ಬಂಗಾರಪೇಟೆ: ಕಳೆದ ಎರಡು ತಿಂಗಳ ಹಿಂದೆ ಕೆರೆಯಕುಂಟೆಯಲ್ಲಿ ಆಕಸ್ಮಿಕವಾಗಿ ಕಾಲು ಜಾರಿ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದ ಬಾಲಕಿಯ ಮೃತದೇಹ ಹೊರ ತೆಗೆದು ಶವಪರೀಕ್ಷೆ ನಡೆಸಿದ ಘಟನೆ ಮಂಗಳವಾರ ಬಾವರಹಳ್ಳಿಯಲ್ಲಿ ನಡೆದಿದೆ.
ಬಾವರಹಳ್ಳಿಯ ಮಂಜುನಾಥ ಹಾಗೂ ಸವಿತಾ ದಂಪತಿಯ ಪುತ್ರಿ ಮೀನಾಕ್ಷಿ (11) 4ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಳು. ಮೇ 4ರಂದು ಗ್ರಾಮದ ಕೆರೆಯಕುಂಟೆಯ ಬಳಿ ಆಟವಾಡುತ್ತಿದ್ದಾಗ ಆಕಸ್ಮಿಕವಾಗಿ ನೀರಿಗೆ ಬಿದ್ದು ಮೃತಪಟ್ಟಿದ್ದಳು. ನಂತರ ಪೋಷಕರು ಮೃತ ದೇಹವನ್ನು ಯಾರಿಗೂ ತಿಳಿಯದೆ ತಮ್ಮ ಜಮೀನಿನಲ್ಲಿ ಅಂತ್ಯಸಂಸ್ಕಾರ ನೆರವೇರಿಸಿದ್ದರು.
ಘಟನೆ ನಡೆದ ಮೂರು ತಿಂಗಳ ಬಳಿಕ ಗ್ರಾಮಸ್ಥರು ಪೊಲೀಸ್ ಕಂಟ್ರೋಲ್ ರೂಂಗೆ ಬಾಲಕಿ ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿ ಶವ ಹೊರ ತೆಗೆಸಿ ಶವ ಪರೀಕ್ಷೆಗೆ ಮನವಿ ಮಾಡಿದ್ದರು. ಈ ಹಿನ್ನೆಲೆ ಮಂಗಳವಾರ ತಹಶೀಲ್ದಾರ್ ಎಸ್.ವೆಂಕಟೇಶಪ್ಪ ಸಮ್ಮುಖದಲ್ಲಿ ಪೊಲೀಸರು ಮೃತದೇಹವನ್ನು ಹೊರತೆಗೆದು ಶವ ಪರೀಕ್ಷೆ ನಡೆಸಿದರು.
ಈ ಕಾರ್ಯಾಚರಣೆ ವೇಳೆ ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಿದ್ದರು. ಮೃತ ಬಾಲಕಿಯ ಪೋಷಕರನ್ನು ಸ್ಥಳದಿಂದ ದೂರ ಇರಿಸಿದ್ದರು. ಗ್ರಾಮಸ್ಥರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.