ADVERTISEMENT

ಕೆಜಿಎಫ್: ಅಪಘಾತ ಹೆಚ್ಚಿಸುತ್ತಿವೆ ಬ್ಯಾರಿಕೇಡ್

​ಪ್ರಜಾವಾಣಿ ವಾರ್ತೆ
Published 7 ಜೂನ್ 2020, 16:31 IST
Last Updated 7 ಜೂನ್ 2020, 16:31 IST
ಕೆಜಿಎಫ್ ಬೆಮಲ್ ನಗರದಲ್ಲಿ ಪೊಲೀಸರು ಹಾಕಿರುವ ಬ್ಯಾರಿಕೇಡ್ ರಸ್ತೆಯಲ್ಲಿಯೇ ಮಗುಚಿಕೊಂಡು ಬಿದ್ದಿದೆ
ಕೆಜಿಎಫ್ ಬೆಮಲ್ ನಗರದಲ್ಲಿ ಪೊಲೀಸರು ಹಾಕಿರುವ ಬ್ಯಾರಿಕೇಡ್ ರಸ್ತೆಯಲ್ಲಿಯೇ ಮಗುಚಿಕೊಂಡು ಬಿದ್ದಿದೆ   

ಕೆಜಿಎಫ್: ಸಂಚಾರಿ ನಿಯಮ ಉಲ್ಲಂಘನೆಗೆ ನಿಯಂತ್ರಣ ಹಾಕುವ ಬ್ಯಾರಿಕೇಡ್‌ಗಳು ಅಪಘಾತಕ್ಕೆ ಕಾರಣವಾಗುತ್ತಿವೆ.

ಬಂಗಾರಪೇಟೆ ಕಡೆಯಿಂದ ಕೆಜಿಎಫ್ ಕಡೆಗೆ ಬರುವಾಗ ಬೆಮಲ್‌ನಲ್ಲಿ ಸ್ವಾಗತ ಕಮಾನು ಸಿಗುತ್ತದೆ. ಅದಕ್ಕೆ ಮುನ್ನ ರಸ್ತೆ ಇಳಿಜಾರು ಇರುವುದರಿಂದ ಅಪಘಾತ ತಪ್ಪಿಸಲು ಬೆಮಲ್ ಪೊಲೀಸರು ಕಬ್ಬಿಣದ ಬ್ಯಾರಿಕೇಡ್ ಹಾಕಿದ್ದಾರೆ. ಆದರೆ, ಬ್ಯಾರಿಕೇಡ್ ಅಪಘಾತಗಳನ್ನು ತಪ್ಪಿಸುವ ಬದಲು ಹೆಚ್ಚಿಸುತ್ತಿವೆ.

ಬೆಮಲ್ ನಗರದಿಂದ ಬರುವ ರಸ್ತೆಯೂ ಇಳಿಜಾರಿನಲ್ಲಿದೆ. ದಾಸರ ಹೊಸಹಳ್ಳಿಯಿಂದ ಬರುವ ರಸ್ತೆಯೂ ಇಳಿಮುಖವಾಗಿದೆ. ಎರಡೂ ಕೇಂದ್ರಗಳು ಸೇರುವ ಜಾಗದಲ್ಲಿ ಪೊಲೀಸರು ಬ್ಯಾರಿಕೇಡ್ ಅಳವಡಿಸಿದ್ದಾರೆ. ವೇಗವಾಗಿ ಬರುವ ವಾಹನಗಳು ‘ಜಡ್’ ಚಿಹ್ನೆಯಲ್ಲಿ ಸಾಗಬೇಕಾಗಿದೆ. ಇದೇ ಅಪಘಾತಕ್ಕೆ ಕಾರಣವಾಗುತ್ತಿದೆ. ಅಲ್ಲದೆ ಬ್ಯಾರಿಕೇಡ್ ಸಮರ್ಪಕವಾಗಿ ನಿಲ್ಲಲು ಸೈಜ್ ಕಲ್ಲುಗಳನ್ನು ಇಡಲಾಗಿದೆ. ಜಡ್ ಚಿಹ್ನೆಯಲ್ಲಿ ಸಾಗುವಾಗ ಅಕಸ್ಮಾತ್ ಬ್ಯಾರಿಕೇಡ್‌ ಡಿಕ್ಕಿ ಹೊಡೆದರೆ, ದ್ವಿಚಕ್ರ ವಾಹನ ಚಾಲಕರು ನೇರವಾಗಿ
ಸೈಜ್ ಕಲ್ಲುಗಳ ಮೇಲೆ ಬೀಳುತ್ತಾರೆ. ಇದರಿಂದ ಅಪಘಾತದ ತೀವ್ರತೆ ಹೆಚ್ಚಾಗುತ್ತದೆ.

ADVERTISEMENT

ಬ್ಯಾರಿಕೇಡ್‌ಗಳಿಗೆ ಪ್ರತಿಫಲನ ಸ್ಟಿಕ್ಕರ್ ಅಂಟಿಸಿಲ್ಲ. ವಾಹನಗಳು ಬ್ಯಾರಿಕೇಡ್‌ ತಗುಲಿಸಿಕೊಂಡು ಹೋಗುವುದರಿಂದ ಅವು ಕೆಳಗೆ ಬೀಳುತ್ತಲೇ ಇರುತ್ತವೆ. ಎಷ್ಟು ದಿನವಾದರೂ ಅದನ್ನು ಮೇಲೆತ್ತಲು ಇಲಾಖೆಗೆ ಸಮಯಾವಕಾಶ ಇರುವುದಿಲ್ಲ ಎಂದು ದೂರುತ್ತಾರೆ ಸಾರ್ವಜನಿಕರೊಬ್ಬರು.

ರಸ್ತೆ ಸುರಕ್ಷಾ ನಿಯಮಗಳನ್ನು ಪಾಲಿಸಿ ಎಂದು ಹೇಳುವ ಪೊಲೀಸ್ ಇಲಾಖೆಯೇ ತ್ಯಾಜ್ಯಕ್ಕೆ ಹೋಗಬೇಕಾದ ಬ್ಯಾರಿಕೇಡನ್ನು ರಸ್ತೆಯಲ್ಲಿ ನಿಲ್ಲಿಸಿ, ವಾಹನ ಸವಾರರ ಜೀವನದ ಜತೆ ಚೆಲ್ಲಾಟವಾಡುವುದು ಎಷ್ಟು ಸರಿ ಎಂದು ಸಾರ್ವಜನಿಕರು ಪ್ರಶ್ನಿಸುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.