ADVERTISEMENT

ದ್ವೇಷ ಭಾಷಣ ತಡೆ ಮಸೂದೆ; ಮುಂದೆ ಕಾಂಗ್ರೆಸ್‌ಗೇ ಕಂಟಕ: ಸಚಿವ ಸೋಮಣ್ಣ ಟೀಕೆ

​ಪ್ರಜಾವಾಣಿ ವಾರ್ತೆ
Published 22 ಡಿಸೆಂಬರ್ 2025, 7:19 IST
Last Updated 22 ಡಿಸೆಂಬರ್ 2025, 7:19 IST
ವಿ.ಸೋಮಣ್ಣ
ವಿ.ಸೋಮಣ್ಣ   

ಕೋಲಾರ: ಸಂಸ್ಕಾರ, ಸಂಸ್ಕೃತಿ ಇಲ್ಲದವರು ದ್ವೇಷ ಭಾಷಣ ತಡೆ ಮಸೂದೆ ಜಾರಿ ಮಾಡಿದ್ದಾರೆ. ಇದೊಂದು ಮೊಂಡುತನದ ಪರಮಾವಧಿ. ಮುಂದಿನ ದಿನಗಳಲ್ಲಿ ರಾಜ್ಯ ಕಾಂಗ್ರೆಸ್‌ ಸರ್ಕಾರಕ್ಕೆ ಈ ಮಸೂದೆ ಕಂಟಕವಾಗಲಿದೆ ಎಂದು ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಹೇಳಿದರು.

ತಾಲ್ಲೂಕಿನ ಕುಂಬಾರಹಳ್ಳಿಯಲ್ಲಿರುವ ಸಂಸದ ಎಂ.ಮಲ್ಲೇಶ್ ಬಾಬು ಮನೆಯಲ್ಲಿ ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಯಾರನ್ನೋ ಬೆದರಿಸಲು ಹೋಗಿ ಕಾಂಗ್ರೆಸ್‌ನವರು ಬಲೆಯೊಳಗೆ ಬೀಳುವುದು ನಿಶ್ಚಿತ. ಈ ಸರ್ಕಾರದ ಪಾಪದ ಕೊಡ ತುಂಬಿದ್ದು, ಮುಂದಿನ ದಿನಗಳಲ್ಲೇ ಅವರೇ ಈ ಕಾನೂನಿನ ಫಲಾನುಭವಿಗಳಾಗಲಿದ್ದಾರೆ’ ಎಂದು ಎಚ್ಚರಿಕೆ ನೀಡಿದರು.

ಹಳೆಯ ಸಿದ್ದರಾಮಯ್ಯ ಈಗ ಅಲ್ಲ, ಹೊಸ ಸಿದ್ದರಾಮಯ್ಯನೂ ಕಾಣುತ್ತಿಲ್ಲ. ಸದ್ಯಕ್ಕೆ ಅವರ ಬೇಳೆಕಾಳು ಏನೂ ಬೇಯುತ್ತಿಲ್ಲ. ಅದಕ್ಕಾಗಿ ಹೈಕಮಾಂಡ್ ತೀರ್ಮಾನಕ್ಕೆ ಬದ್ಧ ಎಂದು ಪದೇಪದೇ ಬೊಟ್ಟು ಮಾಡುತ್ತಿದ್ದಾರೆ ಎಂದರು.

ADVERTISEMENT

ಅಧಿಕಾರದ ಕುರ್ಚಿಗಾಗಿ ಕಿತ್ತಾಡಿಕೊಂಡು ಜನರ ನೆಮ್ಮದಿ ಹಾಳು ಮಾಡುತ್ತಿದ್ದು, ಸಣ್ಣ ಗುಂಡಿಗಳನ್ನೂ ಮುಚ್ಚಲು ಈ ಸರ್ಕಾರಕ್ಕೆ ಯೋಗ್ಯತೆಯಿಲ್ಲ. ಅಧಿಕಾರಕ್ಕಾಗಿ ಕಿತ್ತಾಡಿ ಎಕ್ಕುಟ್ಟು ಹೋಗಲಿ. ಈ ಅನಿಷ್ಠ ಸರ್ಕಾರವನ್ನು ಕೆಳಿಗಿಳಿಸಬೇಕು ಎಂದು ಆಕ್ರೋಶ ವ್ಯಕ್ತ‍ಪಡಿಸಿದರು.

ಹಳೆಯ ಸಿದ್ದರಾಮಯ್ಯನೂ ಈಗ ಅಲ್ಲ, ಹೊಸ ಸಿದ್ದರಾಮಯ್ಯನೂ ಕಾಣುತ್ತಿಲ್ಲ. ಸದ್ಯಕ್ಕೆ ಅವರ ಬೇಳೆಕಾಳು ಏನೂ ನಡೆಯುತ್ತಿಲ್ಲ. ಅದಕ್ಕಾಗಿ ಹೈಕಮಾಂಡ್ ತೀರ್ಮಾನಕ್ಕೆ ಬದ್ಧ ಎಂದು ಪದೇಪದೇ ಬೊಟ್ಟು ಮಾಡುತ್ತಿದ್ದಾರೆ ಎಂದು ಟೀಕಾ ಪ್ರಹಾರ ನಡೆಸಿದರು.

ರೈಲು ಪ್ರಯಾಣದ ಟಿಕೆಟ್‌ ದರ ಏರಿಕೆ ಕುರಿತು ಪ್ರತಿಕ್ರಿಯಿಸಿ, ‘500 ಕಿ. ಮೀ.ಗೂ ಹೆಚ್ಚಿನ ದೂರದ ಪ್ರಯಾಣಕ್ಕೆ ₹ 10 ಏರಿಸಲಾಗಿದೆ. ಬೆಲೆ ಏರಿಕೆ ನೋಡುವುದರ ಜತೆಗೆ ರೈಲು ನಿಲ್ದಾಣಗಳಲ್ಲಿನ ಸೌಕರ್ಯಗಳನ್ನು ನೋಡುವುದು ಸೂಕ್ತ. ಇಲಾಖೆಯಲ್ಲಿ 12 ಲಕ್ಷ ನೌಕರರಿದ್ದು, ಅವರನ್ನೂ ನೋಡಿಕೊಳ್ಳಬೇಕಿದೆ’ ಎಂದರು.

‘ನಾನು ರೈಲ್ವೆ ಖಾತೆ ರಾಜ್ಯ ಸಚಿವನಾದಾಗ ರಾಜ್ಯದಲ್ಲಿ ₹ 49 ಸಾವಿರ ಕೋಟಿ ವೆಚ್ಚದ ಕೆಲಸಗಳು ಬಾಕಿ ಇದ್ದವು. ಬಹಳ ಹಳೆಯ ಯೋಜನೆಗಳನ್ನೂ ಕೈಗೆತ್ತಿಕೊಂಡಿದ್ದು, 2027ರೊಳಗೆ ಮುಗಿಸುವೆ’ ಎಂದು ಭ‌ರವಸೆ ನೀಡಿದರು.

‘ಹಿಂದೆ ರೈಲ್ವೆ ಪರೀಕ್ಷೆಗಳನ್ನು ಕನ್ನಡ ಭಾಷೆಯಲ್ಲಿ ಬರೆಯಲು ಅವಕಾಶ ಇರಲಿಲ್ಲ. ಪ್ರಧಾನಿ ಸೇರಿದಂತೆ ಹಲವರನ್ನು ಭೇಟಿ ಮಾಡಿ ಅವಕಾಶ ಮಾಡಿಕೊಡಲಾಗಿದೆ. ರಾಜ್ಯದ ಆಯಾಯ ಭಾಷೆಗಳಲ್ಲಿ ನಡೆಸಲು ಸೂಚಿಸಲಾಗಿದೆ. ಈ ಬಗ್ಗೆ ನಾನೇ ಖುದ್ದಾಗಿ ಪರಿಶೀಲಿಸಿ ಜಾರಿಗೆ ತರುವಂತೆ ಮಾಡುತ್ತೇನೆ’ ಎಂದು ತಿಳಿಸಿದರು.

ರಾಜ್ಯಾಧ್ಯಕ್ಷ ವಿಚಾರ; ವರಿಷ್ಠರ ಸಂದೇಶಕ್ಕೆ ಬದ್ಧ

ರಾಜ್ಯ ಬಿಜೆಪಿ ಅಧ್ಯಕ್ಷರ ಆಯ್ಕೆ ವಿಚಾರದಲ್ಲಿ ನಾನು ಪಕ್ಷದ ವರಿಷ್ಠರ ತೀರ್ಮಾನಕ್ಕೆ ಬದ್ಧ. ನಾನು ಆ ಸ್ಥಾನಕ್ಕೆ ಆಕಾಂಕ್ಷಿಯೂ ಅಲ್ಲ ಆಸೆಯೂ ಇಲ್ಲ. ಹಾಗಂತ ರಾಜ್ಯ ರಾಜಕಾರಣದಲ್ಲಿ ಆಸಕ್ತಿ ಇಲ್ಲವೆಂದು ಅರ್ಥವಲ್ಲ. ರಾಜ್ಯ ಅಧ್ಯಕ್ಷ ಸ್ಥಾನಕ್ಕೆ ಪೈಪೋಟಿ ನಡೆಸುತ್ತಿದ್ದೇನೆ ಎಂದು ನಾನು ಯಾವಾಗ ಹೇಳಿದ್ದೆ? ನನ್ನ ವಿಚಾರವಾಗಿ ನಡೆಯುತ್ತಿರುವ ಚರ್ಚೆಗೂ ನನಗೂ ಯಾವುದೇ ಸಂಬಂಧವಿಲ್ಲ ಎಂದು ವಿ.ಸೋಮಣ್ಣ ಸ್ಪಷ್ಟಪಡಿಸಿದರು. ಹಿಂದೆ ಕೇಂದ್ರ ಗೃಹ ಸಚಿವ ಅಮಿತ್‌ ಶಾ ನನ್ನ ಮನೆಗೆ ಬಂದು ಸಿದ್ದರಾಮಯ್ಯ ವಿರುದ್ಧ ಸ್ಪರ್ಧಿಸಬೇಕೆಂದು ಸೂಚನೆ ನೀಡಿದ್ದರು. ಅದರಂತೆ ನಡೆದುಕೊಂಡೆ. ಮುಂದೆ ನಡೆದಿದ್ದು ಎಲ್ಲರಿಗೂ ಗೊತ್ತೇ ಇದೆ. ಗೋವಿಂದರಾಜನಗರದಲ್ಲಿ ಸ್ಪರ್ಧಿಸಿದ್ದರೆ ನನ್ನನ್ನು ಸೋಲಿಸಲು ಯಾರಿಗೂ ಆಗುತ್ತಿರಲಿಲ್ಲ. ನಂತರ ಲೋಕಸಭೆ ಚುನಾವಣೆಯಲ್ಲಿ ತುಮಕೂರಿನಿಂದ ಸ್ಪರ್ಧಿಸಲು ಸೂಚನೆ ಬಂತು ಎಂದರು.

ಪರಮೇಶ್ವರ ಸಿ.ಎಂ; ಮತ್ತೆ ಸೋಮಣ್ಣ ಬ್ಯಾಟಿಂಗ್‌

ನಾನು ತುಮಕೂರು ಕ್ಷೇತ್ರದ ಸಂಸದನಾಗಿರುವ ಕಾರಣ ಅದೇ ಜಿಲ್ಲೆಯ ಸಚಿವ ಜಿ.ಪರಮೇಶ್ವರ ಮುಖ್ಯಮಂತ್ರಿಯಾದರೆ ಒಳ್ಳೆಯದು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದೆ. ತುಮಕೂರು ಜಿಲ್ಲೆಯ ಅಭಿವೃದ್ಧಿ ವಿಚಾರದಲ್ಲಿ ನಮ್ಮಲ್ಲಿ ಭಿನ್ನಾಭಿಪ್ರಾಯ ಬಂದಿಲ್ಲ ಎಂದು ಸೋಮಣ್ಣ ಹೇಳಿದರು.

ರೈಲ್ವೆ ಅಭಿವೃದ್ಧಿ; ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ

ರೈಲ್ವೆ ಇಲಾಖೆಯ ಅಭಿವೃದ್ಧಿ ಕೆಲಸಗಳಲ್ಲಿ ರಾಜ್ಯ ಸರ್ಕಾರವೂ ಸಹಕಾರ ನೀಡಬೇಕು. ಭೂಮಿ ಕೊಡಲು ಸಾಧ್ಯವಿಲ್ಲವೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಏನಾದರೂ ಹೇಳಿದ್ದರೆ ಆ ರೀತಿಯ ಭಾವನೆಯನ್ನು ಅವರು ಬಿಟ್ಟುಬಿಡಬೇಕು. ಈ ಸಂಬಂಧ ಅವರ ಮನೆ ಬಾಗಿಲಿಗೆ ಹೋಗಿ ಮಾತುಕತೆ ನಡೆಸಲು ನಾನು ಸಿದ್ಧ ಎಂದು ಸೋಮಣ್ಣ ಹೇಳಿದರು. ರೈಲ್ವೆ ಯೋಜನೆಗಳಿಗೆ ರಾಜ್ಯ ಸರ್ಕಾರ ಭೂಮಿ ಕೊಟ್ಟರೆ ಸಾಕು ಉಳಿದಿದ್ದನ್ನು ಕೇಂದ್ರದಿಂದಲೇ ಮಾಡುತ್ತೇವೆ. ₹ 4 ಲಕ್ಷ ಕೋಟಿ ಬಜೆಟ್‌ ಮಾಡಿಸುವುದಾಗಿ ಹೇಳುತ್ತಾರೆ. ವರ್ಷಕ್ಕೆ ಒಂದೂವರೆ ಸಾವಿರ ಕೋಟಿ ಹಣ ನೀಡಲು ಸಾಧ್ಯವಿಲ್ಲವೇ ಎಂದು ಪ್ರಶ್ನಿಸಿದರು. ಈಚೆಗೆ ಕೋಲಾರಕ್ಕೆ ಭೇಟಿ‌ ನೀಡಿದ್ದಾಗ ರೈಲ್ವೆ ಯೋಜನೆಗಳ ಭೂಸ್ವಾಧೀನ ವಿಚಾರಕ್ಕೆ ಪ್ರತಿಕ್ರಿಯಿಸಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ‘ರೈಲ್ವೆ ಇಲಾಖೆ ಯಾರ ಸುಪರ್ದಿಯಲ್ಲಿದೆ? ಭೂಮಿ ಹಾಗೂ ಯೋಜನೆಯ ವೆಚ್ಚವನ್ನು ಕೇಂದ್ರ ಸರ್ಕಾರವೇ ನೀಡಬೇಕು. ಯೋಜನೆ ಜಾರಿಗೊಳಿಸಿ ಅದರ ಲಾಭವನ್ನು ಅವರು ಪಡೆಯುವುದಿಲ್ಲವೇ?’ ಎಂದು ಪ್ರಶ್ನಿಸಿದ್ದರು. ಆ ಸಂಬಂಧಿತ ಪ್ರಶ್ನೆಗೆ ಸೋಮಣ್ಣ ಈ ರೀತಿ ಉತ್ತರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.