ADVERTISEMENT

ಉದ್ಯಮಿ ಷಣ್ಮುಗಂ ಆಸ್ತಿ ಮುಟ್ಟುಗೋಲು

​ಪ್ರಜಾವಾಣಿ ವಾರ್ತೆ
Published 4 ಜೂನ್ 2021, 4:54 IST
Last Updated 4 ಜೂನ್ 2021, 4:54 IST
ಬಂಗಾರಪೇಟೆಯ ಶ್ರೀಷಣ್ಮುಗ ಫೈನಾನ್ಸಿಯರ್ಸ್, ಆರ್‌ಕೆಎನ್‌ ಚಿಟ್ಸ್ ಅಂಡ್ ಇನ್ವೆಸ್ಟ್‌ಮೆಂಟ್‌ ಪ್ರೈವೇಟ್ ಲಿಮಿಟೆಡ್ ಸಂಸ್ಥೆಗೆ ಪುರಸಭೆ ಬೀಗಮುದ್ರೆ ಹಾಕಿರುವುದು
ಬಂಗಾರಪೇಟೆಯ ಶ್ರೀಷಣ್ಮುಗ ಫೈನಾನ್ಸಿಯರ್ಸ್, ಆರ್‌ಕೆಎನ್‌ ಚಿಟ್ಸ್ ಅಂಡ್ ಇನ್ವೆಸ್ಟ್‌ಮೆಂಟ್‌ ಪ್ರೈವೇಟ್ ಲಿಮಿಟೆಡ್ ಸಂಸ್ಥೆಗೆ ಪುರಸಭೆ ಬೀಗಮುದ್ರೆ ಹಾಕಿರುವುದು   

ಬಂಗಾರಪೇಟೆ: ಪಟ್ಟಣದ ಉದ್ಯಮಿ ಷಣ್ಮುಗಂ ಅವರಿಗೆ ಸೇರಿದ ಅಕ್ಕಿ ಗಿರಣಿ, ಫೈನಾನ್ಸ್ ಸಂಸ್ಥೆ ಸೇರಿದಂತೆ ಅವರ ಆಸ್ತಿಯನ್ನು ಸರ್ಕಾರ ಮುಟ್ಟುಗೋಲು ಹಾಕಿಕೊಂಡಿದೆ.

ಜಿಲ್ಲಾಡಳಿತ ಹಾಗೂ ತಾಲ್ಲೂಕು ಆಡಳಿತದ ಸೂಚನೆಯಂತೆ ಪಟ್ಟಣದ ಶ್ರೀಷಣ್ಮುಗ ಫೈನಾನ್ಸಿಯರ್ಸ್, ಆರ್‌ಕೆಎನ್‌ ಚಿಟ್ಸ್ ಆ್ಯಂಡ್ ಇನ್ವೆಸ್ಟ್‌ಮೆಂಟ್ಸ್‌ ಪ್ರೈವೇಟ್ ಲಿಮಿಟೆಡ್, ಆರ್.ಕೆ.ಎನ್. ಮಿಲ್‌ಗಳಿಗೆ ಗುರುವಾರ ಪುರಸಭೆ ಮುಖ್ಯಾಧಿಕಾರಿ ಬೀಗಮುದ್ರೆ ಹಾಕಿದ್ದಾರೆ. ಜತೆಗೆ ಸಂಸ್ಥೆಗಳ ಮುಖ್ಯದ್ವಾರದಲ್ಲಿ ಸಾರ್ವಜನಿಕ ಪ್ರಕಟಣೆ ಫಲಕ ಅಳವಡಿಸಲಾಗಿದೆ.

ಕಂದಾಯ ಇಲಾಖೆಯಅಧೀನ ಕಾರ್ಯದರ್ಶಿ ಅವರ ನಿರ್ದೇಶನದಂತೆ ಈ ಜಾಗವನ್ನು ಸರ್ಕಾರ ಮುಟ್ಟುಗೋಲು ಹಾಕಿಕೊಂಡಿದ್ದು, ಸಾರ್ವಜನಿಕರು ಪ್ರವೇಶಿಸಲು ನಿಷೇಧಿಸಿದೆ ಎಂದು ಫಲಕದಲ್ಲಿ ಬರೆಯಲಾಗಿದೆ. ಅಲ್ಲದೇ, ಅವರಿಗೆ ಸೇರಿದ ನಿವೇಶನಗಳನ್ನೂ ವಶಕ್ಕೆ ಪಡೆದಿದ್ದು, ಮನೆಗೂ ಬೀಗಮುದ್ರೆ ಹಾಕುವ ಸಂಭವವಿದೆ ಎಂದು ಮೂಲಗಳು ತಿಳಿಸಿವೆ.

ADVERTISEMENT

ಜಿಲ್ಲಾಧಿಕಾರಿ ಅವರ ಆದೇಶದ ಮೇರೆಗೆ ಷಣ್ಮುಗಂ ಅವರ ಹಣಕಾಸಿನ ಸಂಸ್ಥೆ, ಮಿಲ್ ಹಾಗೂ ನಿವೇಶನಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ ಎಂದು ಪುರಸಭೆ ಮುಖ್ಯಾಧಿಕಾರಿ ಶ್ರೀಧರ್ ತಿಳಿಸಿದ್ದಾರೆ.

ಷಣ್ಮುಗಂ ತನ್ನ ಹಣಕಾಸಿನ ಸಂಸ್ಥೆಯಲ್ಲಿ ಹೂಡಿಕೆ ಮಾಡಿದ್ದ ಸಾವಿರಾರು ಜನರಿಗೆ ಕೋಟಿಗಟ್ಟಲೆ ಹಣ ವಂಚಿಸಿದ್ದರು. ಈ ಹಿನ್ನೆಲೆಯಲ್ಲಿ ಬೆಂಗಳೂರಿನ ಸಿಒಡಿ ಎರಡು ವರ್ಷದ ಹಿಂದೆ ತನಿಖೆ ನಡೆಸಿ ಸರ್ಕಾರಕ್ಕೆ ವರದಿ ನೀಡಿತ್ತು. ಈ ವರದಿ ಆಧರಿಸಿ ಅವರ ಆಸ್ತಿಯನ್ನು ಸರ್ಕಾರ ವಶಕ್ಕೆ ಪಡೆದಿದೆ.ವಂಚನೆ ಪ್ರಕರಣದಲ್ಲಿ ಸಿಒಡಿ ಪೊಲೀಸರು ಷಣ್ಮುಗಂ ಅವರನ್ನು ಬಂಧಿಸಿದ್ದು, ಪ್ರಸ್ತುತ ಷರತ್ತುಬದ್ಧ ಜಾಮೀನು ಪಡೆದಿದ್ದಾರೆ.

ರಾಜ್ಯದ ವಿವಿಧ ನ್ಯಾಯಾಲಯ ಗಳಲ್ಲಿ ಅವರ ವಿರುದ್ಧ 50ಕ್ಕೂ ಹೆಚ್ಚು ಚೆಕ್‌ಬೌನ್ಸ್ ಪ್ರಕರಣ ದಾಖಲಾಗಿದ್ದು, ವಿಚಾರಣೆ ಹಂತದಲ್ಲಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.