ADVERTISEMENT

ಕೆಜಿಎಫ್‌: ಅಸ್ತಿತ್ವ ಕಳೆದುಕೊಂಡ ಬಿಜಿಎಂಎಲ್ ಅಂಡರ್‌ಪಾಸ್‌

ರಸ್ತೆ ವಿಸ್ತರಣೆಗಾಗಿ ಶತಮಾನ ಕಂಡ ಕೆಳಸೇತುವೆ ತೆರವು

​ಪ್ರಜಾವಾಣಿ ವಾರ್ತೆ
Published 21 ಫೆಬ್ರುವರಿ 2026, 7:59 IST
Last Updated 21 ಫೆಬ್ರುವರಿ 2026, 7:59 IST
ಕೆಜಿಎಫ್‌ ಫೈಲೈಟ್ಸ್‌ ವೃತ್ತದ ಬಳಿ ಇರುವ ಬಿಜಿಎಂಎಲ್‌ ಕಮಾನು ಅಂಡರ್‌ಪಾಸ್‌
ಕೆಜಿಎಫ್‌ ಫೈಲೈಟ್ಸ್‌ ವೃತ್ತದ ಬಳಿ ಇರುವ ಬಿಜಿಎಂಎಲ್‌ ಕಮಾನು ಅಂಡರ್‌ಪಾಸ್‌   

ಕೆಜಿಎಫ್‌: ಶತಮಾನಗಳ ಕಾಲ ತನ್ನ ಅದ್ಭುತ ತಂತ್ರಜ್ಞಾನದ ಪ್ರದರ್ಶನ ಮಾಡಿದ್ದ ಫೈಲೈಟ್ಸ್‌ ವೃತ್ತದ ಬಳಿಯ ಕಮಾನು ಅಂಡರ್‌ಪಾಸ್‌ ಅನ್ನು ರಸ್ತೆ ವಿಸ್ತರಣೆಗಾಗಿ ಶುಕ್ರವಾರದಿಂದ ತೆರವು ಮಾಡಲಾಗುತ್ತಿದೆ.

ಬಿಜಿಎಂಎಲ್‌ ಪ್ರಾರಂಭವಾಗಿದ್ದ ದಿನಗಳಿಂದ ಬಂಗಾರಪೇಟೆ-ಕೆಜಿಎಫ್‌ ಸಂಪರ್ಕ ಕಲ್ಪಿಸುವ ರಸ್ತೆಗೆ ಕಟ್ಟಲ್ಪಟ್ಟಿದ್ದ ಅಂಡರಪಾಸ್‌ ಮತ್ತು ಅದಕ್ಕೆ ಇಟ್ಟಿಗೆಯಿಂದ ಕಟ್ಟಲಾಗಿದ್ದ ಕಮಾನು ಎಲ್ಲರ ಗಮನ ಸೆಳೆಯುತ್ತಿತ್ತು. ಹಲವಾರು ದಶಕಗಳಾಗಿದ್ದರೂ, ಒಂದು ಚೂರು ಬಿರುಕು ಬಿಟ್ಟಿರಲಿಲ್ಲ. ಬಿಜಿಎಂಎಲ್‌ ಗಣಿಯೊಳಗೆ ಆಗಾಗ್ಗೆ ನಡೆಯುತ್ತಿದ್ದ ಭೂ ಪಲ್ಲಟಗಳಿಂದ ಉಂಟಾಗುತ್ತಿದ್ದ ಕಂಪನಕ್ಕೆ ಕೂಡ ಕಮಾನು ಜಗ್ಗಿರಲಿಲ್ಲ. ಇಷ್ಟೊಂದು ಮಹತ್ವವಿದ್ದ ಕಮಾನು ಅಂಡರ್‌ಪಾಸ್‌ ರಸ್ತೆ ವಿಸ್ತರಣೆಗಾಗಿ ಇಂದು ತನ್ನ ಅಸ್ವಿತ್ವ ಕಳೆದುಕೊಂಡಿದೆ.

ಫೈಲೈಟ್ಸ್‌ ವೃತ್ತದಿಂದ ಬೆಮಲ್‌ವರೆವಿಗೂ ದ್ವಿಪಥ ರಸ್ತೆ ಮಾಡುವ ಪ್ರಕ್ರಿಯೆಯಲ್ಲಿ ತೊಡಗಿರುವ ಲೋಕೋಪಯೋಗಿ ಇಲಾಖೆ ಈಗ ಸುಮಾರು ₹1.75 ಕೋಟಿ ವೆಚ್ಚದಲ್ಲಿ ಫೈಲೈಟ್ಸ್‌ ವೃತ್ತದಿಂದ ಬಿಜಿಎಂಎಲ್‌ನ ಕಮಾನು ಅಂಡರಪಾಸ್‌ವರೆವಿಗೂ ರಸ್ತೆ ಅಭಿವೃದ್ಧಿ ಮಾಡುತ್ತಿದೆ. ಈಚೆಗೆ ರಸ್ತೆಯನ್ನು ಅಭಿವೃದ್ಧಿಪಡಿಸಿದ್ದರೂ, ಗುತ್ತಿಗೆದಾರರ ಕಳಪೆ ಕಾಮಗಾರಿಯಿಂದಾಗಿ ಫೈಲೈಟ್ಸ್‌ ವೃತ್ತದ ಬಳಿ ರಸ್ತೆ ಹಾಳಾಗಿದೆ. ಕಳೆದ ಬಾರಿ ಬಿದ್ದ ಮಳೆಗೆ ರಸ್ತೆ ಮತ್ತಷ್ಟು ಹೊಂಡಗಳಿಗೆ ದಾರಿ ಮಾಡಿಕೊಟ್ಟಿದೆ ಎಂದು ನಿವಾಸಿಗಳು ದೂರುತ್ತಿದ್ದರು. 

ADVERTISEMENT

ಫೈಲೈಟ್ಸ್‌ ವೃತ್ತದಿಂದ ಹೆನ್ರೀಸ್‌ ಡೌನ್‌ವರೆವಿಗೂ ರಸ್ತೆ ವಿಸ್ತರಣೆ ಮಾಡುವ ಪ್ರಕ್ರಿಯೆ ನಡೆದಿದೆ. ಕಮಾನು ಅಂಡರ್‌ಪಾಸ್‌ ಬಳಿ ರಸ್ತೆ ಚಿಕ್ಕದಾಗಿದ್ದು, ಎರಡು ವಾಹನಗಳು ಮುಕ್ತವಾಗಿ ಸಂಚಾರ ಮಾಡಲು ಕಷ್ಟವಾಗುತ್ತಿದೆ. ಇದರಿಂದಾಗಿ ರಸ್ತೆ ವಿಸ್ತರಣೆ ಮಾಡುವುದು ಅನಿವಾರ್ಯ ಎಂದು ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯಪಾಲಕ ಎಂಜಿನಿಯರ್‌ ರಾಜಶೇಖರ್‌ ಹೇಳುತ್ತಾರೆ.

ಅಂಡರ್‌ಪಾಸ್‌ ಇರುವ ರಸ್ತೆಯ ಮೇಲ್ಭಾಗದಲ್ಲಿ ಹೆನ್ರೀಸ್‌ ಶಾಫ್ಟ್‌ನಿಂದ ಅಶೋಕನಗರದ ಬಳಿ ಇರುವ ಸಂಸ್ಕರಣ ಘಟಕಕ್ಕೆ ಚಿನ್ನದ ಅದಿರು ಇರುವ ನಿಕ್ಷೇಪಗಳನ್ನು ರೈಲ್ವೆ ಟ್ರಾಲಿ ಮೂಲಕ ಸಾಗಿಸಲಾಗುತ್ತಿತ್ತು. ಗಣಿ ಮುಚ್ಚಿದ ಮೇಲೆ ಕೂಡ ಸುಮಾರು ಒಂದು ಕಿ.ಮೀ ಟ್ರಾಲಿ ವ್ಯವಸ್ಥೆ ಇತ್ತೀಚಿನ ದಿನಗಳವರೆವಿಗೂ ನೋಡಲು ಸಿಗುತ್ತಿತ್ತು. ಈಚೆಗೆ ಅಂಡರ್‌ಪಾಸ್‌ನಲ್ಲಿ ಬೃಹತ್‌ ಯಂತ್ರವನ್ನು ಸಾಗಿಸುತ್ತಿದ್ದ ಟ್ರಕ್‌ ಮೇಲ್ಭಾಗ ಕಮಾನು ಸೇತುವೆಗೆ ಸಿಲುಕಿ ಕಮಾನು ಸೇತುವೆಯ ಕೆಲ ಕಲ್ಲುಗಳು ಸಡಿಲವಾಗಿದ್ದವು. ಹೆಚ್ಚಿನ ಮಳೆ ಬಂದರೆ ಅಕಸ್ಮಾತ್‌ ಕಮಾನು ಕುಸಿದುಬಿದ್ದರೆ ಪ್ರಮುಖ ರಸ್ತೆಯಲ್ಲಿ ಅನಾಹುತ ಸಂಭವಿಸುವ ಸಾಧ್ಯತೆ ಇತ್ತು ಎಂಬುದು ಅಧಿಕಾರಿಗಳ ಮಾತಾಗಿದೆ.

ಸೇತುವೆ ತೆರವಿಗೆ ಬಿಜಿಎಂಎಲ್‌ ಅನುಮತಿಯನ್ನು ನೀಡಿದೆ. ಈ ಹಿನ್ನೆಲೆಯಲ್ಲಿ ಲೋಕೋಪಯೋಗಿ ಇಲಾಖೆ ತೆರವು ಕಾರ್ಯ ಶುರು ಮಾಡಿದ್ದು, ಸುಮಾರು ಎರಡು ತಿಂಗಳಲ್ಲಿ ಕಾಮಗಾರಿ ಮುಗಿಸುವ ಗುರಿಯನ್ನು ಹೊಂದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.