ಕೋಲಾರ: ಆರ್ಥಿಕ ವರ್ಷ ಮುಗಿಯುವುದರ ಒಳಗೆ ಬ್ಯಾಂಕ್ ನಿಗದಿ ಪಡಿಸಿರುವ ಗುರಿಯನ್ನು ಮುಟ್ಟಬೇಕು. ಬ್ಯಾಂಕಿನ ಸಾಧನೆಗೆ ಹಿನ್ನಡೆಯಾಗುವ ಯಾವುದೇ ಕೆಲಸವನ್ನು ಸಿಬ್ಬಂದಿ ಮಾಡಿದರೆ ಅದನ್ನು ಸಹಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ ಹೇಳಿದರು.
ನಗರದಲ್ಲಿ ಶನಿವಾರ ಬ್ಯಾಂಕಿನ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದರು.
ಸಾಲ ವಸೂಲಾತಿ, ಠೇವಣಿ ಸಂಗ್ರಹಣೆ ಮುಖ್ಯ ಗುರಿಯಾಗಬೇಕು. ಪ್ರಾಮಾಣಿಕವಾಗಿ ಕೆಲಸ ಮಾಡಿದರೆ ಯಾವುದೂ ಅಸಾಧ್ಯವಲ್ಲ. ಕಳೆದ ಬಾರಿ ಎನ್ಪಿಎ ಶೇ 2:5 ಇತ್ತು. ಅದನ್ನು ಈ ಬಾರಿ ಶೇ 1ಕ್ಕೆ ತರಬೇಕು. ಬ್ಯಾಂಕ್ ಅಭಿವೃದ್ಧಿಯಾದರೆ, ಸಿಬ್ಬಂದಿ ಮತ್ತು ಗ್ರಾಹಕರು ಕೂಡ ಅಭಿವೃದ್ಧಿ ಹೊಂದುತ್ತಾರೆ ಎಂದರು.
ಚಿಂತಾಮಣಿ ತಾಲ್ಲೂಕು ವ್ಯಾಪ್ತಿಯ ಕೆಲ ಸೊಸೈಟಿಗಳು ಗಣಕೀಕೃತವಾಗಿಲ್ಲ. ಇದೇ ಮಾರ್ಚ್ 25ರೊಳಗೆ ಪೂರ್ಣಗೊಳ್ಳಬೇಕು. ಕೋಲಾರ- ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಮಹಿಳಾ ಸ್ವಸಹಾಯ ಸಂಘಗಳು ಆರ್ಥಿಕವಾಗಿ ಶಕ್ತಿಯುತವಾಗಿ ನಡೆಯುತ್ತಿವೆ. ಇ-ಶಕ್ತಿ ಯೋಜನೆಯಡಿ ಪ್ರತಿ ಮಹಿಳಾಸ್ವಸಹಾಯ ಸಂಘಗಳು ನೋಂದಣಿ ಮಾಡಿಸಬೇಕು. ಭಯ ಭಕ್ತಿಯಿಂದ ಕೆಲಸ ಮಾಡಿ, ವಹಿಸಿರುವ ಕೆಲಸ ಸಮರ್ಪಕವಾಗಿ ನಿರ್ವಹಿಸದ ಸಿಬ್ಬಂದಿಗೆ ವೇತನ ತಡೆಹಿಡಿಯಲು ಸೂಚಿಸಿದರು.
ಮೈಕ್ರೋ ಎಟಿಎಂ, ಮೊಬೈಲ್ ಬ್ಯಾಂಕಿಂಗ್ ಸೇವೆಯನ್ನು ಇಡೀ ದೇಶದಲ್ಲೇ ಮೊದಲು ನೀಡಲಾಗಿದೆ. ಈ ಯೋಜನೆಗಳಅನುಷ್ಠಾನದಲ್ಲಿ ಸಿಬ್ಬಂದಿ ಪ್ರಾಮಾಣಿಕವಾಗಿ ಕೆಲಸ ಮಾಡಿ, ಗ್ರಾಹಕರಿಗೆ ಪಾರದರ್ಶಕ ಆರ್ಥಿಕ ವಹಿವಾಟು ನಡೆಯುತ್ತಿದೆ ಎಂಬ ನಂಬಿಕೆ ಬಲಗೊಂಡರೆ ಬ್ಯಾಂಕಿನ ಪ್ರಗತಿಯ ವೇಗವೂ ಹೆಚ್ಚುತ್ತದೆಎಂದರು.
ಜನೌಷಧಿ ಮಳಿಗೆ ತೆರೆಯಲು ಯೋಜನೆ ರೂಪಿಸಲಾಗಿದೆ. ಈ ಕುರಿತು ಮಾ.17ರಂದು ಸೊಸೈಟಿ ಸಿಇಒಗಳಿಗೆ ತರಬೇತಿ ಕಾರ್ಯಾಗಾರ ರಂಗಮಂದಿರದಲ್ಲಿ ಹಮ್ಮಿಕೊಳ್ಳಲಾಗಿದೆ. ಸೊಸೈಟಿಗಳ ಅಧ್ಯಕ್ಷ, ಉಪಾಧ್ಯಕ್ಷ ಹಾಗೂ ಸಿಇಒ ಪಾಲ್ಗೊಳ್ಳಬೇಕು ಎಂದು ಹೇಳಿದರು.
ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎನ್.ವೆಂಕಟೇಶ್, ಎಜಿಎಂಗಳಾದ ಬೈರೇಗೌಡ, ಶಿವಕುಮಾರ್, ಖಲೀಂವುಲ್ಲಾ, ನಾಗೇಶ್ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.