ADVERTISEMENT

ದೇಶ ಸೇವೆಗೆ ಆಹ್ವಾನ ಬಂದರೆ ಮತ್ತೆ ಹೋಗಲು ಸಿದ್ದ

ನಿವೃತ್ತ ಯೋಧರಿಗೆ ಆತ್ಮೀಯ ಅಭಿನಂದನೆ

​ಪ್ರಜಾವಾಣಿ ವಾರ್ತೆ
Published 6 ಅಕ್ಟೋಬರ್ 2019, 16:03 IST
Last Updated 6 ಅಕ್ಟೋಬರ್ 2019, 16:03 IST
ಸೇನೆಯಿಂದ ನಿವೃತ್ತರಾಗಿ ಭಾನುವಾರ ಕೋಲಾರಕ್ಕೆ ಆಗಮಿಸಿದ ನಿವೃತ್ತ ಯೋಧರಾದ ಕೃಷ್ಣೇಗೌಡ ಹಾಗೂ ಆಂಜಿನಪ್ಪ ಅವರನ್ನು ಟೀಮ್ ಯೋಧ ನಮನ ತಂಡದ ಸದಸ್ಯರು ಸ್ವಾಗತ ಕೋರಿ ಅಭಿನಂದಿಸಿದರು.
ಸೇನೆಯಿಂದ ನಿವೃತ್ತರಾಗಿ ಭಾನುವಾರ ಕೋಲಾರಕ್ಕೆ ಆಗಮಿಸಿದ ನಿವೃತ್ತ ಯೋಧರಾದ ಕೃಷ್ಣೇಗೌಡ ಹಾಗೂ ಆಂಜಿನಪ್ಪ ಅವರನ್ನು ಟೀಮ್ ಯೋಧ ನಮನ ತಂಡದ ಸದಸ್ಯರು ಸ್ವಾಗತ ಕೋರಿ ಅಭಿನಂದಿಸಿದರು.   

ಕೋಲಾರ: ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾಗಿ ಭಾನುವಾರ ಜಿಲ್ಲೆಗೆ ಆಗಮಿಸಿದ ಇಬ್ಬರು ಯೋಧರನ್ನು ನಗರದ ಟೀಮ್ ಯೋಧ ನಮನ ತಂಡದ ಸದಸ್ಯರು ಇಲ್ಲಿನ ಕಾಲೇಜು ವೃತ್ತದಲ್ಲಿ ಅಭಿನಂದಿಸಿ ಆತ್ಮೀಯವಾಗಿ ಬರ ಮಾಡಿಕೊಂಡರು.

ಯೋಧರಾದ ತಾಲ್ಲೂಕಿನ ತೊಂಡಾಲ ಕೃಷ್ಣೇಗೌಡ, ಮುಳಬಾಗಿಲು ತಾಲ್ಲೂಕಿನ ಊರುಕುಂಟೆ ಮಿಟ್ಟೂರಿನ ಅಂಜಿನಪ್ಪ 22 ವರ್ಷಗಳ ಸೇವೆ ಮುಗಿಸಿ ನಿವೃತ್ತರಾಗಿದ್ದಾರೆ. ಅವರನ್ನು ಭಾನುವಾರ ನಗರದ ಕಾಲೇಜು ವೃತ್ತದಲ್ಲಿ ವಿವಿಧ ಸಂಘಸಂಸ್ಥೆಗಳ ಮುಖಂಡರು, ದೇಶಪ್ರೇಮಿಗಳು ಹಣೆಗೆ ತಿಲಕವಿಟ್ಟು, ಆರತಿ ಬೆಳಗಿ ಅದ್ದೂರಿಯಿಂದ ಸ್ವಾಗತಿಸಿದರು.

ಅಭಿನಂದನೆ ಸ್ವೀಕರಿಸಿ ಮಾತನಾಡಿದ ನಿವೃತ್ತ ಯೋಧ ಕೃಷ್ಣೇಗೌಡ, ‘ತಾವು 22 ವರ್ಷಗಳ ಕಾಲ ತಾಯಿಯ ಸೇವೆ ಮಾಡಿದ ಆತ್ಮತೃಪ್ತಿಯೊಂದಿಗೆ ಹಿಂದಿರುಗಿದ್ದೇವೆ. ಆದರೆ ಯಾವುದೇ ಸಂದರ್ಭದಲ್ಲೂ ಭಾರತ ದೇಶ ಸೇವೆಗೆ ಆಹ್ವಾನ ಬಂದರೆ ಮತ್ತೆ ಹೋಗಲು ಸಿದ್ದ’ ಎಂದು ತಿಳಿಸಿದರು.

ADVERTISEMENT

‘ಗಡಿ ಭದ್ರತಾಪಡೆ, ವಿದೇಶಗಳಲ್ಲಿ ಭಾರತೀಯ ಶಾಂತಿಪಾಲನೆ ಪಡೆ, ಜಮ್ಮುಕಾಶ್ಮೀರದಲ್ಲಿ ತಾವು ಸೇವೆ ಸಲ್ಲಿಸಿದ್ದು, ದೇಶಕ್ಕಾಗಿ ದುಡಿದ ಅವಧಿಯನ್ನು ಮರೆಯಲು ಸಾಧ್ಯವಿಲ್ಲ. ದೇಶ ಸೇವೆ ಮಾಡುವ ಭಾಗ್ಯ ನಮಗೆ ಸಿಕ್ಕಿದ್ದಕ್ಕಾಗಿ ಖುಷಿಯಿದೆ’ ಎಂದರು.

ನಿವತ್ತ ಯೋಧ ಆಂಜಿನಪ್ಪ ಮಾತನಾಡಿ, ‘ದೇಶಕ್ಕಾಗಿ ಹೋರಾಟ ನಡೆಸುವಾಗ ನಮಗೆ ಪ್ರಾಣ ಮುಖ್ಯವಾಗಿರಲಿಲ್ಲ. ಹೋರಾಟದಲ್ಲಿ ಭಾರರಮತೆ ರಕ್ಷಣೆಗೆ ನಮ್ಮ ಪ್ರಾಣಹೋದರೂ ನಮಗೆ ಸಿಗುವ ಸೌಭಾಗ್ಯ ಎಂದೇ ಭಾವಿಸಿ ಕೆಲಸ ಮಾಡುತ್ತಿದ್ದೇವು’ ಎಂದು ಹೇಳಿದರು.

‘21 ವರ್ಷ ತಮ್ಮ ತಂದೆ ತಾಯಿ ಮಕ್ಕಳನ್ನು ಬಿಟ್ಟು ದೇಶ ಸೇವೆ ಮಾಡಿದ್ದಕ್ಕೆ ಈಗ ನಿಜವಾದ ಗೌರವ ಸಿಕ್ಕಿದೆ. ಸೇನೆಯಿಂದ ಮಾತ್ರ ನಿವೃತ್ತಿಯಾಗಿದ್ದು, ದೇಶಸೇವೆ ಮಾಡಲು ಸದಾ ಸಿದ್ದ. ದೇಶ ಸೇವೆಯು ದೇವರ ಸೇವೆ ಇದ್ದಂತೆ’ ಎಂದು ಅಭಿಪ್ರಾಯಪಟ್ಟರು.

‘ಸೇನೆಯಲ್ಲಿ ಸಾಕಷ್ಟು ಹುದ್ದೆ ಖಾಲಿಯಿದ್ದು, ಯುವಕರು ಸೇನೆಗೆ ಸೇರಬೇಕು. ಇಲ್ಲಿ ಸೇವೆ ಸಲ್ಲಿಸಿದವರು ಮನೆಗೆ ವಾಪಸ್ ಬರುವುದಿಲ್ಲ ಎಂಬ ತಪ್ಪು ಕಲ್ಪನೆಯಿರಬಾರದು. ಯಾವುದೇ ಕ್ಷೇತ್ರದಲ್ಲಿ ಕೆಲಸ ಮಾಡಿದರೂ ಗೌರವ ಸಿಗುವುದಿಲ್ಲ. ಸೇನೆಯಲ್ಲಿ ಕೆಲಸ ಮಾಡಿದವರಿಗೆ ಬೆಲೆ ಕಟ್ಟಲು ಸಾಧ್ಯವಿಲ್ಲ’ ಎಂದು ಹೇಳಿದರು.

ವಂದೇಮಾತರಂ ಸೋಮಶಂಕರ್ ಮಾತನಾಡಿ, ‘ದೇಶಭಿಮಾನ ಇರುವ ವ್ಯಕ್ತಿಗಳು ಮಾತ್ರ ದೇಶಸೇವೆಗೆ ಸೇತ್ತಾರೆ. ದೇಶದ ರಕ್ಷಣೆಗೆ ನಿಂತಿರುವ ರೈತರಿಗೆ, ಸೈನಿಕರಿಗೆ ನಿತ್ಯ ಪೂಜೆ ಮಾಡುವ ಮೂಲಕ ಅವರ ಸೇವೆಯನ್ನು ಸ್ಮರಿಸಬೇಕು’ ಎಂದು ಸಲಹೆ ನೀಡಿದರು.

ನಿವೃತ್ತ ಯೋಧ ರವಿ, ವಿವಿಧ ಸಂಘಟನೆಗಳ ಸದಸ್ಯರಾದ ಶ್ರೀಹರಿ, ನಿಖಿಲ್ ಗೌಡ, ಬಾಲಾಜಿ, ಪ್ರವೀಣ್, ತಮ್ಮೇಗೌಡ, ವೇಣುಗೋಪಾಲ್, ವಕೀಲ ಆನಂದ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.