ಕೋಲಾರ: ‘ಕದನ ವಿರಾಮವನ್ನು ನಾನು ಸ್ವಾಗತಿಸುತ್ತೇನೆ. ರಾಜ್ಯ ಆಳುವಾಗ ಯಾರಾದರೂ ಹಿರಿಯರು ಬಂದು ವ್ಯಾಜ್ಯವನ್ನು ಬಗೆಹರಿಸಲು ಮುಂದಾದಾಗ ಅದಕ್ಕೆ ಗೌರವ ಕೊಡಬೇಕು. ನಮ್ಮ ನಾಗರಿಕರನ್ನು ಕಳೆದುಕೊಂಡ ನೋವು ಇದ್ದರೂ ಕಲಹ ಅಥವಾ ಯುದ್ಧದಿಂದ ಯಾವುದೇ ಲಾಭವಿಲ್ಲ’ ಎಂದು ಆಹಾರ ಸಚಿವ ಕೆ.ಎಚ್.ಮುನಿಯಪ್ಪ ಹೇಳಿದರು.
ಅಮೆರಿಕದ ಮಧ್ಯಸ್ಥಿಕೆ ಹಾಗೂ ಕದನ ವಿರಾಮ ಕುರಿತ ಪ್ರಶ್ನೆಗೆ ನಗರದಲ್ಲಿ ಸೋಮವಾರ ಸುದ್ದಿಗಾರರರಿಗೆ ಈ ರೀತಿ ಪ್ರತಿಕ್ರಿಯಿಸಿದರು.
‘ಪಹಲ್ಗಾಮ್ನಲ್ಲಿ ನಮ್ಮ ಜನರನ್ನು ಉಗ್ರರು ಕೊಂದ್ದಕ್ಕೆ ನಾವು ಪಾಕಿಸ್ತಾನದಲ್ಲಿ ಉಗ್ರರ ನೆಲೆಗಳ ಮೇಲೆ ದಾಳಿ ಮಾಡಿದ್ದೇವೆಯೇ ಹೊರತು ಪಾಕಿಸ್ತಾನದ ಮೇಲೆ ಯುದ್ಧ ಮಾಡುವ ಅವಶ್ಯ ಇರಲಿಲ್ಲ. ಪಾಕಿಸ್ತಾನದ ನಾಗರಿಕರನ್ನಾಗಲಿ, ಅಲ್ಲಿನ ಸೈನಿಕರನ್ನಾಗಲಿ ನಾವು ಮುಟ್ಟಿಲ್ಲ’ ಎಂದು ತಿಳಿಸಿದರು.
‘ಶಾಂತಿಯಿಂದ ಸಾಧನೆ ಮಾಡಬೇಕೆಂದು ಗಾಂಧೀಜಿ ಪಾಠ ಹೇಳಿಕೊಟ್ಟಿದ್ದಾರೆ. ಬ್ರಿಟಿಷರು 200 ವರ್ಷ ರಾಜ್ಯಭಾರ ಮಾಡಿದರು. ಅವರ ವಿರುದ್ಧ ನಾವು ಗೆದ್ದಿದ್ದು ಯುದ್ಧದಿಂದ ಅಲ್ಲ; ಶಾಂತಿಯಿಂದ. ಆ ಸಿದ್ಧಾಂತದಲ್ಲೇ ನಾವು ಇದ್ದೇವೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.