ADVERTISEMENT

ಎಪಿಎಂಸಿ ಸ್ಥಾಪನೆ: ಬೇತಮಂಗಲ ಬಳಿ 25 ಎಕರೆ ಜಮೀನು ಮಂಜೂರು -ಶಾಸಕಿ ರೂಪಕಲಾ

​ಪ್ರಜಾವಾಣಿ ವಾರ್ತೆ
Published 3 ಜೂನ್ 2022, 5:07 IST
Last Updated 3 ಜೂನ್ 2022, 5:07 IST
ಬೇತಮಂಗಲ ಸಮೀಪದ ಟಿ. ಗೊಲ್ಲಹಳ್ಳಿಯಲ್ಲಿ ಹಮ್ಮಿಕೊಂಡಿದ್ದ ಜನಸ್ಪಂದನಾ ಕಾರ್ಯಕ್ರಮದಲ್ಲಿ ಶಾಸಕಿ ಎಂ. ರೂಪಕಲಾ ಮಾತನಾಡಿದರು
ಬೇತಮಂಗಲ ಸಮೀಪದ ಟಿ. ಗೊಲ್ಲಹಳ್ಳಿಯಲ್ಲಿ ಹಮ್ಮಿಕೊಂಡಿದ್ದ ಜನಸ್ಪಂದನಾ ಕಾರ್ಯಕ್ರಮದಲ್ಲಿ ಶಾಸಕಿ ಎಂ. ರೂಪಕಲಾ ಮಾತನಾಡಿದರು   

ಬೇತಮಂಗಲ: ‘ಕೆಜಿಎಫ್ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ನಗರ ಹಾಗೂ ಗ್ರಾಮೀಣ ಭಾಗದಲ್ಲಿ ಹಲವು ಅಭಿವೃದ್ಧಿ ಕೆಲಸಗಳನ್ನು ಮಾಡಲಾಗಿದೆ. ಉಳಿದೆಡೆ ಹಂತ ಹಂತವಾಗಿ ಅಭಿವೃದ್ಧಿಗೆ ಒತ್ತು ನೀಡಲಾಗುವುದು’ ಎಂದು ಶಾಸಕಿ ಎಂ. ರೂಪಕಲಾ ಭರವಸೆ ನೀಡಿದರು.

ಹೋಬಳಿಯ ಟಿ. ಗೊಲ್ಲಹಳ್ಳಿ ಗ್ರಾಮದಲ್ಲಿ ಇತ್ತೀಚೆಗೆ ಹಮ್ಮಿಕೊಂಡಿದ್ದ ಜನಸ್ಪಂದನಾ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಎಪಿಎಂಸಿ ಮಾರುಕಟ್ಟೆ ಸ್ಥಾಪನೆಗೆ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ. ಕಂದಾಯ ಇಲಾಖೆಯಿಂದ ಸುಮಾರು 25 ಎಕರೆ ಜಾಗ ಮಂಜೂರು ಮಾಡಿಸಿದ್ದು, ಗಡಿ ಭಾಗದ ರೈತರಿಗೆ ಅನುಕೂಲವಾಗಲಿದೆ ಎಂದರು.

ADVERTISEMENT

‘ವಿವಿಧ ಗ್ರಾಮಗಳಲ್ಲಿ ಸಿ.ಸಿ ರಸ್ತೆ, ಡಾಂಬರು ರಸ್ತೆ, ಐಮಾಸ್ಟ್‌ ದೀಪ ಅಳವಡಿಕೆ ಸೇರಿದಂತೆ ಅಭಿವೃದ್ಧಿ ಕಾಮಗಾರಿ ಮಾಡಲಾಗಿದೆ. ಪ್ರತಿಯೊಂದು ಗ್ರಾ.ಪಂ. ವ್ಯಾಪ್ತಿಯಲ್ಲಿಯೂ ₹ 60ರಿಂದ ₹ 70 ಕೋಟಿ ಅನುದಾನದಲ್ಲಿ ಅಭಿವೃದ್ಧಿ ಕಾರ್ಯ ಕೈಗೊಳ್ಳಲಾಗಿದೆ’ ಎಂದರು.

ಟಿ. ಗೊಲ್ಲಹಳ್ಳಿ ಗ್ರಾ.ಪಂ.ನ ಎಲ್ಲಾ ಗ್ರಾಮಗಳಲ್ಲೂ ರಸ್ತೆ ಅಭಿವೃದ್ಧಿ ಹಾಗೂ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಸ್ಥಾಪಿಸಲಾಗಿದೆ. ಉಳಿದ ಗ್ರಾಮಗಳಲ್ಲಿಯೂ ಶೀಘ್ರದಲ್ಲಿಯೇ ನೀರು ಪೂರೈಕೆ ಘಟಕ ಅಳವಡಿಸಲು ಕ್ರಮವಹಿಸಲಾಗುವುದು ಎಂದು ತಿಳಿಸಿದರು.

ಟಿ. ಗೊಲ್ಲಹಳ್ಳಿ ಗ್ರಾಮದಲ್ಲಿ ₹ 15 ಲಕ್ಷ ಅನುದಾನದಡಿ ಹೊಸದಾಗಿ ಎರಡು ಶಾಲಾ ಕಟ್ಟಡಗಳನ್ನು ನಿರ್ಮಿಸಿ ಮಕ್ಕಳ ವಿದ್ಯಾಭ್ಯಾಸಕ್ಕೆ ಅನುಕೂಲ ಕಲ್ಪಿಸಲಾಗಿದೆ. ಕ್ಷೇತ್ರಕ್ಕೆ ಹೆಚ್ಚುವರಿಯಾಗಿ ಮನೆಗಳನ್ನು ಮಂಜೂರು ಮಾಡಿಸಲಾಗಿದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಜಿ.ಪಂ. ಮಾಜಿ ಸದಸ್ಯ ಅ.ಮು. ಲಕ್ಷ್ಮಿನಾರಾಯಣ್, ಗ್ರಾ.ಪಂ. ಅಧ್ಯಕ್ಷೆ ಪವಿತ್ರಾ ಗೋಪಾಲ್, ಉಪಾಧ್ಯಕ್ಷ ಶ್ರೀರಾಮಪ್ಪ, ಗ್ರಾ.ಪಂ. ಪಿಡಿಒ ಶ್ರೀನಿವಾಸ್ ಮೂರ್ತಿ, ಎಇಇ ಶೇಷಾದ್ರಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ನಾಗರತ್ನ, ತೋಟಗಾರಿಕೆ ಇಲಾಖೆಯ ವಿಶ್ವನಾಥ್, ಕೃಷಿ ಇಲಾಖೆಯ ವಸಂತ ರೆಡ್ಡಿ, ಮೇಘಮಾಲ, ಆರೋಗ್ಯ ಇಲಾಖೆಯ ವಿಶ್ವನಾಥ್ ರೆಡ್ಡಿ, ಕಂದಾಯ ಇಲಾಖೆಯ ಧಮೇಂದ್ರಪ್ರಸಾದ್, ಗ್ರಾ.ಪಂ. ಸದಸ್ಯರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.