ಟೇಕಲ್: ಬರಗಾಲದಿಂದ ಕೆರೆ, ಕುಂಟೆಗಳು ಒತ್ತಿದ್ದು, ಜಾನುವಾರುಗಳಿಗೆ ನೀರು, ಮೇವಿನ ಸಮಸ್ಯೆ ಎದುರಾಗಿದೆ.
ರೈತರ ಜೀವನಾಡಿ ಕೆರೆ, ಕುಂಟೆ, ಇದರಲ್ಲಿ ನೀರು ತುಂಬಿದ್ದರೆ ರೈತರು ತರಕಾರಿ, ಸೊಪ್ಪು ಬೆಳೆದು ಜೀವನ ನಡೆಸುವವರು. ಜತೆಗೆ ಹೈನುಗಾರಿಕೆಯನ್ನು ಮಾಡುವವರು. ಆದರೆ ಈ ಬಾರಿ ಮಳೆ ಸಮಸ್ಯೆಯಿಂದ ಕೆರೆಗಳು ಬತ್ತಿದ್ದು ಜಾನುವಾರು ಹಾಗೂ ಪ್ರಾಣಿಗಳಿಗೆ ಕುಡಿಯಲೂ ನೀರು ಸಿಗದಂತಾಗಿದೆ. ಜಾನುವಾರು ಮೇಯಲು ಬಯಲಿಗೆ ಹೋದರೆ ನೀರು ಕುಡಿಯಲು ಮನೆ ಬಳಿಯೇ ಬರಬೇಕಾದ ಪರಿಸ್ಥಿತಿ ಎದುರಾಗಿದೆ. ಇನ್ನೂ ಕಾಡು ಪ್ರಾಣಿಗಳಿಗೆ ಮೇವು, ನೀರಿನ ಸಮಸ್ಯೆ ತೀರವಾಗಿ ಕಾಡುತ್ತಿದೆ.
ಪ್ರಸ್ತುತ ಪ್ರಾಣಿಗಳಿಗೆ ಕುಡಿಯಲು ನೀರೇ ಸಿಗುತ್ತಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಜಾನುವಾರುಗಳನ್ನು ಸ್ವಚ್ಛಗೊಳಿಸುವುದು ಅಸಾಧ್ಯವಾಗಿದೆ. ಇದರಿಂದ ಪ್ರಾಣಿಗಳಿಗೆ ರೋಗಗಳು ಹರಡುತ್ತಿವೆ. ಇಷ್ಟೇ ಅಲ್ಲದೆ ಮೇವು, ನೀರನ್ನು ಹರಿಸಿ ಕಾಡಿಂದ ನಾಡಿಗೆ ಕೆಲವು ಪ್ರಾಣಿಗಳು ಬರುತ್ತಿದ್ದು, ನಾಯಿಗಳ ಹಾವಳಿ ಹಾಗೂ ವಾಹನಗಳಿಗೆ ಸಿಲುಕಿ ಜೀವ ಕಳೆದುಕೊಳ್ಳುತ್ತಿರುವ ಘಟನೆಗಳು ನಡೆಯುತ್ತಲೇ ಇವೆ.
ಜಾನುವಾರುಗಳಿಗೆ ಮೇವಿನ ಸಮಸ್ಯೆ ಕಾಡುತ್ತಿದ್ದು, ಕೆಲವು ರೈತರು ರಾಸುಗಳನ್ನು ಸಾಕಲು ಕಷ್ಟವಾಗಿ ಕಡಿಮೆ ಬೆಲೆಗೆ ಮಾರಾಟ ಮಾಡುತ್ತಿದ್ದಾರೆ. ಜತೆಗೆ ಜಾನುವಾರುಗಳಿಗೆ ಹಸಿ ಮೇವು ಇಲ್ಲವಾಗಿ ಹಾಲಿನ ಇಳುವರಿಯೂ ಕಡಿಮೆಯಾಗಿದೆ. ಹಾಗಾಗಿ ಸರ್ಕಾರ ಈ ಸಂಕಷ್ಟದ ಸಂದರ್ಭದಲ್ಲಿ ಜಾನುವಾರುಗಳಿಗೆ ನೀರು ಹಾಗೂ ಮೇವಿನ ವ್ಯವಸ್ಥೆ ಮಾಡಿಕೊಡಬೇಕು ಎಂದು ರೈತರು ಒತ್ತಾಯಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.