ADVERTISEMENT

ಚಾರಿತ್ರ್ಯವಧೆ ಮಾಡಿ ಬೇಗನೇ ‌ಸಾಯಿಸುವ ಪ್ರವೃತ್ತಿ

ಜೆ.ಎಚ್.ಪಟೇಲ್‌ ಸ್ಮರಣೋತ್ಸವದಲ್ಲಿ ವಿಧಾನಸಭೆ ಮಾಜಿ ಅಧ್ಯಕ್ಷ ರಮೇಶ್‍ ಕುಮಾರ್ ಬೇಸರ

​ಪ್ರಜಾವಾಣಿ ವಾರ್ತೆ
Published 13 ಡಿಸೆಂಬರ್ 2025, 6:06 IST
Last Updated 13 ಡಿಸೆಂಬರ್ 2025, 6:06 IST
ಕೋಲಾರದಲ್ಲಿ ಶುಕ್ರವಾರ ನಡೆದ ಮಾಜಿ ಮುಖ್ಯಮಂತ್ರಿ ಜೆ.ಎಚ್.ಪಟೇಲ್ ಅವರ 25ನೇ ಪುಣ್ಯ ಸ್ಮರಣೋತ್ಸವ ಕಾರ್ಯಕ್ರಮದಲ್ಲಿ ಗಣ್ಯರು, ಜೆ.ಎಚ್‌.ಪಟೇಲ್‌ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು
ಕೋಲಾರದಲ್ಲಿ ಶುಕ್ರವಾರ ನಡೆದ ಮಾಜಿ ಮುಖ್ಯಮಂತ್ರಿ ಜೆ.ಎಚ್.ಪಟೇಲ್ ಅವರ 25ನೇ ಪುಣ್ಯ ಸ್ಮರಣೋತ್ಸವ ಕಾರ್ಯಕ್ರಮದಲ್ಲಿ ಗಣ್ಯರು, ಜೆ.ಎಚ್‌.ಪಟೇಲ್‌ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು    

ಕೋಲಾರ: ಜೆ.ಎಚ್‌.ಪಟೇಲ್ ಹಲವಾರು ಒಳ್ಳೆಯ ಕೆಲಸ ಮಾಡಿದ್ದಾರೆ. ಅವುಗಳು ಹೆಚ್ಚಾಗಿ ಪ್ರಚಾರ ಮಾಡಲಿಲ್ಲ. ಆದರೆ, ಮದ್ಯ ಹಾಗೂ ‌ಹೆಣ್ಣಿನ ವಿಚಾರಗಳು ಮುಂಚೂಣಿಗೆ ಬಂದವು. ವ್ಯಕ್ತಿಯನ್ನು ಕೊಲ್ಲಲು ಬಾಂಬ್‌ ಹಾಕುವುದು, ಶೂಟ್ ಮಾಡುವುದಕ್ಕಿಂತ ಚಾರಿತ್ರ್ಯವಧೆ ಮಾಡಿದರೆ ಬೇಗನೇ ‌ಸಾಯಿಸಬಹುದು ಎಂದು ವಿಧಾನಸಭೆ ಮಾಜಿ ಅಧ್ಯಕ್ಷ ಕೆ.ಆರ್.ರಮೇಶ್‍ ಕುಮಾರ್ ಬೇಸರ ವ್ಯಕ್ತಪಡಿಸಿದರು.

ನಗರದ ಕನ್ನಡ ಭವನದಲ್ಲಿ ಶುಕ್ರವಾರ ಜೆ.ಎಚ್.ಪಟೇಲ್ ಪ್ರತಿಷ್ಠಾನದಿಂದ ಹಮ್ಮಿಕೊಂಡಿದ್ದ ಮಾಜಿ ಮುಖ್ಯಮಂತ್ರಿ ಜೆ.ಎಚ್.ಪಟೇಲ್ ಅವರ 25ನೇ ಪುಣ್ಯ ಸ್ಮರಣೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಈಗಿನ ಪರಿಸ್ಥಿತಿಯಲ್ಲಿ ವೋಟ್ ಹಾಕುವವರು, ವೋಟ್ ಹಾಕಿಸಿ ಕೊಳ್ಳುವವರು ಸೇರಿದಂತೆ ಯಾರಿಗೂ ನಿಷ್ಠೆ ಇಲ್ಲವಾಗಿದೆ. ಆದರೆ, ಜವಾಬ್ದಾರಿ ಇಲ್ಲದವರು ಗೆಲ್ಲುವುದು ಅಚ್ಚರಿಯಾಗಿ ಉಳಿದಿದೆ ಎಂದು ಬೇಸರ ವ್ಯಕ್ತಪಡಿಸಿದರು.

ADVERTISEMENT

ವಿಧಾನಸೌಧದಲ್ಲಿ ಅಧಿವೇಶನ ನಡೆಯುವಾಗ ಕೆಲ ಮಹಿಳೆಯರು ಕಸ ಗುಡಿಸುವ, ಸ್ವಚ್ಛತೆಗೊಳಿಸುವ ಕೆಲಸ ಮಾಡುತ್ತಿದ್ದರು. ಅಧಿವೇಶನ ಮುಗಿದರೆ ಅವರಿಗೆ ಕೆಲಸ ಇರುತ್ತಿರಲಿಲ್ಲ. ಹೀಗಾಗಿ, ಅವರನ್ನು ಕಾಯಂಗೊಳಿಸುವ ಸಂಬಂಧ ನಾನು ಅಧಿಕಾರಿಗಳ ಜೊತೆ ಚರ್ಚಿಸಿ ಜೆ.ಎಚ್‌.ಪಟೇಲ್ ಗಮನಕ್ಕೆ ತಂದೆ. ಅದಕ್ಕೆ ಅವರು ಹಸಿರು ನಿಶಾನೆ ನೀಡಿದರು. 37 ಮಹಿಳೆಯರಿಗೆ‌ ಕೆಲಸ‌ ಸಿಕ್ಕಿತ್ತು. ಇಂಥ ಹತ್ತಾರು ಉತ್ತಮ ಕೆಲಸಕ್ಕೆ ಅವರು ಕಾರಣರಾಗಿದ್ದಾರೆ ಎಂದು ನೆನಪಿಸಿಕೊಂಡರು.

ರಾಜಕಾರಣಿಗಳು, ಅಧಿಕಾರಿಗಳಿಗೆ ಹೃದಯ ತಲೆಯಲ್ಲಿ ಇರಬೇಕು, ಜನಪರವಾಗಿರಬೇಕು‌ ಎಂದು ಪಟೇಲ್ ಹೇಳುತ್ತಿದ್ದರು ಎಂದು ಸ್ಮರಿಸಿದರು.

ಆಗಿನ ಘಟಾನುಘಟಿ ಹಲವು ನಾಯಕರು ತಮ್ಮನ್ನು ಮುಖ್ಯಮಂತ್ರಿ ಮಾಡಿ ಎಂದು ಯಾರನ್ನೂ ಗೋಗರೆಯಲಿಲ್ಲ, ಅಧಿಕಾರ ವ್ಯಾಮೋಹವೂ ಇರಲಿಲ್ಲ. ಆದರೆ, ಅಧಿಕಾರ ಪಡೆದುಕೊಳ್ಳಲು ಈಗ ಪಲ್ಟಿ ಹೊಡೆಯುತ್ತಾರೆ ಎಂದು ಸೂಕ್ಷ್ಮವಾಗಿ ಹೇಳಿದರು.

ಅಕ್ಷರಸ್ಥರಲ್ಲಿ ಇರುವಷ್ಟು ಭ್ರಷ್ಟಾಚಾರ, ಅನ್ಯಾಯ ಬೇರೆಲ್ಲೂ ಇಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಮೂರ್ತಿ ವಿ.ಗೋಪಾಲಗೌಡ ಮಾತನಾಡಿ, ‘ಜೆ.ಎಚ್.ಪಟೇಲ್‌ ರಾಜಕೀಯ ಮುತ್ಸದ್ಧಿ. ಸಮಾಜವಾದದ ಪಥದಲ್ಲಿ ಆಡಳಿತ ನಡೆಸಲು ಪ್ರಾಮಾಣಿಕ ಪ್ರಯತ್ನ ‌ಮಾಡಿದರು. ಅವರ ಚಿಂತನೆ ಪ್ರಸ್ತುತ ಕಾಲಕ್ಕೆ ಅಗತ್ಯವಾಗಿದೆ. ಅಂಥ ನಾಯಕರನ್ನು ಸೃಷ್ಟಿಸಬೇಕಿದೆ. ಅವರೊಬ್ಬ ‌ಮಾದರಿ‌ ನಾಯಕ’ ಎಂದು ಬಣ್ಣಿಸಿದರು.

ಸದ್ಯ ಸಂಸದೀಯ ಪ್ರಜಾಪ್ರಭುತ್ವ ವಿಫಲವಾಗಿದೆ. ಇದರಿಂದ ಸಮಾಜದಲ್ಲಿ ಅವ್ಯವಸ್ಥೆ ನಿರ್ಮಾಣವಾಗಿದೆ. ರಾಜಕೀಯ ಅಪರಾಧೀಕರಣವಾಗಿದೆ ಎಂದು ವೇದಿಕೆಯಲ್ಲಿದ್ದ ಗಣ್ಯರು ಹೇಳಿದ್ದನ್ನು ಅವರು ಅನುಮೋದಿಸಿದರು.

ಅತ್ಯಾಚಾರಕ್ಕೆ ಸಂಬಂಧಿಸಿದಂತೆ ಸ್ವಾಮೀಜಿಯೊಬ್ಬರು ಖುಲಾಸೆಗೊಂಡರು. ಆದರೆ, ರಾಜ್ಯ ಸರ್ಕಾರ ಮೇಲ್ಮನವಿ ‌ಸಲ್ಲಿಸಲಿಲ್ಲ. ಬದಲಾಗಿ ಸಂತ್ರಸ್ತ ಬಾಲಕಿಯರು ಮೇಲ್ಮನವಿ ಸಲ್ಲಿಸಿದ್ದಾರೆ. ಶ್ರೀಮಂತರಿಗೆ ಒಂದು ನ್ಯಾಯ, ಬಡವರಿಗೆ ಒಂದು ನ್ಯಾಯ, ಧರ್ಮದರ್ಶಿಗಳಿಗೆ ಒಂದು ನ್ಯಾಯ. ಇದೆಂಥಾ ಆಡಳಿತ ವ್ಯವಸ್ಥೆ, ಇದೆಂಥಾ ಸಮಾಜ ಎಂದು ಪ್ರಶ್ನಿಸಿದರು.

ದೇಶದಲ್ಲಿ ಶೇ 50ರಷ್ಟು ಅವಿದ್ಯಾವಂತರಿದ್ದಾರೆ. ಅವರಿಂದಲೇ ಈ ದೇಶ ಇನ್ನೂ ಉಳಿದಿದೆ. ರಾಜಕಾರಣಿಗಳು ಹಾಗೂ ಅಧಿಕಾರಿಗಳಿಂದಲೇ ಹೆಚ್ಚು ಅವ್ಯವಸ್ಥೆ ಉಂಟಾಗಿದೆ ಎಂದು ಟೀಕಿಸಿದರು.

ನಾಗಲಾಪುರ ಮಠದ ತೇಜೇಶಲಿಂಗ ಸ್ವಾಮೀಜಿ ಮಾತನಾಡಿ, ‘ಬಸವಣ್ಣನವರ ಮಾತಿನಂತೆ‌ ನುಡಿದು, ನಡೆದುಕೊಂಡವರು ಜೆ.ಎಚ್‌.ಪಟೇಲ್‌. ಅವರೊಬ್ಬ ಉತ್ತಮ ಆಡಳಿತಗಾರ. ಅವರ ನಾಯಕರು ಅಗತ್ಯವಿದೆ. ಭ್ರಷ್ಟಾಚಾರ ಮುಕ್ತ ಸಮಾಜ ನಿರ್ಮಾಣ ಮಾಡಬೇಕಿದೆ’ ಎಂದು‌ ಸಲಹೆ ನೀಡಿದರು.

ಪ್ರತಿಷ್ಠಾನದ ವ್ಯವಸ್ಥಾಪಕ ಧರ್ಮದರ್ಶಿ ಮಹಿಮ ಪಟೇಲ್ ಮಾತನಾಡಿ, ‘ಶಿಕ್ಷಣ ಕ್ಷೇತ್ರ ಮಾರಾಟದ ವಸ್ತುವಾಗಿದ್ದು, ದಾರಿ ತಪ್ಪಿದೆ. ಆರೋಗ್ಯ ಕ್ಷೇತ್ರ ಎಂಬುದು ಹಣದ ಹಿಂದೆ ಬಿದ್ದಿದೆ.‌ ಲಾಭ ಹಾಗೂ ಹಣಕಾಸಿನದ್ದು ಮಾತ್ರ ಸಂಬಂಧ‌ ಎಂಬಂತಾಗಿದೆ. ಪರಿಸರ ಹಾಗೂ ರೈತರ ಸಮಸ್ಯೆಗಳನ್ನು ಆಲಿಸುವವರೇ ಇಲ್ಲ. ಪ್ರಸ್ತುತ ರೈತ‌ ಸಂಘಗಳ ಪರಿಸ್ಥಿತಿ ಏನು ಎಂಬುದು ಎಲ್ಲರಿಗೂ ಗೊತ್ತಿದೆ’ ಎಂದರು.

ಮಾಜಿ ಸಭಾಪತಿ ವಿ.ಆರ್‌.ಸುದರ್ಶನ್‌ ಹಾಗೂ ವಕೀಲ ಸಿ.ಎಸ್.ದ್ವಾರಕನಾಥ್ ಹಾಗೂ ಮಾಜಿ ಶಾಸಕ ಎಂ.ನಾರಾಯಣಸ್ವಾಮಿ ಮಾತನಾಡಿದರು. ಜೆಡಿಯು ಮುಖಂಡ ಡಾ.ಕೆ.ನಾಗರಾಜ್ ಕಾರ್ಯಕ್ರಮ ನಿರೂಪಿಸಿದರು.

ಪ್ರತಿಷ್ಠಾನದ ಅಧ್ಯಕ್ಷ ತ್ರಿಶೂಲಪಾಣಿ ಪಟೇಲ್, ಧರ್ಮದರ್ಶಿ ಟಿ.ಪ್ರಭಾಕರ್, ತೇಜಸ್ವಿ ಪಟೇಲ್ ಹಾಗೂ ಜೆ.ಎಚ್‌.ಪಟೇಲ್‌ ಅಭಿಮಾನಿಗಳು ಇದ್ದರು.

ನೆಹರೂ ವಿರುದ್ಧ ಟೀಕೆ; ಗೋಪಾಲಗೌಡ ಆಕ್ಷೇಪ ದೇಶಕ್ಕೆ ನೆಹರೂ ಹಾಗೂ ಇಂದಿರಾ ಗಾಂಧಿ ನೀಡಿದ ಕೊಡುಗೆಯನ್ನು ಯಾರೂ ಮರೆಯಬಾರದು‌. ಆದರೆ ಸಂಸತ್ತಿನಲ್ಲಿ ಈಚೆಗೆ ವಂದೇ ಮಾತರಂ ವಿಚಾರ ಚರ್ಚಿಸಿ ಅರ್ಧ ಸತ್ಯ ‌ಹೇಳಲಾಗಿದೆ. ಸತ್ಯಗಳನ್ನು ಮರೆಮಾಚಲಾಗಿದೆ. ಈ ಸಂಬಂಧ ಚರಿತ್ರೆಯನ್ನು ಸರಿಯಾಗಿ ಹೇಳಿಲ್ಲ ಎಂದು ನಿವೃತ್ತ ನ್ಯಾಯಮೂರ್ತಿ ಗೋಪಾಲಗೌಡ ಆಕ್ರೋಶ ವ್ಯಕ್ತಪಡಿಸಿದರು. ಪ್ರಧಾನಿ ಹಾಗೂ ಗೃಹ ‌ಮಂತ್ರಿ ಸುಳ್ಳು ಹೇಳಿದ್ದಾರೆ. ನೆಹರೂ ಕುರಿತು ತುಚ್ಛವಾಗಿ ಮಾತನಾಡಿದ್ದಾರೆ‌. ದೇಶದ ಚರಿತ್ರೆ ನಾಶ‌ಮಾಡುತ್ತಿದ್ದಾರೆ. ನಿರುದ್ಯೋಗ ಸಮಸ್ಯೆ ಬಗೆಹರಿಸುವ ಕಾಳಜಿ ಸರ್ಕಾರಗಳಿಗೆ ಇಲ್ಲವಾಗಿದೆ. ಈಚೆಗೆ ರಾದ್ಧಾಂತಕ್ಕೆ ಕಾರಣವಾದ ವಿಮಾನಯಾನ ಸಮಸ್ಯೆ ಬಗ್ಗೆ ಪ್ರಧಾನಿ‌ ಮಾತನಾಡುತ್ತಿಲ್ಲ. ಇದು ದುರಂತ ಎಂದರು.

‘ಮಾತನಾಡುವುದೊಂದು ತೀರ್ಪು ನೀಡುವುದು ಮತ್ತೊಂದು

ಕೆಲ ನ್ಯಾಯಮೂರ್ತಿಗಳು ವಿಚಾರ ಸಂಕಿರಣ ಕಾರ್ಯಾಗಾರಗಳಲ್ಲಿ ಸಂವಿಧಾನ ಸಮಾಜ ಮಹಿಳೆಯರ ಹಕ್ಕುಗಳು ಪರಿಶಿಷ್ಟ ಜಾತಿ ಪಂಗಡದ ಹಕ್ಕುಗಳ ಕುರಿತು ಒಳ್ಳೊಳ್ಳೆ ಮಾತುನಾಡುತ್ತಾರೆ. ಆದರೆ ನ್ಯಾಯದಾನ ಮಾಡುವಾಗ ತೀರ್ಪುಗಳಲ್ಲಿ ಅವು ಅನುಷ್ಠಾಕ್ಕೆ ಬರುತ್ತಿಲ್ಲ. ಅಂಥ ವ್ಯವಸ್ಥೆ ನ್ಯಾಯಾಲಯದಲ್ಲಿ ಇದೆ. ಇದು ವೇದನೆಯ ವಿಚಾರ. ಮಹಿಳೆಯರು ಯುವಕರು ಕಾರ್ಮಿಕರ ಬಗ್ಗೆ ರೈತರ ಬಗ್ಗೆ ನ್ಯಾಯ ಇಲ್ಲವಾಗಿದೆ ಎಂದು ನಿವೃತ್ತ ನ್ಯಾಯಮೂರ್ತಿ ಗೋಪಾಲಗೌಡ ಟೀಕಿಸಿದರು.

ನನ್ನ ಆರೋಗ್ಯದ ಗುಟ್ಟೇನು ಗೊತ್ತಾ?

ತಮ್ಮ ಆರೋಗ್ಯ ಗುಟ್ಟನ್ನು ವಿಧಾನಸಭೆ ಮಾಜಿ ಅಧ್ಯಕ್ಷ ರಮೇಶ್ ಕುಮಾರ್‌ ಕಾರ್ಯಕ್ರಮದಲ್ಲಿ ಹಂಚಿಕೊಂಡರು. ‘ನಾನು ಟಿ.ವಿ ನೋಡಲ್ಲ ಪತ್ರಿಕೆ ಓದಲ್ಲ. ಹೀಗಾಗಿ ನಾನು ಆರೋಗ್ಯದಿಂದ ಕೂಡಿರಲು ಸಾಧ್ಯವಾಗಿದೆ’ ಎಂದು ಹೇಳಿದರು. ನಾನು ಸೋತಿದ್ದೇನೆ ಅಷ್ಟೆ; ನಿವೃತ್ತನಾಗಿಲ್ಲ. ಹೋರಾಟ ಮುಂದುವರಿಸುತ್ತೇನೆ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.