
ಬಂಗಾರಪೇಟೆ: ತಾಲ್ಲೂಕಿನ ಮಾಗೊಂದಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿರುವ ರಾಮಚಂದ್ರಪುರದ ವಸತಿ ರಹಿತರ ವಸತಿ ಸೌಕರ್ಯಕ್ಕಾಗಿ ಮೀಸಲಿಟ್ಟಿದ್ದ ಸರ್ಕಾರಿ ಗೋಮಾಳವನ್ನು ಕೆಲವರು ಒತ್ತುವರಿ ಮಾಡಿಕೊಂಡು, ಶೆಡ್ ನಿರ್ಮಿಸಲು ಮುಂದಾಗಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದರು.
ರಾಮಚಂದ್ರಪುರ ಗ್ರಾಮದ ಸರ್ವೆ ನಂಬರ್ 20ರಲ್ಲಿ 8.16 ಎಕರೆ ಸರ್ಕಾರಿ ಗೋಮಾಳ ಜಾಗವಿದೆ. ಈ ಪೈಕಿ 4.20 ಎಕರೆ ಜಮೀನುನ್ನು ನಾಲ್ವರಿಗೆ ಹಂಚಿಕೆ ಮಾಡಲಾಗಿದೆ. ಉಳಿದ 3.36 ಎಕರೆಯನ್ನು ಪಂಚಾಯಿತಿ ವ್ಯಾಪ್ತಿಯಲ್ಲಿ ಮನೆ ಇಲ್ಲದವರಿಗೆ ಹಂಚಿಕೆ ಮಾಡಲು ಕಾಯ್ದಿರಿಸಲಾಗಿದೆ. ಈ ಜಾಗವನ್ನು ಕೆಲವರು ಏಕಾಏಕಿ ಒತ್ತುವರಿ ಮಾಡಿಕೊಂಡು ಸಮತಟ್ಟು ಮಾಡಿ, ಶೆಡ್ಗಳ ನಿರ್ಮಾಣಕ್ಕೆ ಮುಂದಾಗಿದ್ದರು. ಈ ವಿಷಯ ತಿಳಿದು ಸ್ಥಳಕ್ಕೆ ಬಂದ ಪಂಚಾಯಿತಿ ಅಧಿಕಾರಿಗಳು, ಕಾಮಗಾರಿ ನಡೆಸದಂತೆ ಎಚ್ಚರಿಕೆ ನೀಡಿದರು.
ಗ್ರಾಮ ಪಂಚಾಯಿತಿ ಸದಸ್ಯ ಕುಪೇಂದ್ರಕುಮಾರ್ ಮಾತನಾಡಿ, ತಹಶೀಲ್ದಾರ್, ಕೆಲವು ಅಧಿಕಾರಿಗಳ ಕುಮ್ಮಕ್ಕಿನಿಂದ ಸ್ಥಳೀಯರು ಭೂಮಿ ಒತ್ತುವರಿ ಮಾಡಿಕೊಳ್ಳುತ್ತಿದ್ದಾರೆ. ಈ ಜಮೀನಿನ ಯಾವುದೇ ದಾಖಲಾತಿ ಹೊಂದಿರದಿದ್ದರೂ, ಐವರು ಪಂಚಾಯಿತಿಯಿಂದ ಇ–ಸ್ವತ್ತು ಮಾಡಿಸಿಕೊಂಡು ನಿವೇಶನ ಮಾಡಿಕೊಂಡಿದ್ದಾರೆ. ಈ ಕುರಿತು ಗೊತ್ತಿದ್ದರೂ, ಕಂದಾಯ ಅಧಿಕಾರಿಗಳು ತಟಸ್ಥ ಧೋರಣೆ ಅನುಸರಿಸುತ್ತಿದ್ದಾರೆ ಎಂದು ದೂರಿದರು.
ವಸತಿ ಉದ್ದೇಶಕ್ಕೆ ಸರ್ಕಾರ ಮೀಸಲಿಟ್ಟಿರುವ ಜಾಗವನ್ನು ಒತ್ತುವರಿ ಮಾಡಿಕೊಳ್ಳುವುದು ಕಾನೂನುಬಾಹಿರ. ಭೂ ಕಬಳಿಕೆ ಅಪರಾಧವಾಗಿದ್ದು ಒತ್ತುವರಿ ತೆರವಿದಗೆ ಸೂಕ್ತ ಕ್ರಮ ಕೈಗೊಳ್ಳುತ್ತೇವೆ.– ಕೆ.ಎನ್.ಸುಜಾತ, ತಹಶೀಲ್ದಾರ್
ವಸತಿ ಉದ್ದೇಶದ ಜಾಗ ಒತ್ತುವರಿ ಮಾಡಿಕೊಂಡಿರುವುದು ಕರ್ನಾಟಕ ಭೂ ಕಬಳಿಕೆ ನಿಷೇಧ ಕಾಯ್ದೆ ಪ್ರಕಾರ ಅಪರಾಧವಾಗಿದೆ. ಭೂಗಳ್ಳರ ವಿರುದ್ಧ ದೂರ ನೀಡುತ್ತೇವೆ.– ಶಂಕರ್, ಪಿಡಿಒ ಮಾಗೊಂದಿ ಗ್ರಾ. ಪಂ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.