲೆಯ ಒಂದು ಹೊರೆಗೆ ಸರಾಸರಿ ₹14,000ಕ್ಕೆ ಮಾರಾಟವಾಗುತ್ತಿತ್ತು. ಮೂಡಣ ದಿಕ್ಕಿನಿಂದ ಗಾಳಿ ಬೀಸುತ್ತಿದ್ದಾಗ ವೀಳ್ಯದೆಲೆ ಇಳುವರಿ ಕುಂಠಿತವಾಗುತ್ತದೆ. ಮಾರುಕಟ್ಟೆಯಲ್ಲಿ ಆವಕ ಕಡಿಮೆಯಾಗಿ ಬೆಲೆ ಹೆಚ್ಚಾಗಿತ್ತು. ಏಪ್ರಿಲ್ ಬಳಿಕ ಮಳೆ ಆರಂಭವಾಗಿದ್ದರಿಂದ ವೀಳ್ಯದೆಲೆಗೆ ಪೂರಕ ವಾತಾವರಣ ನಿರ್ಮಾಣವಾಗಿದ್ದು, ಬೆಲೆ ಪಾಳತಕ್ಕೆ ಕುಸಿಯತೊಡಗಿತು. ಜೂನ್ನಲ್ಲಿ ಇದು ಕನಿಷ್ಠಕ್ಕೆ ತಲುಪಿದ್ದು, ವೀಳ್ಯದೆಲೆಯ ಪ್ರತಿ ಹೊರೆಯು ಮಾರುಕಟ್ಟೆಯಲ್ಲಿ ಕೇವಲ ₹2,500 ಬಿಕರಿಯಾಗುತ್ತಿದೆ.
ಪ್ರತಿ ವರ್ಷ ಜೂನ್ ಬಳಿಕ ದರ ಕಡಿಮೆಯಾಗುತ್ತಿತ್ತು. ಮುಂಗಾರು ಪೂರ್ವ ಮಳೆ ಉತ್ತಮವಾಗಿ ಸುರಿದಿದ್ದರಿಂದ ವೀಳ್ಯದೆಲೆ ಇಳುವರಿ ಹೆಚ್ಚಿತು. ಇದರಿಂದ ಮಾರುಕಟ್ಟೆಯಲ್ಲಿ ದರ ಕಡಿಮೆಯಾಗಿದೆ. ವೀಳ್ಯದೆಲೆ ಬೆಲೆ ಹೀಗೆ ಕುಸಿಯುತ್ತಿದ್ದರೆ, ವೀಳ್ಯದೆಲೆ ಬೆಳೆಯಿಂದಲೇ ವಿಮುಖಬೇಕಾಗುತ್ತದೆ ಎಂದು ಪೋಲೇನಹಳ್ಳಿ ರೈತ ವೆಂಕಟೇಶ ಅಳಲು ತೋಡಿಕೊಂಡರು.
ವೀಳ್ಯದೆಲೆ ಬಳ್ಳಿಯ ಪೋಷಣೆಗೆ ಹೆಚ್ಚು ನಿಗಾ ವಹಿಸಬೇಕು. ನಿತ್ಯವೂ ತೋಟದಲ್ಲೇ ಉಳಿದುಕೊಂಡು, ಬಳ್ಳಿಯನ್ನು ಆರೈಕೆ ಮಾಡಬೇಕು. ಕಳೆ ತೆಗೆಯುವುದು, ಬಳ್ಳಿ ಕಟ್ಟುವುದು, ನೀರು ಹಾಯಿಸುವ ಕೆಲಸವಂತೂ ಪ್ರತಿದಿನ ಇದ್ದೇ ಇರುತ್ತದೆ. ವೀಳ್ಯದೆಲೆ ತೋಟದಲ್ಲಿ ಕೆಲಸ ಮಾಡುವ ಕೃಷಿ ಕಾರ್ಮಿಕರಿಗೆ ದಿನವೊಂದಕ್ಕೆ ₹600 ಕೂಲಿ ನೀಡಬೇಕು. ಮಾರುಕಟ್ಟೆಯಲ್ಲಿ ಸಿಗುವ ದರದಲ್ಲಿ ನಿರ್ವಹಣಾ ವೆಚ್ಚ ಕೂಡ ಸಿಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸುತ್ತಾರೆ ಬೆಳೆಗಾರ ಮುನಿಯಪ್ಪ.
ತಾಲ್ಲೂಕಿನ ಬೆಳೆಯುವ ವೀಳ್ಯದೆಲೆಯನ್ನು ಜನರು ಹೆಚ್ಚು ಇಷ್ಟಪಡುತ್ತಾರೆ. ಪೂಜೆಗೂ ಈ ಎಲೆ ಬಳಕೆಯಾಗುತ್ತದೆ. ಶ್ರಾವಣದ ಬಳಿಕ ಸಾಲುಸಾಲು ಹಬ್ಬಗಳ ಆರಂಭವಾಗಲಿದ್ದು, ಆಗ ಮತ್ತೆ ವೀಳ್ಯದೆಲೆ ಬೆಲೆ ಕುದುರಬಹುದು ಎಂದು ಬೆಳೆಗಾರ ಬಸಪ್ಪ ಆಶಿಸುತ್ತಾರೆ.
ತಮಿಳುನಾಡು, ಆಂಧ್ರಕ್ಕೂ ರವಾನೆ
ತಾಲ್ಲೂಕಿನ ಕಾಮಸಮುದ್ರ ಮತ್ತು ಬೂದಿಕೋಟೆ ಹೋಬಳಿಯ ವ್ಯಾಪ್ತಿಯ ಗ್ರಾಮಗಳಲ್ಲಿ ವೀಳ್ಯದೆಲೆ ಪ್ರಮುಖ ವಾಣಿಜ್ಯ ಬೆಳೆ. ಇತ್ತೀಚಿನ ದಿನಗಳಲ್ಲಿ ಹೈನುಗಾರಿಕೆ ಜೊತೆಗೆ, ರೈತರು ವೀಳ್ಯದೆಲೆಯನ್ನೂ ಬೆಳೆಯುತ್ತಿದ್ದಾರೆ. ಹೀಗೆ ಬೆಳೆದ ವೀಳ್ಯದೆಲೆಯನ್ನು ರೈತರು ಕಾಮಸಮುದ್ರ, ಬಂಗಾರಪೇಟೆ, ಬೂದಿಕೋಟೆ ಅಷ್ಟೇ ಅಲ್ಲದೆ, ಆಂಧ್ರಪ್ರದೇಶ, ತಮಿಳುನಾಡಿಗೂ ರಫ್ತು ಮಾಡುತ್ತಾರೆ. ಅಲ್ಲದೆ, ಬೆಂಗಳೂರು, ಮಂಗಳೂರು ಸೇರಿ ರಾಜ್ಯದ ಹಲವೆಡೆ ರವಾನಿಸುತ್ತಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.