ADVERTISEMENT

ಕೋಲಾರ ‌| ಆಟದ ಮೈದಾನದಲ್ಲಿ ತಾತ್ಕಾಲಿಕ ಬಸ್ ನಿಲ್ದಾಣ: ಸಾರ್ವಜನಿಕರ ವಿರೋಧ

​ಪ್ರಜಾವಾಣಿ ವಾರ್ತೆ
Published 19 ಸೆಪ್ಟೆಂಬರ್ 2025, 4:50 IST
Last Updated 19 ಸೆಪ್ಟೆಂಬರ್ 2025, 4:50 IST
ಮಾಲೂರು ನಗರದ ಬಾಲಕರ ಹಿರಿಯ ಪ್ರಾಥಮಿಕ ಶಾಲೆಯ ಕ್ರೀಡಾಂಗಣ
ಮಾಲೂರು ನಗರದ ಬಾಲಕರ ಹಿರಿಯ ಪ್ರಾಥಮಿಕ ಶಾಲೆಯ ಕ್ರೀಡಾಂಗಣ   

ಮಾಲೂರು: ಸರ್ಕಾರಿ ಆಸ್ಪತ್ರೆ, ವಿದ್ಯಾರ್ಥಿ ನಿಲಯ, ಸರ್ಕಾರಿ ಶಾಲೆಗಳ ನಡುವೆ ಪಟ್ಟಣದ ಹೃದಯ ಭಾಗದಲ್ಲಿರುವ ಆಟದ ಮೈದಾನವನ್ನು ತಾತ್ಕಾಲಿಕವಾಗಿ ಬಸ್ ನಿಲ್ದಾಣ ಮಾಡಲು ಹೊರಟಿರುವ ತಾಲ್ಲೂಕು ಆಡಳಿತದ ಕ್ರಮ ಅವೈಜ್ಞಾನಿಕ ಎಂದು ಸಾರ್ವಜನಿಕರು ದೂರಿದ್ದಾರೆ.

ಬಾಲಕರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಸೇರಿದ ಆಟದ ಮೈದಾನ ಸುಮಾರು ಎರಡು ಎಕರೆ ವಿಸ್ತೀರ್ಣದಲ್ಲಿದೆ. ಮೈದಾನದ ದಕ್ಷಿಣಕ್ಕೆ ಸಾರ್ವಜನಿಕ ಸರ್ಕಾರಿ ಆಸ್ಪತ್ರೆ ಇದೆ. ಇಲ್ಲಿಗೆ ಪತ್ರಿನಿತ್ಯ ಸಾವಿರಾರು ಮಂದಿ ರೋಗಿಗಳು ಭೇಟಿ ನೀಡುತ್ತಾರೆ. ಜೊತೆಗೆ ಚಿಕಿತ್ಸೆಗಾಗಿ ದಾಖಲಾಗುತ್ತಾರೆ. ಬಸ್‌ಗಳ ಶಬ್ದ ಹಾಗೂ ವಾಯುಮಾಲಿನ್ಯದಿಂದ ರೋಗಿಗಳಿಗೆ ತೊಂದರೆಯಾಗುತ್ತದೆ ಎಂಬುದು ಸಾರ್ವಜನಿಕರ ದೂರಾಗಿದೆ.

ಮೈದಾನದ ಉತ್ತರಕ್ಕೆ ಬಾಲಕರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜು ಮತ್ತು ಬಾಲಕಿಯರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಇದೆ. ಪೂರ್ವಕ್ಕೆ ಮೆಟ್ರಿಕ್ ಪೂರ್ವ ಬಾಲಕರ ವಿದ್ಯಾರ್ಥಿ ನಿಲಯ. ಪಶ್ಚಿಮಕ್ಕೆ ಉರ್ದು ಶಾಲೆಗಳಿವೆ. ಹಾಗಾಗಿ ಆ ಮೈದಾನದಲ್ಲಿ ಬಸ್ ನಿಲ್ದಾಣ ನಿರ್ಮಾಣವಾದರೆ ಮಕ್ಕಳ ಕಲಿಕೆಗೆ ತೊಂದರೆಯಾಗುತ್ತದೆ ಎಂಬುದು ಪೋಷಕರ ಕಳವಾಗಿದೆ.

ADVERTISEMENT

ನಗರದಲ್ಲಿ ಎರಡು ಕ್ರೀಡಾಂಗಣ:

 ನಗರದಲ್ಲಿ ಇರುವುದು ಎರಡೇ ಕ್ರೀಡಾಂಗಣ. ಬಾಲಕರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಆಟದ ಮೈದಾನ ಮತ್ತು ಸರ್ಕಾರಿ ಪದವಿ ಪೂರ್ವ ಕಾಲೇಜು ಆಟದ ಮೈದಾನ (ಹೋಂಡಾ ಕ್ರೀಡಾಂಗಣ). ಹೋಂಡಾ ಕ್ರೀಡಾಂಗಣದಲ್ಲಿ ಕ್ರಿಕ್ರಿಟ್, ಫುಟ್‌ಬಾಲ್, ಕಬಡ್ಡಿ, ಖೋಖೋ ಸೇರಿದಂತೆ ಗುಂಪು ಆಟಗಳು ಹಾಗೂ ರಾಷ್ಟ್ರೀಯ ಹಬ್ಬಗಳ ಆಚರಣೆ ನಡೆಯುತ್ತವೆ. ಬಾಲಕರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆಟದ ಮೈದಾನದಲ್ಲಿ ಹಿರಿಯರು ವಾಕಿಂಗ್ ಮಾಡುವುದು ಸೇರಿದಂತೆ ವಿದ್ಯಾರ್ಥಿಗಳ ಆಟ –ಪಾಠ ನಡೆಯುತ್ತವೆ. ಈಗ ತಾತ್ಕಾಲಿಕ ಬಸ್ ನಿಲ್ದಾಣದ ನಿರ್ಮಾಣದಿಂದ ವಿದ್ಯಾರ್ಥಿಗಳ ಕ್ರೀಡಾಚಟುವಟಿಕೆಗಳಿಗೆ ಸಂಪೂರ್ಣ ಬ್ರೇಕ್ ಬಿದ್ದಂತಾಗಿದೆ.

ನಗರದ ಮುಖ್ಯ ರಸ್ತೆಯಿಂದ ಶಾಲಾ–ಕಾಲೇಜುಗಳಿಗೆ ಹೋಗುವ ರಸ್ತೆ ಬಹಳ ಕಿರಿದಾಗಿದ್ದು, ರಸ್ತೆ ಬದಿಗಳಲ್ಲಿ ತರಕಾರಿ ವ್ಯಾಪಾರ ನಡೆಯುತ್ತಿರುತ್ತದೆ. ಈ ರಸ್ತೆಯಲ್ಲಿ ವಿದ್ಯಾರ್ಥಿಗಳು ಓಡಾಡುವುದೇ ಕಷ್ಟ. ಅಂತದರಲ್ಲಿ ಬಸ್ ಸಂಚಾರ ಆರಂಭವಾದರೆ ಮಕ್ಕಳು ಓಡಾಟಕ್ಕೆ ತುಂಬಾ ಕಷ್ಟವಾಗುತ್ತದೆ ಎಂಬುದು ಪೋಷಕರ ಆತಂಕವಾಗಿದೆ.

ಶಾಲಾ ಕ್ರೀಡಾಂಗಣಕ್ಕೆ ಸ್ಥಳಾಂತರವಾಗಿರುವ ಬಸ್ ನಿಲ್ದಾಣ 
ಪರ್ಯಾಯ ಬಸ್ ನಿಲ್ದಾಣದ ಅಗತ್ಯ ಏಕೆ?
1978ರಲ್ಲಿ ನಿರ್ಮಾಣವಾಗಿದ್ದ ನಗರದ ಬಸ್‌ ನಿಲ್ದಾಣ ಕಿರಿದಾಗಿದ್ದು ಶಿಥಿಲವಾಗಿದೆ. ಜೊತೆಗೆ ಪ್ರಯಾಣಿಕರಿಗೆ ಮೂಲ ಸೌಕರ್ಯಗಳ ಕೊರತೆ ಇದೆ. ಹಾಗಾಗಿ ಶಾಸಕರು ಹಾಗೂ ನಗರಸಭೆ ಅಧಿಕಾರಿಗಳು ಸುಮಾರು ₹21 ಕೋಟಿ ವೆಚ್ಚದಲ್ಲಿ ಬಸ್‌ ನಿಲ್ದಾಣಕ್ಕೆ ಹೊಸ ಸ್ಪರ್ಶ ನೀಡಲು ಮುಂದಾಗಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅ.30 ರಂದು ನೂತನ ಬಸ್ ನಿಲ್ದಾಣ ಕಾಮಗಾರಿ ಭೂಮಿ ಪೂಜೆ ನೆರವೇರಿಸಲಿದ್ದಾರೆ. ಈ ಕಾಮಗಾರಿಯು ಒಂದು ವರ್ಷಕ್ಕೆ ಪೂರ್ಣಗೊಳ್ಳಲಿದೆ. ಹಾಗಾಗಿ ಬಸ್ ನಿಲ್ದಾಣಕ್ಕೆ ಪರ್ಯಾಯವಾಗಿ ಬಾಲಕರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆಟದ ಮೈದಾನವನ್ನು ಶಾಸಕ ಕೆ.ವೈ.ನಂಜೇಗೌಡ ತಹಶೀಲ್ದಾರ್ ಎಂ.ವಿ.ರೂಪ ಅವರು ಗುರುತಿಸಿದ್ದಾರೆ. ಅದಕ್ಕೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ ವಿರೋಧ ವ್ಯಕ್ತವಾಗುತ್ತಿದೆ.
ಶೀಘ್ರ ನಿಲ್ದಾಣ ಸ್ಥಳಾಂತರ
ತಾತ್ಕಾಲಿಕ ಬಸ್ ನಿಲ್ದಾಣವನ್ನು ಆಟದ ಮೈದಾನದಿಂದ ರೈಲ್ವೆ ಮೇಲ್ಸೇತುವೆ ಪಕ್ಕದಲ್ಲಿರುವ ಸರ್ಕಾರಿ ಜಮೀನಿಗೆ ವರ್ಗಾಯಿಸಲು ಶಾಸಕ ಕೆ.ವೈ.ನಂಜೇಗೌಡರ ಅಧ್ಯಕ್ಷತೆಯಲ್ಲಿ ತೀರ್ಮಾನಿಸಲಾಗಿದೆ. ಪ್ರಯಾಣಿಕರಿಗೆ ಅಗತ್ಯವಿರುವ ಶೌಚಾಲಯ, ಕುಡಿಯುವ ನೀರಿನ ಸೌಲಭ್ಯ ಹಾಗೂ ತಂಗುದಾಣ ನಿರ್ಮಾಣ ಕಾಮಗಾರಿ ನಡೆಯುತ್ತಿದೆ. ಪೂರ್ಣಗೊಂಡ ನಂತರ ಬಸ್ ನಿಲ್ದಾಣ ಸ್ಥಳಾಂತರಿಸಲಾಗುವುದು.- ಪ್ರದೀಪ್ ಕುಮಾರ್, ಮಾಲೂರು ನಗರಸಭಾ ಆಯುಕ್ತ
ನಗರದಲ್ಲಿ ಉತ್ತಮ ಸ್ಥಳಗಳಿವೆ ಸೂಚಿಸಿ
ನೂತನ ಬಸ್ ನಿಲ್ದಾಣ ಮಾಡುತ್ತಿರುವುದು ಉತ್ತಮ ಸಂಗತಿ. ಆದರೆ, ಬಸ್ ನಿಲ್ದಾಣವನ್ನು ಶಾಲಾ ಮೈದಾನಕ್ಕೆ ಸ್ಥಳಾಂತರಿಸಿರುವುದು ಅವೈಜ್ಞಾನಿಕ. ಆಟದ ಮೈದಾನದ ಸುತ್ತಲೂ ಶಾಲಾ ಕಾಲೇಜುಗಳಿದ್ದು, ಮಕ್ಕಳ ಕಲಿಕೆಗೆ ತೊಂದರೆಯಾಗಲಿದೆ. ನಗರದಲ್ಲಿ ಇನ್ನೂ ಉತ್ತಮ ಜಾಗಗಳಿವೆ ಅವುಗಳನ್ನು ಸೂಚಿಸಬಹುದು.- ಪ್ರದೀಪ್ ರೆಡ್ಡಿ, ಕೆಪಿಸಿಸಿ ಸದಸ್ಯ
ಮುಖಂಡರ ಬಳಿ ಚರ್ಚಿಸಿ
ಆಟದ ಮೈದಾನಕ್ಕೆ ಬಸ್ ನಿಲ್ದಾಣ ಸ್ಥಳಾಂತರ ಅವೈಜ್ಞಾನಿಕ. ನಗರದಲ್ಲಿ ತಾತ್ಕಾಲಿಕ ಬಸ್ ನಿರ್ಮಾಣಕ್ಕೆ ಸೂಕ್ತ ಸ್ಥಳಗಳಿವೆ. ಶಾಸಕರಿಗೆ ನಗರದ ಬಗ್ಗೆ ಮಾಹಿತಿ ಕೊರತೆ ಇದೆ. ನಗರದ ಹಿರಿಯ ಹಾಗೂ ಇತರೆ ಮುಖಂಡರ ಬಳಿ ಚರ್ಚೆ ನಡೆಸಿ ತೀರ್ಮಾನ ತೆಗೆದುಕೊಳ್ಳಿ.- ಆರ್.ಪ್ರಭಾಕರ್, ಎಸ್‌ಜೆಪಿ ತಾಲ್ಲೂಕು ಅಧ್ಯಕ್ಷ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.