ಶ್ರೀನಿವಾಸಪುರ: ‘ಗ್ರಾಮೀಣ ಮಹಿಳೆಯರಲ್ಲಿ ಸ್ತನ ಕ್ಯಾನ್ಸರ್ ಬಗ್ಗೆ ಅರಿವು ಮೂಡಿಸಬೇಕಾದ ಅಗತ್ಯವಿದೆ. ವಿದ್ಯಾವಂತ ಸಮುದಾಯ ಹಾಗೂ ಸ್ವಯಂ ಸೇವಾ ಸಂಸ್ಥೆಗಳು ಈ ಕಾರ್ಯ ಮಾಡಬೇಕು’ ಎಂದು ಹೋಪ್ ಫಾರ್ ಕ್ಯಾನ್ಸರ್ ಪೇಷಂಟ್ಸ್ ಸ್ವಯಂ ಸೇವಾ ಸಂಸ್ಥೆಯ ಮ್ಯಾನೇಜಿಂಗ್ ಟ್ರಸ್ಟಿ ಸೀಮಾ ಸಿಂಗ್ ಹೇಳಿದರು.
ತಾಲ್ಲೂಕಿನ ರಾಯಲ್ಪಾಡ್ ಸಮೀಪದ ನೀಲ್ಬಾಗ್ ಶಾಲೆಯಲ್ಲಿ ಎಚ್ಸಿಪಿ ಸ್ವಯಂ ಸೇವಾ ಸಂಸ್ಥೆಯಿಂದ ಮಂಗಳವಾರ ಏರ್ಪಡಿಸಿದ್ದ ಕ್ಯಾನ್ಸರ್ ತಪಾಸಣಾ ಶಿಬಿರ ಉದ್ಘಾಟಿಸಿ ಮಾತನಾಡಿ, ಭಾರತದಲ್ಲಿ ಪ್ರತಿ 4 ನಿಮಿಷಕ್ಕೆ ಒಂದು ಸ್ತನ ಕ್ಯಾನ್ಸರ್ ಪ್ರಕರಣ ಪತ್ತೆಯಾಗುತ್ತಿದೆ. ಪ್ರತಿ 13 ನಿಮಿಷಗಳಿಗೆ ಒಬ್ಬ ಕ್ಯಾನ್ಸರ್ ರೋಗಿ ಸಾಯುತ್ತಾರೆ ಎಂದು ಹೇಳಿದರು.
ಗ್ರಾಮೀಣ ಮಹಿಳೆಯರು ಸ್ತನ ಕ್ಯಾನ್ಸರ್ ಬಗ್ಗೆ ಹೇಳಿಕೊಳ್ಳಲು ನಾಚಿಕೆ ಪಟ್ಟುಕೊಳ್ಳುತ್ತಾರೆ. ಚಿಕಿತ್ಸೆಗೆ ತಗಲುವ ಅಧಿಕ ವೆಚ್ಚವೂ ರೋಗವನ್ನು ಮುಚ್ಚಿಡುವಂತೆ ಮಾಡುತ್ತದೆ. ಇಂಥ ಸಂದರ್ಭದಲ್ಲಿ ರೋಗಿ ಸಾವನ್ನಪ್ಪುತ್ತಾಳೆ. ಈ ಪರಿಸ್ಥಿತಿ ಬದಲಾಗಬೇಕಾದರೆ ಮಹಿಳೆಯರಲ್ಲಿ ಜಾಗೃತಿ ಮೂಡಿಸಬೇಕು. ಪ್ರಾರಂಭದ ಹಂತದಲ್ಲಿ ಚಿಕಿತ್ಸೆ ಕೊಡಿಸಿದಲ್ಲಿ ಅದು ಸುಲಭವಾಗಿ ವಾಸಿಯಾಗುತ್ತದೆ. ಕೊನೆ ಹಂತದಲ್ಲಿ ಆಸ್ಪತ್ರೆ ಬಾಗಿಲು ತುಳಿದರೆ ಜೀವ ಉಳಿಸಿಕೊಳ್ಳುವುದು ಕಷ್ಟವಾಗುತ್ತದೆ ಎಂದು ಹೇಳಿದರು.
ಸಂಸ್ಥೆಯು ಉಚಿತವಾಗಿ ಕ್ಯಾನ್ಸರ್ ತಪಾಸಣೆ ಮಾಡಿ ಅರಿವು ಮೂಡಿಸುವ ಕಾರ್ಯದಲ್ಲಿ ತೊಡಗಿದೆ. ಈಗಾಗಲೇ, ದೇಶದಾದ್ಯಂತ ಹಲವು ಶಿಬಿರ ಏರ್ಪಡಿಸಿ ತಪಾಸಣೆ ನಡೆಸಿದೆ. ತಿಳಿವಳಿಕೆ ನೀಡಿ ಸ್ತನ ಕ್ಯಾನ್ಸರ್ನಿಂದ ಪಾರು ಮಾಡಿದೆ. ಉಚಿತ ಕೌನ್ಸೆಲಿಂಗ್ ನಡೆಸುವುದರ ಮೂಲಕ ರೋಗಿಗಳಿಗೆ ಉಚಿತ ಊಟ, ವಸತಿ ನೀಡಲಾಗುವುದು. ಬಡ ರೋಗಿಗಳ ಚಿಕಿತ್ಸೆಗೆ ಅಗತ್ಯ ನೆರವು ನೀಡಲಾಗುವುದು. ಅಗತ್ಯ ಇರುವವರು ಮೊಬೈಲ್ 98117 63202, 72598 11005 ಸಂಪರ್ಕಿಸಬಹುದು ಎಂದರು.
ಶಿಬಿರದಲ್ಲಿ ಗ್ರಾಮೀಣ ಪ್ರದೇಶದ 36 ಮಹಿಳೆಯರಿಗೆ ಸ್ತನ ಕ್ಯಾನ್ಸರ್ ತಪಾಸಣೆ ಮಾಡಲಾಯಿತು. ಅವರಿಗೆ ಅಗತ್ಯ ತಿಳಿವಳಿಕೆ ನೀಡಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.