ADVERTISEMENT

ಕೋಲಾರ: ವಿದ್ಯಾಗಮ ಅನುಷ್ಠಾನಕ್ಕೆ ಒತ್ತು ಕೊಡಿ

​ಪ್ರಜಾವಾಣಿ ವಾರ್ತೆ
Published 7 ಆಗಸ್ಟ್ 2020, 15:48 IST
Last Updated 7 ಆಗಸ್ಟ್ 2020, 15:48 IST
ಬಿಇಒ ಕೆ.ಎಸ್.ನಾಗರಾಜಗೌಡ ಕೋಲಾರದಲ್ಲಿ ಶುಕ್ರವಾರ ಶಾಲಾ ಮುಖ್ಯ ಶಿಕ್ಷಕರ ಸಭೆ ನಡೆಸಿದರು.
ಬಿಇಒ ಕೆ.ಎಸ್.ನಾಗರಾಜಗೌಡ ಕೋಲಾರದಲ್ಲಿ ಶುಕ್ರವಾರ ಶಾಲಾ ಮುಖ್ಯ ಶಿಕ್ಷಕರ ಸಭೆ ನಡೆಸಿದರು.   

ಕೋಲಾರ: ‘ಶಾಲೆ ಆರಂಭಕ್ಕೂ ಮುನ್ನ ಪ್ರತಿ ವಿದ್ಯಾರ್ಥಿಗೂ ಪಠ್ಯಪುಸ್ತಕ ಹಾಗೂ ಸಮವಸ್ತ್ರ ವಿತರಣೆ ಮಾಡಿ’ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಎಸ್.ನಾಗರಾಜಗೌಡ ತಾಲ್ಲೂಕಿನ ಎಲ್ಲಾ ಶಾಲೆಗಳ ಮುಖ್ಯ ಶಿಕ್ಷಕರಿಗೆ ಸೂಚನೆ ನೀಡಿದರು.

ಇಲ್ಲಿ ಶುಕ್ರವಾರ ನಡೆದ ಇಸಿಒ, ಸಿಆರ್‌ಪಿ ಹಾಗೂ ಮುಖ್ಯ ಶಿಕ್ಷಕರ ಸಭೆಯಲ್ಲಿ ಮಾತನಾಡಿ, ‘ಮಕ್ಕಳಿಗೆ ಶೀಘ್ರವೇ ಪಠ್ಯಪುಸ್ತಕ ತಲುಪಿಸುವ ಮೂಲಕ ಅವರ ಓದಿಗೆ ನೆರವಾಗಿ. ಶಿಕ್ಷಣ ಸಚಿವರ ಆದೇಶದಂತೆ ಪ್ರತಿ ಶಾಲೆಯಲ್ಲೂ ವಿದ್ಯಾಗಮ ಕಾರ್ಯಕ್ರಮ ಅನುಷ್ಠಾನಕ್ಕೆ ಒತ್ತು ನೀಡಿ’ ಎಂದು ತಿಳಿಸಿದರು.

‘ಶಾಲೆಗಳ ಆರಂಭಕ್ಕೂ ಮುನ್ನ ಶಾಲಾ ಆವರಣ ಸ್ವಚ್ಛ ಮಾಡಿಸಿ. ಮಳೆ ಕಾರಣಕ್ಕೆ ಶಾಲಾ ಕಟ್ಟಡಗಳು ಅಥವಾ ಕೊಠಡಿಗಳು ಬೀಳುವಂತಿದ್ದರೆ ದುರಸ್ತಿ ಮಾಡಿಸಿ. ಮಕ್ಕಳ ಸುರಕ್ಷತೆ ಮುಖ್ಯ. ಕಟ್ಟಡಗಳ ಮೇಲ್ಚಾವಣಿಯಲ್ಲಿ ನೀರು ಸಮಸ್ಯೆಯಾಗುವ ಸಾಧ್ಯತೆ ಇರುವುದರಿಂದ ಆ ಬಗ್ಗೆ ಪರಿಶೀಲನೆ ಮಾಡಿ. ಮೇಲ್ಚಾವಣಿಯಿಂದ ನೀರು ಸರಾಗವಾಗಿ ಹೊರಗೆ ಹರಿದು ಹೋಗುವಂತೆ ವ್ಯವಸ್ಥೆ ಮಾಡಿ’ ಎಂದು ಹೇಳಿದರು.

ADVERTISEMENT

‘ಶಾಲೆಯಲ್ಲಿ ದಾಖಲಾತಿ ಪ್ರಕ್ರಿಯೆ ನಡೆಸುವ ಮೂಲಕ ಮಕ್ಕಳ ಸಂಖ್ಯೆ ಹೆಚ್ಚಿಸಿ. ದಾಖಲಾತಿ ಹೆಚ್ಚಿಸುವ ನಿಟ್ಟಿನಲ್ಲಿ ಪೋಷಕರೊಂದಿಗೆ ಸಮಾಲೋಚನೆ ನಡೆಸಿ. ಅಗತ್ಯವಿದ್ದರೆ ಮನೆ ಮನೆ ಭೇಟಿ ಮಾಡಿ ಆಂದೋಲನದ ಮಾದರಿಯಲ್ಲಿ ದಾಖಲಾತಿ ನಡೆಸಿ’ ಎಂದು ಸಲಹೆ ನೀಡಿದರು.

ಜಾಗೃತಿ ಮೂಡಿಸಿ: ‘ನರೇಗಾ ಅಡಿ ಕೈಗೊಂಡಿರುವ ಶಾಲೆಗಳ ಕಾಂಪೌಂಡ್ ಕಾಮಗಾರಿ ಬಾಕಿಯಿದ್ದರೆ ಶೀಘ್ರವೇ ಪೂರ್ಣಗೊಳಿಸುವಂತೆ ಸಂಬಂಧಪಟ್ಟ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ತಿಳಿಸಿ. ಗ್ರಾಮೀಣ ಭಾಗದ ಮಕ್ಕಳಿಗೆ ಕೋವಿಡ್‌ ಕುರಿತು ಜಾಗೃತಿ ಮೂಡಿಸಿ’ ಎಂದು ಕಿವಿಮಾತು ಹೇಳಿದರು.

ಬಿಇಒ ಕಚೇರಿ ವ್ಯವಸ್ಥಾಪಕ ಮುನಿಸ್ವಾಮಿಗೌಡ, ಇಸಿಒಗಳಾದ ಮುನಿರತ್ನಯ್ಯಶೆಟ್ಟಿ, ಆರ್.ಶ್ರೀನಿವಾಸನ್, ರಾಘವೇಂದ್ರ ಹಾಗೂ ವಿವಿಧ ಶಾಲೆಗಳ ಮುಖ್ಯ ಶಿಕ್ಷಕರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.