ಕೆಜಿಎಫ್: ಬಹು ನಿರೀಕ್ಷಿತ ಚೆನ್ನೈ–ಬೆಂಗಳೂರು ಎಕ್ಸ್ಪ್ರೆಸ್ ಕಾರಿಡಾರ್ನಲ್ಲಿ ಚಲಿಸುವ ವಾಹನಗಳಿಗೆ ಶುಲ್ಕ ವಿಧಿಸುವ ಪ್ರಕ್ರಿಯೆಯನ್ನು ಗುರುವಾರದಿಂದಲೇ ಆರಂಭಿಸಲಾಗಿದೆ. ಇಷ್ಟು ದಿನ ಯಾವುದೇ ಶುಲ್ಕವಿಲ್ಲದೆ ಸಂಚರಿಸುತ್ತಿದ್ದ ವಾಹನಗಳ ಮಾಲೀಕರು ಮತ್ತು ಚಾಲಕರು ಕೊಂಚ ಗಲಿಬಿಲಿಗೆ ಒಳಗಾದರು.
ಇಲ್ಲಿನ ಕೃಷ್ಣಾವರಂನಿಂದ ಹೊಸಕೋಟೆವರೆಗೆ ಚೆನ್ನೈ–ಬೆಂಗಳೂರು ಎಕ್ಸ್ಪ್ರೆಸ್ ಕಾರಿಡಾರ್ ನಿರ್ಮಾಣ ಕಾಮಗಾರಿಯು ಪೂರ್ಣಗೊಂಡ ಕೆಲವು ದಿನಗಳ ಬಳಿಕ ಪ್ರಾಯೋಗಿಕ ಸಂಚಾರಕ್ಕೆ ಅನುವು ಮಾಡಿಕೊಡಲಾಗಿತ್ತು. ಇದರಿಂದಾಗಿ ಈ ರಸ್ತೆಯಲ್ಲಿ ಯಾವುದೇ ಶುಲ್ಕವಿಲ್ಲದೆ ವಾಹನಗಳು ಸಂಚರಿಸುತ್ತಿದ್ದವು. ಇದರಿಂದಾಗಿ ಕೆಜಿಎಫ್ನಿಂದ ಕೇವಲ 45 ನಿಮಿಷಗಳಲ್ಲಿ ಹೊಸಕೋಟೆಗೆ ತಲುಪಬಹುದಿತ್ತು. ಅಲ್ಲಿಂದ ಮುಂದೆ ತುಮಕೂರು ಮಾರ್ಗದಲ್ಲಿ ತೆರಳುವ ವಾಹನಗಳು ಇದೇ ಕಾರಿಡಾರ್ನಲ್ಲಿ ಸಂಚರಿಸುತ್ತಿದ್ದವು.
ಗುರುವಾರ ಬೆಳಗ್ಗೆ ಪೂಜೆ ನೆರವೇರಿಸಿದ ಬಳಿಕ ಏಜೆನ್ಸಿ ಸಿಬ್ಬಂದಿ 8.45ರಿಂದ ಶುಲ್ಕ ವಿಧಿಸಲಾರಂಭಿಸಿದರು. ದಿಢೀರನೇ ನಡೆದ ಪ್ರಕ್ರಿಯೆಯು ವಾಹನ ಸವಾರರಲ್ಲಿ ಆಶ್ಚರ್ಯವನ್ನುಂಟು ಮಾಡಿತು. ಯಾವುದೇ ಮುನ್ಸೂಚನೆ ಇಲ್ಲದೆ ಶುಲ್ಕ ವಸೂಲಿಗೆ ಇಳಿದಿದ್ದ ಏಜೆನ್ಸಿ ವಿರುದ್ಧ ವಾಹನ ಸವಾರರು ಅಸಮಾಧಾನ ವ್ಯಕ್ತಪಡಿಸಿದರು.
ಕೃಷ್ಣಾವರಂನಿಂದ ಹೊಸಕೋಟೆಗೆ ಕಾರು, ಜೀಪು, ವ್ಯಾನ್ ಮತ್ತಿತರ ಸಣ್ಣ ವಾಹನಗಳಿಗೆ ₹155, ಮಿನಿ ಬಸ್, ಎಲ್ಸಿವಿ, ಎಲ್ಜಿವಿ ವಾಹನಗಳಿಗೆ ₹250, ಬಸ್ ಮತ್ತು ಟ್ರಕ್ಗಳಿಗೆ ₹520, ಮೂರು ಆ್ಯಕ್ಸಲ್ ವಾಣಿಜ್ಯ ವಾಹನಗಳಿಗೆ ₹570, ಭೂ ಚಾಲಿತ ಹೆವಿ ವಾಹನಗಳಿಗೆ ₹815 ಶುಲ್ಕ ನಿಗದಿ ಮಾಡಲಾಗಿದೆ ಎಂದು ಏಜೆನ್ಸಿ ಸಿಬ್ಬಂದಿ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.