ಕೋಲಾರ: ತಾಲ್ಲೂಕಿನ ಮುದುವಾಡಿ ಹೊಸಹಳ್ಳಿ ಗ್ರಾಮದಲ್ಲಿ ಕೊರಿಯರ್ ಪಾರ್ಸೆಲ್ ಕೊಡುವ ವಿಚಾರವಾಗಿ ಆರಂಭಗೊಂಡ ಗಲಾಟೆಯು ಅತಿರೇಕಕ್ಕೆ ತಿರುಗಿ ಇಬ್ಬರು ಯುವಕರಿಗೆ ಚಾಕುವಿನಿಂದ ಇರಿಯಲಾಗಿದೆ. ಗ್ರಾಮಸ್ಥರು ಆರೋಪಿಗಳನ್ನು ಹಿಡಿದು ವಿದ್ಯುತ್ ಕಂಬಕ್ಕೆ ಕಟ್ಟಿ ಥಳಿಸಿದ್ದಾರೆ.
ಮುದುವಾಡಿ ಹೊಸಹಳ್ಳಿ ಗ್ರಾಮದ ಚೇತನ್ ಹಾಗೂ ಯುವರಾಜ್ ಗಾಯಾಳುಗಳು. ಕೋಲಾರದ ಕೀಲುಕೋಟೆ ನಿವಾಸಿ, ಕೊರಿಯರ್ ಬಾಯ್ ಪವನ್ ಹಾಗೂ ಆತನ ಸೋದರ ಮೋಹನ್ ಚಾಕು ಇರಿದ ಆರೋಪಿಗಳು. ಇವರ ಜತೆಗೆ ಬಂದಿದ್ದ ತೊರದೇವಂಡಹಳ್ಳಿ ಗ್ರಾಮದ ಇನ್ನಿಬ್ಬರು ಆರೋಪಿಗಳು ಪರಾರಿಯಾಗಿದ್ದಾರೆ.
ಮುದುವಾಡಿ ಹೊಸಹಳ್ಳಿಯ ಚೇತನ್ ಎಂಬುವರು ಆನ್ಲೈನ್ನಲ್ಲಿ ಡ್ರೈಫ್ರೂಟ್ಸ್ ಆರ್ಡರ್ ಮಾಡಿದ್ದರು. ಈ ವಿಚಾರವಾಗಿ ಮೊಬೈಲ್ಗೆ ಸಂದೇಶ ಬಂದಿದ್ದು, ಡ್ರೈಫ್ರೂಟ್ಸ್ ಭಾನುವಾರದಂದು ತಲುಪಬೇಕಿತ್ತು. ಸಂದೇಶ ಬಂದಿದ್ದ ಹಿನ್ನೆಲೆಯಲ್ಲಿ ಡೆಲಿವರಿ ಬಾಯ್ ಪವನ್ ಎಂಬುವರಿಗೆ ಕರೆ ಮಾಡಿದ್ದು, ಆ ವೇಳೆ ಇಬ್ಬರ ನಡುವೆ ತೀವ್ರ ಮಾತಿನ ಚಕಮಕಿ ನಡೆದಿದೆ. ಪರಿಸ್ಥಿತಿ ಅತಿರೇಕಕ್ಕೆ ತಿರುಗಿದ ಪರಿಣಾಮ ಪವನ್ ಹಾಗೂ ಆತನ ಸೋದರ ಮೋಹನ್ ಮುದುವಾಡಿ ಹೊಸಹಳ್ಳಿ ಗ್ರಾಮದ ಬಳಿಗೆ ತೆರಳಿದ್ದಾರೆ.
ಚೇತನ್ ಹಾಗೂ ಆತನ ಗೆಳೆಯ ಯುವರಾಜ್ ಬಂದಿದ್ದು, ಗಲಾಟೆಯಾದ ಬಳಿಕ ಚಾಕುವಿನಿಂದ ಇರಿಯಲಾಗಿದೆ. ತಕ್ಷಣವೇ ಗ್ರಾಮಸ್ಥರು ಸೇರಿದ್ದರಿಂದ ಉದ್ರಿಕ್ತ ಪರಿಸ್ಥಿತಿ ಉಂಟಾಯಿತು. ಕೊರಿಯರ್ ಬಾಯ್ ಪವನ್ ಹಾಗೂ ಮೋಹನ್ ಎಂಬುವರನ್ನು ಹಿಡಿದು ಬಟ್ಟೆ ಬಿಚ್ಚಿ ಕಂಬಕ್ಕೆ ಕಟ್ಟಿ ಹಾಕಿ ಥಳಿಸಿದ್ದಾರೆ. ಗಾಯಾಳುಗಳನ್ನು ಕೋಲಾರದ ಖಾಸಗಿ ಆಸ್ಪತ್ರೆಗೆ ಸಾಗಿಸಿ, ಗ್ರಾಮಾಂತರ ಠಾಣೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಮುದುವಾಡಿ ಗೇಟ್ನಲ್ಲಿ ನೂರಾರು ಜನರು ಸೇರಿ ಸೂಕ್ತ ಕ್ರಮಕೈಗೊಳ್ಳುವಂತೆ ಆಗ್ರಹಿಸಿ ರಸ್ತೆ ತಡೆಗೆ ಮುಂದಾಗುತ್ತಿದ್ದಂತೆಯೇ ಗ್ರಾಮಾಂತರ ಠಾಣೆ ಇನ್ಸ್ಪೆಕ್ಟರ್ ಕಾಂತರಾಜ್ ಮತ್ತು ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿದರು. ಆರೋಪಿಗಳನ್ನು ವಶಕ್ಕೆ ಪಡೆದು, ತನಿಖೆ ನಡೆಸಿ ಸೂಕ್ತ ಕ್ರಮಕೈಗೊಳ್ಳುವ ಭರವಸೆ ನೀಡಿದ ಬಳಿಕ ಪರಿಸ್ಥಿತಿ ತಿಳಿಗೊಂಡಿತು.
ಕೋಲಾರ ತಾಲ್ಲೂಕಿನ ಮುದುವಾಡಿ ಹೊಸಹಳ್ಳಿ ಗ್ರಾಮದಲ್ಲಿ ಗಲಾಟೆ ಜಗಳದಿಂದ ಸ್ಥಳದಲ್ಲಿ ಉದ್ರಿಕ್ತ ವಾತಾವರಣ ಗ್ರಾಮಾಂತರ ಪೊಲೀಸರಿಂದ ಆರೋಪಿಗಳ ಬಂಧನ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.