ಕೋಲಾರ: ‘ಸಂಕಷ್ಟದಲ್ಲಿರುವವರಿಗೆ ನೆರವಾಗುವುದನ್ನು ಪ್ರಧಾನಿ ನರೇಂದ್ರ ಮೋದಿ ಕಲಿಸಿಕೊಟ್ಟಿದ್ದಾರೆ ಅದರಂತೆ ಪಕ್ಷದ ಕಾರ್ಯಕರ್ತರು ಮತ್ತೊಬ್ಬರಿಗೆ ಸಹಾಯಹಸ್ತ ಚಾಚುತ್ತಿದ್ದಾರೆ’ ಎಂದು ರಾಜ್ಯ ಆರ್ಎಸ್ಎಸ್ ಪ್ರಾಂತೀಯ ಪ್ರಮುಖ ವೆಂಕಟೇಶ್ ಪಾಠಕ್ ಹೇಳಿದರು.
ಕೋಲಾರ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಓಂಶಕ್ತಿ ಚಲಪತಿ ಅವರ ಮಿಡಿದ ಹೃದಯಗಳು ಸಂಸ್ಥೆ ಮೂಲಕ ನಗರಸಭೆಯ ಟ್ಯಾಂಕರ್ ಚಾಲಕರಿಗೆ ಇಲ್ಲಿ ಬುಧವಾರ ದಿನಸಿ ವಿತರಿಸಿ ಮಾತನಾಡಿ, ‘ಮೋದಿ ಅವರದು ಸಮರ್ಥ ನಾಯಕತ್ವ. ಅವರ ದಿಟ್ಟ ನಿರ್ಧಾರಗಳಿಂದ ದೇಶದಲ್ಲಿ ಕೋವಿಡ್ ನಿಯಂತ್ರಣಕ್ಕೆ ಬರುತ್ತದೆ’ ಎಂದು ಅಭಿಪ್ರಾಯಪಟ್ಟರು.
‘ರಾಜ್ಯದಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ತೆಗೆದುಕೊಂಡ ಹಲವು ದಿಟ್ಟ ಕ್ರಮಗಳಿಂದ ಕೊರೊನಾ ಸೋಂಕು ನಿಯಂತ್ರಿಸಲು ಸಾಧ್ಯವಾಗಿದೆ. ಆರ್ಥಿಕ ಸ್ಥಿತಿವಂತರು ಸಂಕಷ್ಟದಲ್ಲಿರುವವರಿಗೆ ನೆರವಾಗುವುದು ಮಾನವೀಯ ಗುಣ. ದೇಶ ಕೋವಿಡ್ ಸಂಕಷ್ಟದಲ್ಲಿರುವಾಗ ಉಳ್ಳವರು ಬಡ ಜನರಿಗೆ ನೆರವು ನೀಡಬೇಕು’ ಎಂದು ಕಿವಿಮಾತು ಹೇಳಿದರು.
‘ಕೋವಿಡ್ ಹಾಗೂ ಲಾಕ್ಡೌನ್ನಿಂದ ಬಡವರು ಮತ್ತು ಕಾರ್ಮಿರು ಕೆಲಸ ಕಾರ್ಯವಿಲ್ಲದೆ ಒಂದೊತ್ತಿನ ಊಟಕ್ಕೂ ಬವಣೆ ಪಡುವಂತಾಗಿದೆ. ಜನರ ಸಂಕಷ್ಟ ಕಂಡು ದಿನಸಿ ಕಿಟ್ ನೀಡಿ ಅವರಿಗೆ ನೆರವಾಗುತ್ತಿದ್ದೇವೆ. ಈಗಾಗಲೇ ಒಂದು ಸಾವಿರ ಬಡ ಕುಟುಂಬಗಳಿಗೆ ದಿನಸಿ ಕಿಟ್ ವಿತರಿಸಲಾಗಿದೆ. ಮುಂದಿನ ವಾರ 1 ಸಾವಿರ ಕಿಟ್ ಹಂಚಿಕೆ ಮಾಡಲಾಗುತ್ತದೆ’ ಎಂದು ಓಂಶಕ್ತಿ ಚಲಪತಿ ತಿಳಿಸಿದರು.
ಶ್ಲಾಘನೀಯ: ‘ಲಾಕ್ಡೌನ್ ಮತ್ತು ಕೋವಿಡ್ ಕಾರಣಕ್ಕೆ ಬಡ ಜನರಿಗೆ ಸಂಪಾದನೆಯಿಲ್ಲದೆ ಜೀವನ ನಿರ್ವಹಣೆಗೆ ಸಮಸ್ಯೆಯಾಗಿದೆ. ಇಂತಹ ಸಂದಿಗ್ಧ ಸ್ಥಿತಿಯಲ್ಲಿ ಬಡವರ ಬಗ್ಗೆ ಸಹಾನುಭೂತಿ ತೋರಿಸುವುದು ನಾಗರಿಕರ ಜವಾಬ್ದಾರಿ. ಓಂಶಕ್ತಿ ಚಲಪತಿ ಅವರು ನಗರಸಭೆಯ ಟ್ಯಾಂಕರ್ ಚಾಲಕರಿಗೆ ದಿನಸಿ ನೀಡುತ್ತಿರುವುದು ಶ್ಲಾಘನೀಯ’ ಎಂದು ಪತ್ರಕರ್ತ ಜೆ.ಸತ್ಯರಾಜ್ ಮೆಚ್ಚುಗೆ ವ್ಯಕ್ತಪಡಿಸಿದರು.
ಕೋಲಾರ ನಗರಾಭಿವೃದ್ಧಿ ಪ್ರಾಧಿಕಾರದ ಸದಸ್ಯರಾದ ಅಪ್ಪಿ ನಾರಾಯಣಸ್ವಾಮಿ, ಮಂಜುನಾಥ್, ಬಿಜೆಪಿ ಮುಖಂಡ ಜೋಗ್ಮಲ್, ಪದ್ಮಾ, ತಿಮ್ಮರಾಯಪ್ಪ ಹಾಜರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.