ಕೋಲಾರ: ತಾಲ್ಲೂಕಿನ ಮದ್ದೇರಿ ಗ್ರಾಮದಲ್ಲಿ ಶುಕ್ರವಾರ ಕೋದಂಡರಾಮಸ್ವಾಮಿ ದೇವರ 62ನೇ ಬ್ರಹ್ಮ ರಥೋತ್ಸವ ವೈಭವದಿಂದ ನಡೆಯಿತು.
ಅಲಂಕೃತ ರಥದಲ್ಲಿ ಮಧ್ಯಾಹ್ನ ಕೋದಂಡರಾಮಸ್ವಾಮಿಯ ಉತ್ಸವ ವಿಗ್ರಹ ಇಟ್ಟು ವಿಶೇಷ ಪೂಜೆ ಸಲ್ಲಿಸಲಾಯಿತು. ಬಳಿಕ ರಥೋತ್ಸವಕ್ಕೆ ಚಾಲನೆ ನೀಡಲಾಯಿತು. ರಥ ಸಾಗಿದ ಮಾರ್ಗದ ಮನೆಗಳ ಮಹಿಳೆಯರು ರಸ್ತೆಗೆ ನೀರು ಹಾಕಿ ಬಣ್ಣ ಬಣ್ಣದ ರಂಗೋಲಿ ಬಿಡಿಸಿದ್ದರು.
ರಥ ಮುಂದೆ ಚಲಿಸುತ್ತಿದ್ದಂತೆ ಭಕ್ತರು ದೇವರಿಗೆ ಹಣ್ಣು ಕಾಯಿ ಅರ್ಪಿಸಿ ಕರ್ಪೂರ ಆರತಿ ಬೆಳಗಿ ಪೂಜೆ ಮಾಡಿದರು. ಯುವಕರ ಗುಂಪು ಈಡುಗಾಯಿ ಒಡೆದು ಪೂಜೆ ಸಲ್ಲಿಸಿತು. ದೇವರ ಸ್ಮರಣೆಯೊಂದಿಗೆ ಬಾಳೆ ಹಣ್ಣು, ಹೂವು, ದವನ, ಜೀರಿಗೆ, ಮೆಣಸು, ಉಪ್ಪು, ಹೂವು, ವಿಳ್ಯದೆಲೆ ರಥಕ್ಕೆ ಅರ್ಪಿಸುವ ಮೂಲಕ ಹರಕೆ ತೀರಿಸಿಕೊಂಡರು.
ರಥೋತ್ಸವದ ಅಂಗವಾಗಿ ಇಡೀ ದಿನ ವಿವಿಧ ಧಾರ್ಮಿಕ ಕಾರ್ಯಕ್ರಮ ನಡೆದವು. ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಎಸ್.ರಾಮೇಗೌಡ, ಗ್ರಾಮ ಪಂಚಾಯಿತಿ ಅಧ್ಯಕ್ಷ ಮಂಜುನಾಥ್, ಸದಸ್ಯರಾದ ರವಿಕುಮಾರ್, ಮಾಜಿ ಅಧ್ಯಕ್ಷ ಎಂ.ನಂಜೇಗೌಡ, ಪ್ರಧಾನ ಅರ್ಚಕ ಪಿ.ವೆಂಕಟಾಚಲಪತಿ, ವಕೀಲ ಜಯರಾಮ್ ಪಾಲ್ಗೊಂಡಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.