
ಶಾಸಕ ಎಸ್ ಎನ್ ನಾರಾಯಣಸ್ವಾಮಿ
ಬಂಗಾರಪೇಟೆ: ಬಡವರು, ದಲಿತರು ಹಾಗೂ ದುರ್ಬಲ ವರ್ಗದ ರೈತರು ಹಲವು ತಲೆಮಾರುಗಳಿಂದ ಸಾಗುವಳಿ ಮಾಡುತ್ತಿದ್ದ ಜಮೀನುಗಳಿಂದ ಅಧಿಕಾರಿಗಳು ಅವರನ್ನು ಒಕ್ಕಲೆಬ್ಬಿಸಿದ ಕಾರ್ಯವೈಖರಿಗೆ ಶಾಸಕ ಎಸ್.ಎನ್. ನಾರಾಯಣಸ್ವಾಮಿ ಅಸಮಾಧಾನ ವ್ಯಕ್ತಪಡಿಸಿದರು.
ಬೆಳಗಾವಿ ಸುವರ್ಣ ವಿಧಾನಸೌಧದ ಚಳಿಗಾಲದ ಅಧಿವೇಶನದ ಪ್ರಶ್ನೋತ್ತರ ಸಮಯದಲ್ಲಿ ಮಾತನಾಡಿದ ಅವರು, ರೈತರು ತಲೆಮಾರಿನಿಂದ ಸಾಗುವಳಿ ಮಾಡುತ್ತಿದ್ದು, ಅದಕ್ಕೆ ಸಾಗುವಳಿ ಮಂಜೂರಾತಿ ಹಾಗೂ 50 ವರ್ಷಗಳಿಂದ ಅವರ ಹೆಸರಿನಲ್ಲಿ ಪಹಣಿ (ಪಾವತಿ ದಾಖಲೆ) ಇದ್ದರೂ ಅಂತಹ ಜಮೀನನ್ನು ನಿರ್ದಾಕ್ಷಿಣ್ಯವಾಗಿ ಖಾಲಿ ಮಾಡಿಸಿದ್ದು ತಪ್ಪೆಂದು ಟೀಕಿಸಿದರು. ತಮ್ಮ ತಾಲ್ಲೂಕಿನಲ್ಲೇ ಇಂತಹ ಘಟನೆ ನಡೆದಿದೆ ಎಂದು ಸದನದ ಗಮನಕ್ಕೆ ತಂದರು.
ಈ ಕ್ರಮದ ವಿರುದ್ಧ ನೊಂದ ರೈತರು ಮತ್ತು ಸಂಘಟನೆಗಳು ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿದ್ದವು. ಶಾಸಕ ಮಧ್ಯಸ್ಥಿಕೆ ವಹಿಸಿ ಕಂದಾಯ ಮತ್ತು ಅರಣ್ಯ ಇಲಾಖೆಯಿಂದ ಜಂಟಿ ಸರ್ವೆ ನಡೆಸಿದ್ದರು. ಆ ಸರ್ವೆಯಿಂದ ರೈತರನ್ನು ಒಕ್ಕಲೆಬ್ಬಿಸಿದ ಭೂಮಿಗೂ ಅರಣ್ಯ ಇಲಾಖೆಗೂ ಯಾವುದೇ ಸಂಬಂಧವಿಲ್ಲ ಎಂದು ತಿಳಿದು ಬಂದಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.