ಕೋಲಾರ: ವಾಣಿಜ್ಯೋದ್ಯಮ ಕ್ಷೇತ್ರದಲ್ಲಿ ಸಲ್ಲಿಸಿದ ಸೇವೆಗಾಗಿ ಜಿಲ್ಲೆಯ ಸಿ.ಜಿ.ಶ್ರೀನಿವಾಸನ್ ಅವರಿಗೆ ಪ್ರಸಕ್ತ ಸಾಲಿನ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಲಭಿಸಿದೆ.
ಶ್ರೀನಿವಾಸಪುರ ತಾಲ್ಲೂಕಿನ ಮುದಿಮಡಗು ಗ್ರಾಮದ ಶ್ರೀನಿವಾಸನ್, 28 ವರ್ಷ ಕರ್ನಾಟಕ ರಾಜ್ಯ ಸಣ್ಣ ಕೈಗಾರಿಕೆ ಅಭಿವೃದ್ಧಿ ನಿಗಮದಲ್ಲಿ (ಕೆಎಸ್ಎಸ್ಐಡಿಸಿ) ಮೈಸೂರು, ತುಮಕೂರು ಹಾಗೂ ಬೆಂಗಳೂರಿನಲ್ಲಿ ಕಾರ್ಯನಿರ್ವಹಿಸಿ, ಮುಖ್ಯ ವ್ಯವಸ್ಥಾಪಕರಾಗಿ 2009ರಲ್ಲಿ ಸ್ವಯಂ ನಿವೃತ್ತಿ ಪಡೆದಿದ್ದರು. ಅವರು ಈಗ ಕರ್ನಾಟಕ ದಲಿತ ಉದ್ದಿಮೆದಾರರ ಸಂಘದ ಕಾರ್ಯಾಧ್ಯಕ್ಷ ಕೂಡ.
‘ಸುದೀರ್ಘ ಕಾಲದ ಸೇವೆ ಗುರುತಿಸಿ ಪ್ರಶಸ್ತಿ ಕೊಡಬಹುದೆಂಬ ವಿಶ್ವಾಸದಲ್ಲಿದ್ದೆ. ಅರ್ಜಿ ಸಲ್ಲಿಸಿ ಸುಮ್ಮನಾಗಿದ್ದೆ, ಯಾರಿಗೂ ಹೇಳಿರಲಿಲ್ಲ. ಇದೀಗ ಪ್ರಶಸ್ತಿ ಒಲಿದಿದ್ದು, ಖುಷಿ ತಂದಿದೆ. ದಲಿತ ಉದ್ದಿಮೆದಾರರ ಅಭಿವೃದ್ಧಿಗೆ ನೀಡಿದ ಕೊಡುಗೆ ಗುರುತಿಸಿ ಸರ್ಕಾರವು ಪ್ರಶಸ್ತಿ ನೀಡಿದೆ ಎಂದು ಭಾವಿಸಿದ್ದೇನೆ. ಈ ಪ್ರಶಸ್ತಿಯನ್ನು ರಾಜ್ಯದ ಎಲ್ಲಾ ದಲಿತ ಉದ್ದಿಮೆದಾರರಿಗೆ ಅರ್ಪಿಸುತ್ತೇನೆ’ ಎಂದು ಶ್ರೀನಿವಾಸನ್ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.
ಎಂ.ಎ., ಎಲ್ಎಲ್ಬಿ ಪದವೀಧರರಾಗಿರುವ ಶ್ರೀನಿವಾಸನ್, ದಲಿತರ ಆರ್ಥಿಕಾಭಿವೃದ್ಧಿ ಆಶಯ ಈಡೇರಿಸಲು ಹಲವಾರು ವರ್ಷಗಳಿಂದ ಶ್ರಮಿಸುತ್ತಿದ್ದಾರೆ. ರಾಜ್ಯದ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದವರ ಸಾಮಾಜಿಕ ಮತ್ತು ಆರ್ಥಿಕ ಅಭಿವೃದ್ಧಿಗಾಗಿ ಸಂಘಟನಾತ್ಮಕವಾಗಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.