ADVERTISEMENT

ದಾಸಿಮಯ್ಯ ವಚನ ಸಾಹಿತ್ಯದ ಆದ್ಯ ಪ್ರವರ್ತಕ

ವಚನಗಳು ಸಾರ್ವಕಾಲಿಕ: ಜಿಲ್ಲಾಧಿಕಾರಿ ವೆಂಕಟ್‌ರಾಜಾ ಬಣ್ಣನೆ

​ಪ್ರಜಾವಾಣಿ ವಾರ್ತೆ
Published 6 ಏಪ್ರಿಲ್ 2022, 13:41 IST
Last Updated 6 ಏಪ್ರಿಲ್ 2022, 13:41 IST
ಜಿಲ್ಲಾಡಳಿತವು ಕೋಲಾರದಲ್ಲಿ ಬುಧವಾರ ಹಮ್ಮಿಕೊಂಡಿದ್ದ ದೇವರ ದಾಸಿಮಯ್ಯ ಜಯಂತಿಯಲ್ಲಿ ಜಿಲ್ಲಾಧಿಕಾರಿ ವೆಂಕಟ್‌ರಾಜಾ ದಾಸಿಮಯ್ಯರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು
ಜಿಲ್ಲಾಡಳಿತವು ಕೋಲಾರದಲ್ಲಿ ಬುಧವಾರ ಹಮ್ಮಿಕೊಂಡಿದ್ದ ದೇವರ ದಾಸಿಮಯ್ಯ ಜಯಂತಿಯಲ್ಲಿ ಜಿಲ್ಲಾಧಿಕಾರಿ ವೆಂಕಟ್‌ರಾಜಾ ದಾಸಿಮಯ್ಯರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು   

ಕೋಲಾರ: ‘ದೇವರ ದಾಸಿಮಯ್ಯರು 11ನೇ ಶತಮಾನದ ನೇಕಾರ ಸಂತ. ಅವರು ಮೇಲ್ವರ್ಗ ಹಾಗೂ ಕೆಳ ವರ್ಗವೆಂಬ ಬೇಧವಿಲ್ಲದೆ ವಚನಗಳ ಮೂಲಕ ಸಮಾನತೆ ಮೂಡಿಸಲು ಪ್ರಯತ್ನಿಸಿದರು. ಅವರ ವಚನಗಳನ್ನು ಓದುವ ಮೂಲಕ ಸ್ವಸ್ಥ ಸಮಾಜ ನಿರ್ಮಾಣ ಮಾಡಬೇಕು’ ಎಂದು ಜಿಲ್ಲಾಧಿಕಾರಿ ವೆಂಕಟ್‌ರಾಜಾ ಕಿವಿಮಾತು ಹೇಳಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಇಲ್ಲಿ ಬುಧವಾರ ಹಮ್ಮಿಕೊಂಡಿದ್ದ ದೇವರ ದಾಸಿಮಯ್ಯ ಜಯಂತಿಯಲ್ಲಿ ಮಾತನಾಡಿ, ‘ದಾಸಿಮಯ್ಯ ವೃತ್ತಿಯಲ್ಲಿ ನೇಕಾರರಾಗಿದ್ದರು. ಸಮಾಜದಲ್ಲಿ ತುಳಿತಕ್ಕೆ ಒಳಗಾದವರಲ್ಲಿ ಜಾಗೃತಿ ಮೂಡಿಸಲು ಸಾವಿರಾರು ವಚನಗಳನ್ನು ರಚಿಸಿದ ಅವರು ವಚನ ಸಾಹಿತ್ಯದ ಆದ್ಯ ಪ್ರವರ್ತಕರು’ ಎಂದು ಬಣ್ಣಿಸಿದರು.

‘ಯಾದಗಿರಿ ಜಿಲ್ಲೆ ಸುರಪುರ ತಾಲ್ಲೂಕಿನ ಮುದನೂರು ಗ್ರಾಮದಲ್ಲಿ ಜನಿಸಿದ ದಾಸಿಮಯ್ಯ ಬಾಲ್ಯದಿಂದಲೇ ರಾಮನಾಥನನ್ನು ಆರಾಧ್ಯ ದೈವವಾಗಿಸಿಕೊಂಡು ಪೂಜಿಸುತ್ತಿದ್ದರು. ಲೋಕ ಕಲ್ಯಾಣಾರ್ಥ ದೇಶ ಪರ್ಯಟನೆ ಮಾಡಿ ಹಿಂಸೆ ವೃತ್ತಿಯಲ್ಲಿ ತೊಡಗಿದ್ದ ಬೇಟೆಗಾರರಿಗೆ ಜ್ಞಾನೋಪದೇಶ ನೀಡಿದರು. ವಚನಕಾರರಾದ ಬಸವಣ್ಣ, ಅಲ್ಲಮಪ್ರಭು, ಅಕ್ಕಮಹಾದೇವಿ, ಸಿದ್ದರಾಮ ಅವರು ವಚನಗಳನ್ನು ರಚಿಸುವ ಮೊದಲೇ ದೇವರ ದಾಸಿಮಯ್ಯ ವಚನಗಳನ್ನು ರಚಿಸಿ ಮೊದಲ ವಚನಕಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ’ ಎಂದು ಸ್ಮರಿಸಿದರು.

ADVERTISEMENT

‘ದಾಸಿಮಯ್ಯರ ವಚನಗಳು ಸಾರ್ವಕಾಲಿಕ. ಅವರು ಸಮಾಜಕ್ಕೆ ಮತ್ತು ಸಮುದಾಯಕ್ಕೆ ಅಪಾರ ಕೊಡುಗೆ ನೀಡಿದ್ದಾರೆ. ಸಾಮಾಜಿಕ ನ್ಯಾಯ ಪ್ರತಿಪಾದಿಸುವ ವಚನ ಸಾಹಿತ್ಯವನ್ನು ಪ್ರತಿಯೊಬ್ಬರು ಅಧ್ಯಯನ ಮಾಡಬೇಕು. ಜತೆಗೆ ವಚನಕಾರರ ಆದರ್ಶ ಮತ್ತು ತತ್ವಗಳನ್ನು ಮೈಗೂಡಿಸಿಕೊಳ್ಳಬೇಕು. ದಾಸಿಮಯ್ಯರ ಆಶಯ, ಚಿಂತನೆ ಮತ್ತು ಆದರ್ಶಗಳನ್ನು ಬದುಕಿನಲ್ಲಿ ಅಳವಡಿಸಿ­ಕೊಂಡರೆ ಉತ್ತಮ ಸಮಾಜ ನಿರ್ಮಾಣ ಸಾಧ್ಯ’ ಎಂದು ಅಭಿಪ್ರಾಯಪಟ್ಟರು.

ಪ್ರಥಮ ವಚನಕಾರ: ‘ದಾಸಿಮಯ್ಯರ ತಂದೆ ರಾಮಯ್ಯ ಮತ್ತು ತಾಯಿ ಶಂಕರಿ. ಇವರು ನೇಯ್ಗೆ ಕಾಯಕ ಮಾಡುತ್ತಿದ್ದರು. ವಚನಕಾರರ ಯುಗದಲ್ಲಿ ಪ್ರಥಮ ವಚನಕಾರರಾಗಿ ದಾಸಿಮಯ್ಯ ಗುರುತಿಸಿಕೊಂಡಿದ್ದರು. ಬಾಲ್ಯದಿಂದಲೂ ಶಿವ ಭಕ್ತರಾಗಿದ್ದುಕೊಂಡು ವ್ಯವಸಾಯದೊಂದಿಗೆ ಸಮಾಜ ಕಟ್ಟುವ ಕೆಲಸ ಮಾಡಿದ್ದಾರೆ. ಅವರು ವಚನಗಳ ಮೂಲಕ ಜೀವನದಲ್ಲಿ ಭಕ್ತಿ ಮತ್ತು ನಡತೆಗಳ ಬಗ್ಗೆ ಅರಿವು ಮೂಡಿಸಿದರು’ ಎಂದು ವಿವರಿಸಿದರು.

‘ನೇಕಾರ ಸಮುದಾಯ ಆರ್ಥಿಕವಾಗಿ, ಶೈಕ್ಷಣಿಕವಾಗಿ ಹಿಂದುಳಿದಿದೆ. ಸಮುದಾಯದ ಪೋಷಕರು ಮಕ್ಕಳನ್ನು ಸುಶಿಕ್ಷಿತರಾಗಿ ಮಾಡಬೇಕು. ನೇಕಾರ ವೃತ್ತಿಯನ್ನೇ ನಂಬಿ ಬದುಕು ನಡೆಸುವುದು ಸಾಧ್ಯವಿಲ್ಲ. ಈ ವೃತ್ತಿಯ ಜತೆಗೆ ಉಪ ಕಸುಬುಗಳನ್ನು ಮಾಡಬೇಕು. ಜತೆಗೆ ಸಮುದಾಯದವರು ಸಂಘಟಿತರಾಗಬೇಕು’ ಎಂದು ಸಲಹೆ ನೀಡಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ನರೇಂದ್ರಬಾಬು, ನೇಕಾರ ಸಮುದಾಯದ ಮುಖಂಡರಾದ ಶ್ರೀನಿವಾಸ್‌, ಲೋಕೇಶ್‌, ವಿನಯ್‌, ಪ್ರಶಾಂತ್, ನಂಜುಂಡೇಶ್ವರ, ಮುನಿನಾರಾಯಣ ಬಾಬು ಪಾಲ್ಗೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.