
ಅಸ್ಸಾಂ ಮೂಲದ ದಂಪತಿ 15 ದಿನಗಳ ಹಿಂದೆಯಷ್ಟೇ ಕೋಳಿಫಾರಂಗೆ ಕೂಲಿಗೆ ಬಂದಿದ್ದ ಪತಿ | ಪತ್ನಿ ಶ್ರೀನಿವಾಸಪುರ ತಾಲ್ಲೂಕಿನ ರಾಯಲ್ಪಾಡು ಬಳಿಯ ಉಪ್ಪಾರಪಲ್ಲಿ ಗ್ರಾಮ
ಶ್ರೀನಿವಾಸಪುರ: ತಾಲ್ಲೂಕಿನ ರಾಯಲ್ಪಾಡು ಬಳಿ ಉಪ್ಪಾರಪಲ್ಲಿ ಹೊರವಲಯದ ಕೋಳಿಫಾರಂನಲ್ಲಿ ಏಳು ದಿನಗಳ ಹೆಣ್ಣು ಕೂಸು ಪಕ್ಕದಲ್ಲಿ ಮಲಗಿರುವಾಗಲೇ ದಂಪತಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.
ಅಸ್ಸಾಂ ಮೂಲದ ಮಹಬೂಬ್ ರೆಹಮಾನ್ (30) ಹಾಗೂ ಫರೀದಾ ಖುರಮ್ (20) ದಂಪತಿ ಆತ್ಮಹತ್ಯೆ ಮಾಡಿಕೊಂಡವರು. ಇವರು 15 ದಿನಗಳ ಹಿಂದೆಯಷ್ಟೇ ಕೋಳಿಫಾರಂಗೆ ಕೂಲಿಗೆಂದು ಬಂದಿದ್ದರು. ಕೋಳಿಫಾರಂ ಆವರಣದಲ್ಲಿ ಇರುವ ಮನೆ ಬಾಗಿಲಿನ ಚಿಲುಕವನ್ನು ಒಳಗಡೆಯಿಂದ ಹಾಕಿಕೊಂಡು ಈ ಕೃತ್ಯ ಎಸಗಿಕೊಂಡಿದ್ದಾರೆ.
ಭಾನುವಾರ ಬೆಳಗ್ಗೆ 11.30ರ ಸುಮಾರಿಗೆ ಪೊಲೀಸರು ಸ್ಥಳಕ್ಕೆ ಧಾವಿಸಿ ಬಾಗಿಲು ಮುರಿದು ಪರಿಶೀಲಿಸಿದ ವೇಳೆ ಈ ಪ್ರಕರಣ ಗೊತ್ತಾಗಿದೆ.
ಮೃತಪಟ್ಟ ತಂದೆ–ತಾಯಿ ಮಧ್ಯೆ ಮಲಗಿದ್ದ ಮಗು ಪಿಳಿಪಿಳಿ ಕಣ್ಣು ಬಿಡುತ್ತಾ ಅಳುತ್ತಿತ್ತು. ಈ ದೃಶ್ಯ ನೋಡುಗರ ಕಣ್ಣಂಚಿನಲ್ಲಿ ನೀರು ತರಿಸಿತು. ಪೋಷಕರ ಆತ್ಮಹತ್ಯೆಯಿಂದ ಮಗು ಅನಾಥವಾಗಿದೆ.
ಏಳು ದಿನಗಳ ಮಗುವನ್ನು ಆಸ್ಪತ್ರೆಗೆ ಸ್ಥಳಾಂತರಿಸಿದ್ದಾರೆ. ಹಸುಗೂಸು ಆರೋಗ್ಯವಾಗಿರುವ ಬಗ್ಗೆ ವೈದ್ಯರು ಮಾಹಿತಿ ನೀಡಿದ್ದಾರೆ. ಪೊಲೀಸರು ಮೃತರ ಕುಟುಂಬಕ್ಕೆ ಮಾಹಿತಿ ನೀಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.