ADVERTISEMENT

ಕೊರೊನಾ ಭೀತಿ: ಆರೋಗ್ಯ ತಪಾಸಣೆ

ಜಿಲ್ಲೆಗೆ ಚೀನಾ ಎಂಜಿನಿಯರ್‌– ತಂತ್ರಜ್ಞರ ಭೇಟಿ

​ಪ್ರಜಾವಾಣಿ ವಾರ್ತೆ
Published 3 ಫೆಬ್ರುವರಿ 2020, 15:44 IST
Last Updated 3 ಫೆಬ್ರುವರಿ 2020, 15:44 IST
ಆರೋಗ್ಯ ಇಲಾಖೆ ಸಿಬ್ಬಂದಿಯು ಕೋಲಾರ ತಾಲ್ಲೂಕಿನ ನರಸಾಪುರ ಕೈಗಾರಿಕಾ ಪ್ರದೇಶದಲ್ಲಿನ ಮೊಬೈಲ್‌ ಕಂಪನಿಗೆ ಭೇಟಿ ನೀಡಿರುವ ಚೀನಾದ ಸಾಫ್ಟ್‌ವೇರ್‌ ಎಂಜಿನಿಯರ್‌ ಹಾಗೂ ತಂತ್ರಜ್ಞರ ಆರೋಗ್ಯ ತಪಾಸಣೆ ಮಾಡಿದರು.
ಆರೋಗ್ಯ ಇಲಾಖೆ ಸಿಬ್ಬಂದಿಯು ಕೋಲಾರ ತಾಲ್ಲೂಕಿನ ನರಸಾಪುರ ಕೈಗಾರಿಕಾ ಪ್ರದೇಶದಲ್ಲಿನ ಮೊಬೈಲ್‌ ಕಂಪನಿಗೆ ಭೇಟಿ ನೀಡಿರುವ ಚೀನಾದ ಸಾಫ್ಟ್‌ವೇರ್‌ ಎಂಜಿನಿಯರ್‌ ಹಾಗೂ ತಂತ್ರಜ್ಞರ ಆರೋಗ್ಯ ತಪಾಸಣೆ ಮಾಡಿದರು.   

ಕೋಲಾರ: ತಾಲ್ಲೂಕಿನ ನರಸಾಪುರ ಕೈಗಾರಿಕಾ ಪ್ರದೇಶದಲ್ಲಿರುವ ಮೊಬೈಲ್‌ ಉತ್ಪಾದನಾ ಕಂಪನಿಗೆ ಭೇಟಿ ನೀಡಿರುವ ಚೀನಾದ ಸಾಫ್ಟ್‌ವೇರ್‌ ಎಂಜಿನಿಯರ್‌ಗಳು ಹಾಗೂ ತಂತ್ರಜ್ಞರಿಗೆ ಆರೋಗ್ಯ ಇಲಾಖೆಯಿಂದ ಸೋಮವಾರ ಆರೋಗ್ಯ ತಪಾಸಣೆ ಮಾಡಲಾಯಿತು.

ವಿಸ್ಟರ್ನ್‌ ಮೊಬೈಲ್‌ ಘಟಕದಲ್ಲಿ ಸಾಫ್ಟ್‌ವೇರ್‌ ಅಳವಡಿಕೆಗಾಗಿ ಚೀನಾದಿಂದ ಎಂಜಿನಿಯರ್‌ ಹಾಗೂ ತಂತ್ರಜ್ಞರನ್ನು ಒಳಗೊಂಡ 23 ಸದಸ್ಯರ ತಂಡ ಜ.23ರಂದು ಜಿಲ್ಲೆಗೆ ಬಂದಿದೆ. ನರಸಾಪುರ ಬಳಿಯ ಖಾಸಗಿ ಹೋಟೆಲ್‌ನಲ್ಲಿ ಉಳಿದುಕೊಂಡಿರುವ ಈ ತಂಡದ ಸದಸ್ಯರ ಪೈಕಿ ಒಬ್ಬರಿಗೆ ಕೆಲ ದಿನಗಳ ಹಿಂದೆ ಶೀತ, ಜ್ವರ ಹಾಗೂ ಕೆಮ್ಮು ಕಾಣಿಸಿಕೊಂಡಿತ್ತು.

ತಂಡದ ಆ ಸದಸ್ಯನಿಗೆ ಕೊರೊನಾ ವೈರಸ್‌ ಸೋಂಕು ತಗುಲಿರುವ ಶಂಕೆ ವ್ಯಕ್ತವಾದ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆ ಅಧಿಕಾರಿಗಳು ರಕ್ತ ಹಾಗೂ ಕಫಾ ಮಾದರಿ ಸಂಗ್ರಹಿಸಿ ಹೆಚ್ಚಿನ ಪರಿಶೀಲನೆಗಾಗಿ ಪುಣೆಯ ರಾಷ್ಟ್ರೀಯ ರೋಗ ಸೂಕ್ಷ್ಮಾಣು ಅಧ್ಯಯನ ಸಂಸ್ಥೆಗೆ (ಎನ್‌ಐವಿ) ಕಳುಹಿಸಿದ್ದರು. ಎನ್‌ಐವಿ ತಜ್ಞರು ತಂಡದ ಸದಸ್ಯನಿಗೆ ಕೊರೊನಾ ವೈರಸ್‌ ಸೋಂಕು ಇಲ್ಲ ಎಂದು ವರದಿ ನೀಡಿದ್ದಾರೆ. ಮೊಬೈಲ್‌ ಕಂಪನಿ ಆಡಳಿತ ಮಂಡಳಿಯು ಮುನ್ನೆಚ್ಚರಿಕೆ ಕ್ರಮವಾಗಿ ಆ ಸದಸ್ಯನನ್ನು ಚೀನಾಕ್ಕೆ ವಾಪಸ್‌ ಕಳುಹಿಸಿದೆ.

ADVERTISEMENT

ಕೊರೊನಾ ವೈರಸ್‌ ಸೋಂಕಿನ ಆತಂಕದ ಹಿನ್ನೆಲೆಯಲ್ಲಿ ವೈದ್ಯರು ಹೋಟೆಲ್‌ನಲ್ಲಿ ಉಳಿದುಕೊಂಡಿರುವ ಚೀನಾ ತಂಡದ ಎಲ್ಲಾ ಸದಸ್ಯರ ಆರೋಗ್ಯ ತಪಾಸಣೆ ಮಾಡಿದ್ದಾರೆ.

ಆತಂಕದ ಅಗತ್ಯವಿಲ್ಲ: ‘ಜಿಲ್ಲೆಗೆ ಭೇಟಿ ನೀಡಿರುವ ಚೀನಾ ತಂಡದ ಸದಸ್ಯರ ಆರೋಗ್ಯ ತಪಾಸಣೆ ಮಾಡಲಾಗಿದ್ದು, ಸದಸ್ಯರಲ್ಲಿ ಕೊರೊನಾ ವೈರಸ್ ಸೋಂಕಿನ ಲಕ್ಷಣ ಕಂಡುಬಂದಿಲ್ಲ. ಹೀಗಾಗಿ ಜಿಲ್ಲೆಯ ಜನ ಆತಂಕಪಡುವ ಅಗತ್ಯವಿಲ್ಲ’ ಎಂದು ಜಿಲ್ಲಾಧಿಕಾರಿ ಜೆ.ಮಂಜುನಾಥ್‌ ಸುದ್ದಿಗಾರರಿಗೆ ತಿಳಿಸಿದರು.

‘ಚೀನಾ ತಂಡದ ಸದಸ್ಯರು ಫೆಬ್ರುವರಿ ಅಂತ್ಯದವರೆಗೆ ನರಸಾಪುರದ ಬಳಿಯ ಖಾಸಗಿ ಹೊಟೆಲ್‌ನಲ್ಲಿ ಇರುತ್ತಾರೆ. ಅವರ ಕೆಲಸ ಪೂರ್ಣಗೊಂಡ ಬಳಿಕ ಚೀನಾಕ್ಕೆ ಹಿಂದಿರುಗುತ್ತಾರೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.