ADVERTISEMENT

ವೇಮಗಲ್: ಸ್ನೇಹಿತರ ಜಗಳ ಕೊಲೆಯಲ್ಲಿ ಅಂತ್ಯ

​ಪ್ರಜಾವಾಣಿ ವಾರ್ತೆ
Published 19 ಡಿಸೆಂಬರ್ 2021, 15:34 IST
Last Updated 19 ಡಿಸೆಂಬರ್ 2021, 15:34 IST

ವೇಮಗಲ್: ಗ್ರಾಮದಲ್ಲಿ ಶನಿವಾರ ರಾತ್ರಿ ವೆಂಕಟರಮಣ ಉರುಫ್‌ ವೆಂಕಿ (33) ಎಂಬುವರನ್ನು ಸ್ನೇಹಿತನೇ ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿದ್ದಾನೆ.

ವೇಮಗಲ್‌ನ ರಾಕೇಶ್‌ ಎಂಬಾತ ಈ ಕೃತ್ಯ ಎಸಗಿದ್ದು, ಘಟನೆ ನಂತರ ಆತ ಪರಾರಿಯಾಗಿದ್ದಾನೆ.

ಅವಿವಾಹಿತರಾದ ವೆಂಕಟರಮಣ ಅವರು ರಾಕೇಶ್‌ನ ಪತ್ನಿಯ ಮೊಬೈಲ್‌ಗೆ ಆಗಾಗ್ಗೆ ಕರೆ ಮಾಡುತ್ತಿದ್ದರು ಮತ್ತು ಸಂದೇಶ ಕಳುಹಿಸುತ್ತಿದ್ದರು. ಈ ಸಂಗತಿ ತಿಳಿದು ಕೋಪಗೊಂಡಿದ್ದ ರಾಕೇಶ್‌ ರಾತ್ರಿ ವೆಂಕಟರಮಣ ಜತೆ ಜಗಳವಾಡಿ ಮಚ್ಚಿನಿಂದ ಭೀಕರವಾಗಿ ಕೊಚ್ಚಿ ಕೊಲೆ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ADVERTISEMENT

ಗ್ರಾಮದ ಸಿ ಬ್ಲಾಕ್ ನಿವಾಸಿಯಾದ ವೆಂಕಟರಮಣ ಅವರು ಕೈಗಾರಿಕಾ ಪ್ರದೇಶದ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ಆರೋಪಿ ರಾಕೇಶ್‌, ಮೀನಿನ ವ್ಯಾಪಾರ ಮಾಡುತ್ತಿದ್ದ ಎಂದು ಪೊಲೀಸರು ಹೇಳಿದ್ದಾರೆ. ಪ್ರಕರಣ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.