
ಕೋಲಾರ: ಜಿಲ್ಲೆಯಲ್ಲಿ ಐತಿಹಾಸಿಕ ಪ್ರವಾಸಿ ತಾಣಗಳು, ವೀರಗಲ್ಲು ಹಾಗೂ ಶಾಸನಗಳನ್ನು ವೈಜ್ಞಾನಿಕವಾಗಿ ಸಂರಕ್ಷಣೆ ಮಾಡಿ ಮುಂದಿನ ಪೀಳಿಗೆಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ಜಿಲ್ಲಾಧಿಕಾರಿ ಎಂ.ಆರ್.ರವಿ ಅಧ್ಯಕ್ಷತೆಯ ಜಿಲ್ಲಾ ಮಟ್ಟದ ‘ಪಾರಂಪರಿಕ ರಕ್ಷಣಾ ಸಮಿತಿ’ ರಚಿಸಲಾಗಿದೆ.
ಸಮಿತಿಯಲ್ಲಿ ಅಧಿಕಾರಿಗಳು, ಇತಿಹಾಸ ತಜ್ಞರು, ವಿವಿಧ ಕ್ಷೇತ್ರಗಳ ಪರಿಣತರು, ಎಂಜಿನಿಯರ್ ಇದ್ದಾರೆ.
ಈಚೆಗೆ ಸ್ಮಾರಕ, ವೀರಗಲ್ಲು, ಶಾಸನಗಳ ರಕ್ಷಣೆ ಕುರಿತು ಪುರಾತತ್ವ ಇಲಾಖೆ, ಮುಜರಾಯಿ, ಪ್ರವಾಸೋದ್ಯಮ ಹಾಗೂ ವಿವಿಧ ಸಂಘ ಸಂಸ್ಥೆಗಳ ಮುಖಂಡರ ಸಭೆ ನಡೆದಿತ್ತು. ಆ ಸಭೆಯಲ್ಲಿ ಸಮಿತಿ ರಚಿಸುವ ಬಗ್ಗೆ ಎಂ.ಆರ್.ರವಿ ಹೇಳಿದ್ದರು.
‘ಸಮಿತಿ ರಚನೆ ಮಾಡಿದ ನಂತರ ಸಭೆಗಳನ್ನು ನಡೆಸಲಾಗುವುದು. ಆ ಮೂಲಕ ಮ್ಯೂಸಿಯಂ, ಪಾರ್ಕ್ ನಿರ್ಮಾಣ ಮಾಡಿ ಅದರಲ್ಲಿ ವೀರಗಲ್ಲು, ಸ್ಮಾರಕ, ಶಾಸನಗಳನ್ನು ಇರಿಸಲಾಗುವುದು. ಅದರ ಕುರಿತು ವಿದ್ಯಾರ್ಥಿಗಳಿಗೆ, ಸಾರ್ವಜನಿಕರಿಗೆ ಮಾಹಿತಿ ನೀಡಲು ಪ್ರತ್ಯೇಕ ಸಿಬ್ಬಂದಿಯನ್ನು ನೇಮಿಸಲಾಗುವುದು. ಇದಕ್ಕೆ ಅಗತ್ಯವಾಗಿ ಬೇಕಾಗಿರುವ ಐದು ಎಕರೆ ಜಾಗವನ್ನು ಅತಿ ಶೀಘ್ರದಲ್ಲೇ ಗುರುತಿಸಿ ಕೊಡಲಾಗುವುದು’ ಎಂದು ಭರವಸೆ ನೀಡಿದ್ದರು.
ಜಿಲ್ಲೆಗೆ ತನ್ನದೆ ಆದ ಐತಿಹಾಸಿಕ, ಸಾಂಸ್ಕೃತಿಕ, ಪಾರಂಪರಿಕ ಇತಿಹಾಸವಿದೆ. ರಾಜ ಮನೆತನದವರು ಆಳ್ವಿಕೆ ನಡೆಸಿದ್ದಾರೆ ಎಂಬುದಕ್ಕೆ ಸಾಕಷ್ಟು ಕುರುಹುಗಳು ಈಗಲೂ ಇವೆ. ಅವೆಲ್ಲ ನಶಿಸಿ ಹೋಗುವ ಮೊದಲೇ ಪತ್ತೆ ಹಚ್ಚಿ ರಕ್ಷಣೆ ಮಾಡಬೇಕಾಗಿದೆ ಎಂದಿದ್ದರು.
ತಹಶೀಲ್ದಾರ್, ತಾ.ಪಂ.ಇಒ, ಪ್ರವಾಸೋದ್ಯಮ ಇಲಾಖೆಯ ಅಧಿಕಾರಿಗಳು ತಂಡವಾಗಿ ತಮ್ಮ ತಾಲ್ಲೂಕು ವ್ಯಾಪ್ತಿಯಲ್ಲಿರುವ ಪಾರಂಪರಿಕಾ ಸ್ಥಳಗಳ ಸ್ಥಿತಿಗತಿ ಬಗ್ಗೆ ವರದಿ ನೀಡಬೇಕು ಎಂದು ಸೂಚಿಸಿದ್ದರು.
ಜಿಲ್ಲೆಯ ಎಲ್ಲಾ ಕಾಲೇಜು ಮತ್ತು ವಿಶ್ವವಿದ್ಯಾಲಯಗಳಲ್ಲಿರುವ ಹೆರಿಟೇಜ್ ಕ್ಲಬ್ಗಳಿಗೆ ಮರುಜೀವ ನೀಡಬೇಕು ಎಂದೂ ಹೇಳಿದ್ದರು.
ಸಮಿತಿಯಲ್ಲಿರುವ ಸದಸ್ಯರು: ಅಧ್ಯಕ್ಷರು: ಜಿಲ್ಲಾಧಿಕಾರಿ,
ಪದನಿಮಿತ್ತ ಸದಸ್ಯರು: ಮೈಸೂರಿನಲ್ಲಿರುವ ಪುರಾತತ್ವ–ವಸ್ತು ಸಂಗ್ರಹಾಲಗಳು ಮತ್ತು ಪರಂಪರೆ ಇಲಾಖೆ ಆಯುಕ್ತರು ಅಥವಾ ಅವರ ಪ್ರತಿನಿಧಿ, ಕೋಲಾರ ನಗರ ಮತ್ತು ಸ್ಥಳೀಯ ಯೋಜನಾ ಜಂಟಿ ನಿರ್ದೇಶಕರು ಅಥವಾ ಉಪನಿರ್ದೇಶಕರು ಅಥವಾ ಸಹಾಯಕ ನಿರ್ದೇಶಕರು, ಕೋಲಾರ ನಗರಾಭಿವೃದ್ಧಿ ಪ್ರಾಧಿಕಾರದ ಯೋಜನಾ ಸದಸ್ಯರು, ಪ್ರವಾಸೋದ್ಯಮ ಇಲಾಖೆ ಪ್ರತಿನಿಧಿ, ರಾಜ್ಯ ಪುರಾತತ್ವ–ವಸ್ತು ಸಂಗ್ರಹಾಲಯಗಳ ಮತ್ತು ಪರಂಪರೆ ಇಲಾಖೆ ಸಹಾಯಕ ನಿರ್ದೇಶಕ, ಜಿಲ್ಲೆಯ ಎಲ್ಲಾ ನಗರಸಭೆ ಆಯುಕ್ತರು, ಎಲ್ಲಾ ಪುರಸಭೆ ಮುಖ್ಯಾಧಿಕಾರಿಗಳು, ಎಲ್ಲಾ ಪಟ್ಟಣ ಪಂಚಾಯಿತಿಯ ಮುಖ್ಯಾಧಿಕಾರಿಗಳು, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕರು,
ರಚನಾತ್ಮಕ ಎಂಜಿನಿಯರ್: ಪೃಥ್ವಿ ಎ (ಎಂ.ಟೆಕ್ ಇನ್ ಸ್ಟ್ರಕ್ಚರಲ್ ಎಂಜಿನಿಯರಿಂಗ್–ಬೇತಮಂಗಲ), ಸದಸ್ಯ: ಭಾರತ ಪುರಾತತ್ವ ಸರ್ವೇಕ್ಷಣಾ ಇಲಾಖೆ ಪ್ರತಿನಿಧಿ,
ವಾಸ್ತುಶಿಲ್ಪಿ: ಉಲ್ಫತ್ ಖಾನ್ (ಕೋಲಾರ),
ಪರಿಸರವಾದಿ: ಓಂಪ್ರಕಾಶ್ ಎನ್.ವಿ (ಹಿರಿಯ ಪರಿಸರ ವಿಜ್ಞಾನಿ–ಕೋಲಾರ),
ಇತಿಹಾಸ ತಜ್ಞರು: ಶಿವಪ್ಪ ಜಿ.ಅರಿವು (ಪ್ರಾಧ್ಯಾಪಕ, ಕೋಲಾರ),
ನೈಸರ್ಗಿಕ ಇತಿಹಾಸಕಾರ: ಕೃಷ್ಣಪ್ಪ (ಪ್ರಾಧ್ಯಾಪಕ, ಕೋಲಾರ),
ಕಲಾವಿದರು: ಕಾಳಿದಾಸ (ಕಲಾ ಶಿಕ್ಷಕ, ಕೋಲಾರ),
ಸರ್ಕಾರೇತರ ಸಂಸ್ಥೆಗಳ ಪ್ರತಿನಿಧಿಗಳು: ವಾರಿಧಿ ಮಂಜುನಾಥ್ ರೆಡ್ಡಿ (ಮುಳಬಾಗಿಲು), ಎಂ.ವಿ.ನರಸಿಂಹರಾವ್ (ಗ್ರಾಮ ವಿಕಾಸ, ಹೊನ್ನಶೆಟ್ಟಹಳ್ಳಿ),
ಸದಸ್ಯರು: ಭಾರತೀಯ ಪರಂಪರೆ ನಗರಗಳ ಜಾಲ ಸಂಸ್ಥೆಯ ಪ್ರತಿನಿಧಿ (ಮೈಸೂರು), ಸಮಿತಿ ಸಂಚಾಲಕರು: ಕೋಲಾರ ನಗರಾಭಿವೃದ್ಧಿ ಪ್ರಾಧಿಕಾರ, ವಿಶೇಷ ಆಹ್ವಾನಿತರು: ಪ್ರೊ.ಕೆ.ಆರ್.ನರಸಿಂಹನ್, ಸ್ವಾಮಿನಾಥನ್, ಜಿಲ್ಲಾ ಕಸಾಪ ಅಧ್ಯಕ್ಷರು, ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರು, ಮಹೇಶ್ ಆರ್ (ಪ್ರಾಧ್ಯಾಪಕ, ಕೋಲಾರ), ವಿಜಯಕುಮಾರ್ (ಅರಿವು ಭಾರತ, ಕೋಲಾರ), ಪಂಡಿತ್ ಮುನಿವೆಂಕಟಪ್ಪ (ನಿವೃತ್ತ ಮುಖ್ಯ ಶಿಕ್ಷಕ, ಕೋಲಾರ).
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.