ನಂಗಲಿ: ಎಂ. ಚಮಕಲಹಳ್ಳಿ ಸಮೀಪದ ಶ್ರೀಘಟ್ಟು ವೆಂಕಟರಮಣ ಸ್ವಾಮಿ ದೇವಾಲಯದ ಬಳಿ ಏಪ್ರಿಲ್8ರಂದು ನಡೆಯಲಿರುವ ಬ್ರಹ್ಮರಥೋತ್ಸವ ಹಾಗೂ ಜಾನುವಾರು ಜಾತ್ರೆಯಲ್ಲಿ ಸೇರುವ ಅಂಗಡಿಗಳು ಸೇರಿದಂತೆ ಇತರೇ ಸುಂಕ ವಸೂಲಿ ಮಾಡುವ ಕುರಿತು ಬುಧವಾರ ದೇವಾಲಯದ ಆವರಣದಲ್ಲಿ ಹರಾಜು ಪ್ರಕ್ರಿಯೆ ನಡೆಯಿತು.
ಮುಜರಾಯಿ ಇಲಾಖೆಗೆ ಸೇರಿದ ಈ ದೇಗುಲದ ಜಾತ್ರಾ ಮಹೋತ್ಸವ ಅದ್ದೂರಿಯಾಗಿ ನಡೆಯಲಿದೆ. ಜಾತ್ರೆಯಲ್ಲಿ ದೇವರ ಉತ್ಸವ ಸುಂಕ ₹ 4.70 ಲಕ್ಷ, ಜಾನುವಾರು ಗೇಟ್ ಸುಂಕ ₹ 15,000, ಜಾನುವಾರು ಗೊಬ್ಬರ
₹ 5,000ಕ್ಕೆ ಹರಾಜಾಯಿತು.
ಜಾತ್ರೆಯಲ್ಲಿ ಸೇರುವ ಅಂಗಡಿಗಳ ಮೇಲಿನ ಸುಂಕವನ್ನು ₹ 16,500ಕ್ಕೆ ನಗವಾರ ಸತ್ಯಣ್ಣ ಪಡೆದುಕೊಂಡರು. ‘ಮುಜರಾಯಿ ಇಲಾಖೆಗೆ ವೈಯಕ್ತಿಕವಾಗಿ ಹಣ ನೀಡಿದರು. ಅಂಗಡಿ ಮಾಲೀಕರಿಂದ ಸುಂಕ ವಸೂಲಿ ಮಾಡದೆ ಉಚಿತವಾಗಿ ತೆರೆಯಲು ಅವಕಾಶ ನೀಡಬೇಕು. ಕೋವಿಡ್ ಸಂಕಷ್ಟಕ್ಕೆ ಒಳಗಾಗಿರುವ ವ್ಯಾಪಾರಿಗಳಿಂದ ಯಾವುದೇ ಕಾರಣಕ್ಕೂ ಸುಂಕ ವಸೂಲಿ ಮಾಡಬಾರದು’ ಎಂದು ಕೋರಿದರು.
ವ್ಯಾಪಾರಿಗಳು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ. ಅವರಿಗೆ ಸೂಕ್ತ ನೆರವು ನೀಡಲು ಸರ್ಕಾರ ಕೂಡ ಮುಂದಾಗಬೇಕು ಎಂದು ಮನವಿ ಮಾಡಿದರು.
ತಹಶೀಲ್ದಾರ್ ಶೋಭಿತಾ, ಉಪ ತಹಶೀಲ್ದಾರ್ ಕೆ.ಟಿ. ವೆಂಕಟೇಶಯ್ಯ, ಕಂದಾಯ ನಿರೀಕ್ಷಕ ನರೇಶ್ ಹರಾಜು ಪ್ರಕ್ರಿಯೆ ನಡೆಸಿದರು. ದೇವಾಲಯ ಸಮಿತಿ ಅಧ್ಯಕ್ಷ ಬಿ.ಆರ್. ಕೃಷ್ಣನ್, ಸದಸ್ಯರಾದ ಪೆದ್ದೂರು ವೆಂಕಟರಾಮಯ್ಯ, ಮುಷ್ಟೂರು ರಾಮಚಂದ್ರಪ್ಪ, ಎಪಿಎಂಸಿ ನಿರ್ದೇಶಕ ಎನ್.ಆರ್. ಸತ್ಯಣ್ಣ, ನಗವಾರ ರಘು, ಸಿಪಿಎಂ ಗೋಪಾಲ್, ಎ.ಆರ್. ಶ್ರೀನಿವಾಸ್, ಜಗದೀಶ್, ನಟರಾಜ್, ಚಲಪತಿ ಹಾಜರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.