ADVERTISEMENT

‘ರಕ್ತದಾನಿಗಳು ಜೀವ ರಕ್ಷಕರು'

ರೋಟರಿ ಕ್ಲಬ್ ರಾಜ್ಯಪಾಲ ಶ್ರೀಕಾಂತ್ ಚಕ್ರಪತಿ ಅಭಿಪ್ರಾಯ

​ಪ್ರಜಾವಾಣಿ ವಾರ್ತೆ
Published 24 ಜನವರಿ 2021, 14:34 IST
Last Updated 24 ಜನವರಿ 2021, 14:34 IST
ಕೋಲಾರದಲ್ಲಿ ಭಾನುವಾರ ನಡೆದ ಲಯನ್ಸ್ ರಕ್ತನಿಧಿ ಕೇಂದ್ರದ ಉದ್ಘಾಟನಾ ಸಮಾರಂಭದಲ್ಲಿ ಸಾರ್ವಜನಿಕರು ರಕ್ತದಾನ ಮಾಡಿದರು.
ಕೋಲಾರದಲ್ಲಿ ಭಾನುವಾರ ನಡೆದ ಲಯನ್ಸ್ ರಕ್ತನಿಧಿ ಕೇಂದ್ರದ ಉದ್ಘಾಟನಾ ಸಮಾರಂಭದಲ್ಲಿ ಸಾರ್ವಜನಿಕರು ರಕ್ತದಾನ ಮಾಡಿದರು.   

ಕೋಲಾರ: ‘ರಕ್ತದಾನ ಮಾಡುವುದರಿಂದ ಆರೋಗ್ಯದ ಮೇಲೆ ಅಡ್ಡ ಪರಿಣಾಮ ಆಗುವುದಿಲ್ಲ. ರಕ್ತದಾನಿಗಳು ಜೀವ ರಕ್ಷಕರು’ ಎಂದು ರಾಜ್ಯ ರೋಟರಿ ಕ್ಲಬ್ ರಾಜ್ಯಪಾಲ ಶ್ರೀಕಾಂತ್ ಚಕ್ರಪತಿ ಅಭಿಪ್ರಾಯಪಟ್ಟರು.

ಚನ್ನಮ್ಮ ವೆಂಕಟಪ್ಪ ಟ್ರಸ್ಟ್ ಮತ್ತು ರೋಟರಿ ಕೋಲಾರ ವತಿಯಿಂದ ಇಲ್ಲಿ ಆರಂಭಿಸಿರುವ ಲಯನ್ಸ್ ರಕ್ತನಿಧಿ ಕೇಂದ್ರವನ್ನು ಭಾನುವಾರ ಉದ್ಘಾಟಿಸಿ ಮಾತನಾಡಿ. ‘ಕೊರೊನಾ ಸೋಂಕಿನ ಭೀತಿಯಿಂದಾಗಿ ಎಲ್ಲೆಡೆ ರಕ್ತ ಸಂಗ್ರಹಣೆ ಪ್ರಮಾಣ ಗಣನೀಯವಾಗಿ ಕುಸಿದಿದೆ’ ಎಂದು ಹೇಳಿದರು.

‘ರಕ್ತವು ಮಾರುಕಟ್ಟೆಯಲ್ಲಿ ಸಿಗುವುದಿಲ್ಲ. ರಕ್ತವು ಜೀವ ಉಳಿಸಲು ನೀಡುವ ಉಡುಗೊರೆಯಾಗಿದೆ. ರಕ್ತದ ಕೊರತೆಯಿಂದಾಗಿ ಗರ್ಭಿಣಿಯರು, ಅಪಘಾತದ ಗಾಯಾಳುಗಳ ಚಿಕಿತ್ಸೆಗೆ ದೊಡ್ಡ ಸಮಸ್ಯೆಯಾಗಿದೆ. ರಕ್ತದ ಕೊರತೆಯಿಂದ ಆಪತ್ತಿನಲ್ಲಿರುವ ಜೀವಕ್ಕೆ ಮತ್ತೊಬ್ಬ ವ್ಯಕ್ತಿ ರಕ್ತದಾನ ಮಾಡುವ ಮೂಲಕ ಜೀವ ಉಳಿಸಬಲ್ಲ’ ಎಂದು ತಿಳಿಸಿದರು.

ADVERTISEMENT

‘ಮನುಷ್ಯ ರಕ್ತ ನೀಡುವುದರಿಂದ ಸಣ್ಣಗಾಗುತ್ತಾನೆ ಎಂಬ ತಪ್ಪು ಭಾವನೆ ಬಿಡಬೇಕು. ಯುವಕ ಯುವತಿಯರು ರಕ್ತದಾನದ ಮಹತ್ವ ಅರಿಯಬೇಕು. ವರ್ಷಕ್ಕೆ 2 ಬಾರಿ ರಕ್ತದಾನ ಮಾಡಿ ಆರೋಗ್ಯವಂತರಾಗಿರಬೇಕು. ರಕ್ತದಾನದ ಸಂಬಂಧ ಜಾಗೃತಿ ಮೂಡಿಸಬೇಕು. ಎಲ್ಲರೂ ರಕ್ತದಾನ ಮಾಡಲು ಪಣ ತೊಡಬೇಕು’ ಎಂದು ಕಿವಿಮಾತು ಹೇಳಿದರು.

ಸವಾಲಿನ ಕೆಲಸ: ‘ರಕ್ತದಾನ ಸಂಸ್ಥೆಗಳನ್ನು ಹುಟ್ಟು ಹಾಕುವುದು ಸುಲಭ. ಆದರೆ, ಆ ಸಂಸ್ಥೆಗಳನ್ನು ಮುಂದುವರಿಸಿಕೊಂಡು ಹೋಗುವುದು ನಿಜಕ್ಕೂ ಸವಾಲಿನ ಕೆಲಸ. ಸಾರ್ವಜನಿಕರಿಗೆ ಮತ್ತು ರೋಗಿಗಳಿಗೆ ತಕ್ಷಣಕ್ಕೆ ರಕ್ತ ಸಿಗುವಂತೆ ಮಾಡಬೇಕು. ಕೊರೊನಾ ಸಮಯದಲ್ಲಿ ರಕ್ತ ನೀಡುವವರ ಅವಶ್ಯಕತೆ ಹೆಚ್ಚಿದೆ. ಆರೋಗ್ಯವಂತರು ರಕ್ತದಾನ ಮಾಡುವ ಜೀವ ರಕ್ಷಣೆಗೆ ಮುಂದಾಗಬೇಕು’ ಎಂದರು.

‘ದೇಶದಲ್ಲಿ ಸ್ವಯಂ ಪ್ರೇರಿತ ರಕ್ತದಾನವು 1975ರಿಂದ ಆರಂಭವಾಗಿದೆ. ದೇಶದ ಒಟ್ಟು ಜನಸಂಖ್ಯೆಯಲ್ಲಿ ಶೇ 1ರಷ್ಟು ಮಂದಿಗೆ ರಕ್ತದ ಅವಶ್ಯಕತೆಯಿದೆ. ಒಬ್ಬ ವ್ಯಕ್ತಿ ರಕ್ತದಾನ ಮಾಡುವುದರಿಂದ 4 ಜನರ ಪ್ರಾಣ ಉಳಿಸಬಹುದು. ರಕ್ತದಾನದಿಂದ ವ್ಯಕ್ತಿ ಚುರುಕುಗೊಳ್ಳುವುದರ ಜತೆಗೆ ಹೃದಯಾಘಾತ ಕಡಿಮೆಯಾಗುತ್ತವೆ’ ಎಂದು ವಿವರಿಸಿದರು.

ಶೇಷ್ಠ ದಾನ: ‘ಮನುಷ್ಯನಿಗೆ ರಕ್ತವು ಪ್ರಕೃತಿ ದತ್ತವಾಗಿ ಬಂದಿದೆ. ರಕ್ತಕ್ಕೆ ಬದಲಾಗಿ ಬೇರೊಂದು ವಸ್ತುವಿಲ್ಲ. ರಕ್ತದಾನದ ಮೂಲಕ ಪ್ರಕೃತಿಯ ಋಣ ತೀರಿಸಬೇಕು. ನಾವು ಬದುಕಬೇಕು, ನಮ್ಮ ಜತೆಯಲ್ಲಿ ಮತ್ತೊಬ್ಬರನ್ನು ಬದುಕಿಸಬೇಕು. ರಕ್ತದಾನಕ್ಕಿಂತ ಶೇಷ್ಠ ದಾನ ಮತ್ತೊಂದಿಲ್ಲ’ ಎಂದು ಜಿಲ್ಲಾ ಸ್ಕೌಟ್ ಮತ್ತು ಗೈಡ್ಸ್ ಆಯುಕ್ತ ಕೆ.ವಿ ಶಂಕರಪ್ಪ ಹೇಳಿದರು.

‘ಮನುಷ್ಯನ ಬೆಳವಣಿಗೆಗೆ ರಕ್ತ ಬಹಳ ಮುಖ್ಯ. ದಿನದಿಂದ ದಿನಕ್ಕೆ ರಕ್ತದ ಬೇಡಿಕೆ ಹೆಚ್ಚುತ್ತಿದೆ. ರಕ್ತದ ಅಗತ್ಯತೆ ಯಾರಿಗಾದರೂ ಬರಬಹುದು. ರಕ್ತದ ಕೊರತೆಯಿಂದಾಗಿ ಗರ್ಭಿಣಿಯರು, ಅಪಘಾತದ ಗಾಯಾಳುಗಳ ಚಿಕಿತ್ಸೆಗೆ ದೊಡ್ಡ ಸಮಸ್ಯೆಯಾಗಿದೆ’ ಎಂದು ರಾಜ್ಯ ಕೈಗಾರಿಕಾ ಸರಬರಾಜು ಮತ್ತು ಮಾರಾಟ ಸಹಕಾರ ಮಹಾಮಂಡಳದ ಉಪಾಧ್ಯಕ್ಷ ವಿ.ಮುನಿರಾಜು ತಿಳಿಸಿದರು.

ರೋಟರಿ ಕ್ಲಬ್ ಸಹ ರಾಜ್ಯಪಾಲ ಎಲ್.ಗೋಪಾಲಕೃಷ್ಣ, ಚನ್ನಮ್ಮ ವೆಂಕಟಪ್ಪ ಟ್ರಸ್ಟ್ ಅಧ್ಯಕ್ಷ ಬಿ.ವಿ.ಮಂಜುನಾಥಗೌಡ, ಖಜಾಂಚಿ ಟಿ.ಎಸ್.ಜನಾರ್ದನ್, ಜಿಲ್ಲಾ ಕ್ಷಯ ರೋಗ ನಿಯಂತ್ರಣಾಧಿಕಾರಿ ಡಾ.ಜಗದೀಶ್ ಪಾಲ್ಗೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.