ADVERTISEMENT

ಜಾಲಪ್ಪ ನೇರ ನುಡಿಯ ನಿಸ್ವಾರ್ಥ ರಾಜಕಾರಣಿ: ಬಸವರಾಜ ಬೊಮ್ಮಾಯಿ ಬಣ್ಣನೆ

​ಪ್ರಜಾವಾಣಿ ವಾರ್ತೆ
Published 18 ಡಿಸೆಂಬರ್ 2021, 5:42 IST
Last Updated 18 ಡಿಸೆಂಬರ್ 2021, 5:42 IST

ಕೋಲಾರ: ‘ನಾಡು ಹಿರಿಯ ಮಾರ್ಗದರ್ಶಕರು ಹಾಗೂ ಧೀಮಂತ ನಾಯಕ ಜಾಲಪ್ಪರನ್ನು ಕಳೆದುಕೊಂಡಿದ್ದು, ಅವರ ಅಗಲಿಕೆ ಮನಸ್ಸಿಗೆ ತೀವ್ರ ನೋವು ತಂದಿದೆ. ನೇರ ನುಡಿ, ನಿಸ್ವಾರ್ಥ ರಾಜಕಾರಣಿಯಾಗಿದ್ದ ಅವರು ರಾಜ್ಯಕ್ಕೆ ನೀಡಿದ ಕೊಡುಗೆ ಅಪಾರ’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬಣ್ಣಿಸಿದರು.

ಇಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿ, ‘ರಾಜ್ಯದ ಬಗ್ಗೆ ಅಪಾರ ಪ್ರೀತಿ ಹೊಂದಿದ್ದ ಜಾಲಪ್ಪರು ಮುಲಾಜಿಲ್ಲದೆ ಸತ್ಯ ನುಡಿಯುವಂತಹ ವ್ಯಕ್ತಿತ್ವದವರಾಗಿದ್ದರು. ನಮ್ಮ ತಂದೆಯೊಂದಿಗೆ ಆತ್ಮೀಯ ಒಡನಾಟ ಹೊಂದಿದ್ದ ಅವರು ಎಲ್ಲಾ ಸಮಯದಲ್ಲೂ ತಂದೆಯ ಜತೆ ಗಟ್ಟಿಯಾಗಿ ನಿಂತಿದ್ದರು. ಜಾಲಪ್ಪರು ಹಿಂದುಳಿದ ವರ್ಗಗಳ ನಾಯಕರಾಗಿ ಬೆಳೆಯಬಹುದಿತ್ತು. ಆದರೂ ಅವರು ದೇವರಾಜ ಅರಸು ಅವರಿಗೆ ಬೆಂಬಲವಾಗಿದ್ದರು’ ಎಂದರು.

‘ಹಿಂದುಳಿದ ವರ್ಗಗಳಿಂದ ಬಂದ ಜಾಲಪ್ಪ ಅವರು ಹಲವರಿಗೆ ತನು, ಮನ, ಧನ ಕೊಟ್ಟು ಬೆಳೆಸಿದ್ದಾರೆ. ಹಿಂದುಳಿದವರಿಗೆ ಸಮಾನ ಅವಕಾಶ ಸಿಗಬೇಕೆಂದು ಹೋರಾಟ ಸಹ ಮಾಡಿದರು. ಯಾರ ಊಹಿಸದಂತೆ ಕೋಲಾರ ಜಿಲ್ಲೆಯಲ್ಲಿ ವೈದ್ಯಕೀಯ ಕಾಲೇಜು ನಿರ್ಮಿಸಿ ತೋರಿಸಿದರು’ ಎಂದು ಹೇಳಿದರು.

ADVERTISEMENT

‘ಹಲವು ವರ್ಷಗಳಿಂದ ಸಕ್ರಿಯ ರಾಜಕಾರಣದಿಂದ ದೂರವಿದ್ದರೂ ಅವರ ಮಾರ್ಗದರ್ಶನ ರಾಜ್ಯಕ್ಕೆ ಅಗತ್ಯವಾಗಿತ್ತು. 97ರ ವರ್ಷದ ಅವರು 100 ವರ್ಷ ಪೂರೈಸುತ್ತಾರೆ ಎಂದು ಕುಟುಂಬ ಸದಸ್ಯರು ನಿರೀಕ್ಷಿಸಿದ್ದರು. ಆದರೆ, ವಿಧಿಯಾಟ ಬೇರೆಯಿತ್ತು. ಅವರು ಹಾಕಿಕೊಟ್ಟ ದಾರಿಯಲ್ಲಿ ನಾವೆಲ್ಲಾ ಸಾಗಬೇಕಿದೆ’ ಎಂದು ತಿಳಿಸಿದರು.

ಅಪರೂಪದ ರಾಜಕಾರಣಿ: ‘ಆರ್‌.ಎಲ್‌.ಜಾಲಪ್ಪ ಅವರು ಬಲಹೀನ ವರ್ಗಗಳ ಏಳಿಗೆಗೆ ಶ್ರಮಿಸಿದ ಅಪರೂಪದ ರಾಜಕಾರಣಿ. ಅವರು ಮೌಢ್ಯಗಳನ್ನು ನಂಬುತ್ತಿರಲಿಲ್ಲ’ ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್‌ ಸ್ಮರಿಸಿದರು.

‘ಜಾಲಪ್ಪ ಅವರು ಅಕ್ಷರ ದಾಸೋಹ ನಡೆಸಿದ್ದಾರೆ. ಗ್ರಾಮೀಣ ಭಾಗದ ಜನರಿಗೆ ಆರೋಗ್ಯ ದಾಸೋಹ ನೀಡಿದ್ದಾರೆ. ಅವರ ಇಡೀ ಬದುಕು ನಮಗೆ ಮಾರ್ಗದರ್ಶನ. ಅವರ ಬಿಟ್ಟು ಹೋದ ದಾರಿಯಲ್ಲಿ ಪ್ರಯಾಣಿಸಲು ಪ್ರಯತ್ನ ಮಾಡುತ್ತೇವೆ. ಜಾಲಪ್ಪರ ಸೇವೆ ರಾಜ್ಯಕ್ಕೆ ಬೇಕಿತ್ತು. ಅವರಂತಹ ಧೀಮಂತರು ಮತ್ತೆ ಹುಟ್ಟಿ ಬರಲಿ’ ಎಂದು ಆಶಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.