ಕೆಜಿಎಫ್: ರಾಬರ್ಟ್ಸನ್ಪೇಟೆಯ ಸಲ್ಡಾನ ವೃತ್ತದಲ್ಲಿ ಶನಿವಾರ ರಾತ್ರಿ ದುಷ್ಕರ್ಮಿಗಳು ಮಾರಕಾಸ್ತ್ರ ಹಿಡಿದು ಮದ್ಯದ ಅಂಗಡಿಯಲ್ಲಿ ಸುಲಿಗೆ ಮಾಡಿದ್ದಾರೆ.
ರಾತ್ರಿ ಸುಮಾರು 9.15ರ ಸಮಯದಲ್ಲಿ ಜನನಿಬಿಡ ಸಲ್ಡಾನ ವೃತ್ತದಲ್ಲಿರುವ ಮದ್ಯದ ಅಂಗಡಿಗೆ ಬಂದ ದುಷ್ಕರ್ಮಿಗಳು ಮದ್ಯ ಉಚಿತವಾಗಿ ನೀಡುವಂತೆ ಇಲ್ಲವೇ ಹಣ ಕೊಡುವಂತೆ ಒತ್ತಾಯಿಸಿದರು. ಈ ಸಂದರ್ಭದಲ್ಲಿ ಸುಸೈಪಾಳ್ಯದ ಎಡ್ವಿನ್ ಎಂಬುವವರು ಲಾಂಗ್ ಹಿಡಿದು ಅಂಗಡಿಯ ಕ್ಯಾಷಿಯರ್ಗೆ ಬೆದರಿಕೆ ಹಾಕಿದ್ದಾರೆ.
ಅಲ್ಲದೆ ರಸ್ತೆಯಲ್ಲಿ ಹೋಗಿ ಬರುವವರಿಗೂ ಲಾಂಗ್ ತೋರಿಸಿ ಬೆದರಿಕೆ ಹಾಕುತ್ತಿದ್ದರು. ಭಯಗೊಂಡ ಅಂಗಡಿ ಕ್ಯಾಷಿಯರ್ ಕುಮಾರ್ ಎರಡು ಬಿಯರ್ ಬಾಟಲಿಯನ್ನು ಉಚಿತವಾಗಿ ನೀಡಿದರು. ಈ ಎಲ್ಲಾ ಸನ್ನಿವೇಶಗಳನ್ನು ದುಷ್ಕರ್ಮಿಯೊಬ್ಬರು ತನ್ನ ಮೊಬೈಲ್ನಲ್ಲಿ ಚಿತ್ರೀಕರಿಸಿಕೊಂಡಿದ್ದರು. ಅದನ್ನು ಕುಡಿದ ಅಮಲಿನಲ್ಲಿ ಇತರರ ಮೊಬೈಲ್ಗೆ ಕಳಿಸಿದ್ದಾರೆ. ಆ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದೆ.
ಆರೋಪಿ ಎಡ್ವಿನ್ ಈಚೆಗೆ ಮತ್ತೊಂದು ಗುಂಪಿನಿಂದ ಹತ್ಯೆ ಯಾದ ಸ್ಟಾನ್ಲಿ ಎಂಬಾತನ ಸಹಚರ ಎಂದು ಮೂಲಗಳು ತಿಳಿಸಿವೆ.
‘ಆರೋಪಿ ಪತ್ತೆಗಾಗಿ ಕ್ರಮ ವಹಿಸಲಾಗಿದೆ. ಆರೋಪಿಯ ಜತೆಗೆ ಬೇರೆ ಯಾರಿದ್ದರು ಎಂಬುದು ತಿಳಿಯಬೇಕಾಗಿದೆ. ಅಂಗಡಿಯ ಕ್ಯಾಷಿಯರ್ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಾಗಿದೆ’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಇಲಕ್ಕಿಯಾ ಕರುಣಾಕರನ್ ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.