ADVERTISEMENT

ಮುಳಬಾಗಿಲು: ತಮಿಳುನಾಡಿಗೆ ನೀರು ಹರಿಸದಂತೆ ರೈತ ಸಂಘ ಮನವಿ

​ಪ್ರಜಾವಾಣಿ ವಾರ್ತೆ
Published 22 ಸೆಪ್ಟೆಂಬರ್ 2023, 13:45 IST
Last Updated 22 ಸೆಪ್ಟೆಂಬರ್ 2023, 13:45 IST
ತಮಿಳುನಾಡಿಗೆ ನೀರು ಹರಿಸದಂತೆ ರೈತ ಸಂಘದವರು ತಹಶೀಲ್ದಾರರಿಗೆ ಮನವಿ ಪತ್ರ ಸಲ್ಲಿಸಿದರು
ತಮಿಳುನಾಡಿಗೆ ನೀರು ಹರಿಸದಂತೆ ರೈತ ಸಂಘದವರು ತಹಶೀಲ್ದಾರರಿಗೆ ಮನವಿ ಪತ್ರ ಸಲ್ಲಿಸಿದರು   

ಮುಳಬಾಗಿಲು: ರಾಜ್ಯದ ತೀವ್ರ ಬರಗಾಲದ ಬಗ್ಗೆ ಸುಪ್ರೀಂಕೋರ್ಟ್‌ಗೆ ಮನವರಿಕೆ ಮಾಡಿ ಕಾವೇರಿ ನೀರು ತಮಿಳುನಾಡಿಗೆ ಹರಿಸುತ್ತಿರುವುದಕ್ಕೆ ತಡೆಯಾಜ್ಞೆ ತಂದು ರೈತರ ಹಿತ ಕಾಯಬೇಕೆಂದು ರೈತ ಸಂಘದಿಂದ ಖಾಲಿ ಮಡಿಕೆಗಳ ಸಮೇತ ತಾಲ್ಲೂಕು ಕಚೇರಿ ಮುಂದೆ ಹೋರಾಟ ನಡೆಸಿ, ತಹಶೀಲ್ದಾರ್ ಮುಖಾಂತರ ಮುಖ್ಯಮಂತ್ರಿಗಳಿಗೆ ಮನವಿ ಪತ್ರ ನೀಡಿದರು.

ಮುಂಗಾರುಮಳೆ ಕೈಕೊಟ್ಟ ಹಿನ್ನೆಲೆ ರಾಜ್ಯದಲ್ಲಿ ತೀವ್ರ ಬರಗಾಲ ಆವರಿಸಿದೆ. ಜತೆಗೆ ಮೇವು, ನೀರಿಗೆ ಹಾಹಾಕಾರ ತಲೆದೋರುತ್ತಿದೆ. ಮಳೆಯಿಲ್ಲದೆ ಜಲಾಶಯಗಳು ಸಂಪೂರ್ಣವಾಗಿ ಭತ್ತಿ ಹೋಗಿವೆ. ಈ ಸಂದರ್ಭದಲ್ಲಿ ರಾಜ್ಯದ ರೈತರ ಹಿತ ಕಾಯಬೇಕಾದ ಸರ್ಕಾರ ತಮಿಳುನಾಡಿಗೆ ನೀರು ಬಿಡುತ್ತಿರುವುದು ಸರಿಯಲ್ಲ ಎಂದು ರೈತಸಂಘದ ರಾಜ್ಯ ಉಪಾಧ್ಯಕ್ಷ ಕೆ.ನಾರಾಯಣಗೌಡ ಹೇಳಿದರು.

ನಿರಂತರವಾಗಿ ಕಾವೇರಿ ನೀರು ತಮಿಳುನಾಡಿಗೆ ಹರಿಸುವಂತೆ ಸುಪ್ರೀಂಕೋರ್ಟ್‌ ಪದೇ ಪದೇ ಆದೇಶ ಹೊರಡಿಸಿದರೂ, ನ್ಯಾಯಾಲಯಕ್ಕೆ ರಾಜ್ಯದ ಪರಿಸ್ಥಿತಿಯನ್ನು ಮನವರಿಕೆ ಮಾಡಲು ಸರ್ಕಾರ ಹಾಗೂ ಕಾವೇರಿ ನೀರು ಪ್ರಾಧಿಕಾರ ಸಂಸ್ಥೆ ವಿಫಲವಾಗಿದೆ ಎಂದರು.

ಮನವಿ ಸ್ವೀಕರಿಸಿ ಮಾತನಾಡಿದ ತಹಸೀಲ್ದಾರ್ ರೇಖಾ, ನಿಮ್ಮ ಮನವಿಯನ್ನು ಜಿಲ್ಲಾಧಿಕಾರಿಗಳ ಮುಖಾಂತರ ಸರ್ಕಾರಕ್ಕೆ ಕಳುಹಿಸುವ ಭರವಸೆ ನೀಡಿದರು.

ರಾಜ್ಯ ಪ್ರಧಾನ ಕಾರ್ಯದರ್ಶಿ ಫಾರೂಖ್‍ಪಾಷ, ಜಿಲ್ಲಾಧ್ಯಕ್ಷ ಈಕಂಬಳ್ಳಿ ಮಂಜುನಾಥ್, ಮರಗಲ್ ಶ್ರೀನಿವಾಸ್, ತಾಲ್ಲೂಕು ಅಧ್ಯಕ್ಷ ಯಲುವಳ್ಳಿ ಪ್ರಭಾಕರ್, ಬಂಗಾರಿ ಮಂಜು, ರಾಜೇಶ್, ಭಾಸ್ಕರ್, ವಿಜಯ್‍ಪಾಲ್, ಗುರುಮೂರ್ತಿ, ಸುನೀಲ್‍ಕುಮಾರ್, ಸುಪ್ರೀಂ ಚಲ, ಹೆಬ್ಬಣಿ ಆನಂದರೆಡ್ಡಿ ಮುಂತಾದವರಿದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.