ಮುಳಬಾಗಿಲು: ತಾಲ್ಲೂಕಿನ ವಿರೂಪಾಕ್ಷಿ ಗ್ರಾಮದ ವಿರೂಪಾಕ್ಷೇಶ್ವರ ದೇವಾಲಯಕ್ಕೆ ಸಂಬಂಧಿಸಿದ ತಾಮ್ರದ ಶಾಸನವೊಂದು ದೇವಾಲಯದ ಅರ್ಚಕ ವರ್ಗದ ಸುಪರ್ದಿಗೆ ಬಂದಿರುವುದು ವರದಿಯಾಗಿದೆ.
ಮುಳಬಾಗಿಲು ಸಾಯರ್ ಕೃಷ್ಣಪ್ಪ ಎಂಬುವರ ಬಳಿಯಿದ್ದ ಈ ತಾಮ್ರದ ಶಾಸನ ಕುರಿತು ಇತಿಹಾಸಕಾರ ರೈಸ್ ಅವರು ತಮ್ಮ ಸಂಪುಟದಲ್ಲಿ ದಾಖಲಿಸಿದ್ದಾರೆ. ಇದೀಗ ತಾಮ್ರದ ಶಾಸನವನ್ನು ವಿರೂಪಾಕ್ಷಿ ದೇವಾಲಯದ ಅರ್ಚಕರು ಸಂರಕ್ಷಿಸಿದ್ದು ಶಾಸನದಲ್ಲಿ ವಿರೂಪಾಕ್ಷಿ ದೇವಾಲಯ ನಿರ್ಮಾಣ, ಅಲ್ಲಿನ ಶಿಖರಕ್ಕೆ ಹಾಕಿದ ಚಿನ್ನದ ಹೊದಿಕೆ ಹಾಗೂ ಕಟ್ಟಲಾದ ಪುಷ್ಕರಿಣಿ, ಮಂಟಪ ಪ್ರಾಕಾರಗಳ ಬಗ್ಗೆ ವಿವರ ನೀಡುತ್ತದೆ ಎಂದು ಇತಿಹಾಸ ಸಂಶೋಧಕ ಕೆ.ಆರ್. ನರಸಿಂಹನ್ ವಿವರಿಸಿದರು.
ವಿರೂಪಾಕ್ಷೇಶ್ವರ ಸ್ವಾಮಿಯ ಕೈಂಕರ್ಯಗಳಿಗೆ ನೀಡಲಾದ ಗ್ರಾಮಗಳ ದಾನದ ಬಗ್ಗೆಯೂ ಮಾಹಿತಿ ಇದೆ. ಜಿಲ್ಲಾಡಳಿತ ವಿರೂಪಾಕ್ಷಿ ದೇವಾಲಯದ ಪುರಾತನ ಪುಷ್ಕರಿಣಿಯನ್ನು ಜೀರ್ಣೋದ್ಧಾರ ಮಾಡಿಸಿದ್ದು, ಪ್ರವಾಸೋದ್ಯಮ ಇಲಾಖೆಯಿಂದ ಪ್ರವಾಸಿ ಕ್ಷೇತ್ರವಾಗಿ ಅಭಿವೃದ್ಧಿಪಡಿಸುವ ಆಶಯ ಹೊಂದಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.