ಪ್ರಜಾವಾಣಿ ವಾರ್ತೆ
ಮುಳಬಾಗಿಲು: ತಾಲ್ಲೂಕಿನ ಕೋಗಿಲೇರು ಗ್ರಾಮದಲ್ಲಿ ಮಂಗಳವಾರ ಬಾಲಕನೊಬ್ಬ ಈಜಲು ಹೋಗಿ, ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾನೆ.
ಬದರೀನಾಥ್ (12) ಮೃತ ಬಾಲಕ. ಈತ ಬೆಂಗಳೂರಿನ ನಿವಾಸಿ, ಮೂಲತಃ ಕೆಜಿಎಫ್ ತಾಲ್ಲೂಕಿನ ಕದರೀಪುರ ಗ್ರಾಮದ ರಮೇಶ್ ಕುಮಾರ್ ಎಂಬುವವರ ಮಗ.
ಬದರೀನಾಥ್ ಬೆಂಗಳೂರಿನಲ್ಲಿ ವಿಧ್ಯಾಭ್ಯಾಸ ಮಾಡುತ್ತಿದ್ದು, ರಜಾ ದಿನಗಳನ್ನು ಕಳೆಯಲೆಂದು ತನ್ನ ಅಜ್ಜಿಯ ಊರಾದ ತಾಲ್ಲೂಕಿನ ಕೋಗಿಲೇರು ಗ್ರಾಮಕ್ಕೆ ಬಂದಿದ್ದ. ಈಜುವ ಸಲುವಾಗಿಯೇ ಕೃಷಿ ಹೊಂಡದ ಮಾದರಿಯಲ್ಲಿ ಪ್ಲಾಸ್ಟಿಕ್ ಕವರನ್ನು ಹಾಕಿ ನಿರ್ಮಿಸಲಾಗಿದ್ದ ಈಜು ಕೊಳದಲ್ಲಿ ಸುಮಾರು ಮೂರು ನಾಲ್ಕು ದಿನಗಳಿಂದ ಮಧ್ಯಾಹ್ನದ ಸಮಯದಲ್ಲಿ ಈಜಾಡುತ್ತಿದ್ದ. ಅದೇ ರೀತಿಯಲ್ಲಿ ಮಂಗಳವಾರ ಮಧ್ಯಾಹ್ನ ಈಜಲೆಂದು ಕೊಳದಲ್ಲಿ ಇಳಿದ ತಕ್ಷಣ ಫಿಟ್ಸ್ ಬಂದ ರೀತಿಯಲ್ಲಿ ದೇಹ ನಿಯಂತ್ರಣ ಕಳೆದುಕೊಂಡು ಉಸಿರಾಟವನ್ನು ನಿಲ್ಲಿಸಿದ್ದಾನೆ. ಕೂಡಲೇ ತಾತ ಸಂತೋಷ್ ಎಂಬುವವರು ಮಲ್ಲನಾಯಕನಹಳ್ಳಿ ಸರ್ಕಾರಿ ಆಸ್ಪತ್ರೆಗೆ ಸಾಗಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ಸಾವನಪ್ಪಿದ್ದಾನೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದರು.
ನಂಗಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.