ADVERTISEMENT

ಗುರಿ ಸಾಧನೆಗೆ ತತ್ವಾದರ್ಶ ಸ್ಪೂರ್ತಿ

​ಪ್ರಜಾವಾಣಿ ವಾರ್ತೆ
Published 11 ಜನವರಿ 2020, 14:37 IST
Last Updated 11 ಜನವರಿ 2020, 14:37 IST
ಕೋಲಾರದ ಬಾಲಕರ ಪದವಿ ಪೂರ್ವ ಕಾಲೇಜಿನಲ್ಲಿ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ ವತಿಯಿಂದ ಶನಿವಾರ ಹಮ್ಮಿಕೊಂಡಿದ್ದ ಸ್ವಾಮಿ ವಿವೇಕಾನಂದರ ಜಯಂತಿಯಲ್ಲಿ ವಿವೇಕಾನಂದರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದರು.
ಕೋಲಾರದ ಬಾಲಕರ ಪದವಿ ಪೂರ್ವ ಕಾಲೇಜಿನಲ್ಲಿ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ ವತಿಯಿಂದ ಶನಿವಾರ ಹಮ್ಮಿಕೊಂಡಿದ್ದ ಸ್ವಾಮಿ ವಿವೇಕಾನಂದರ ಜಯಂತಿಯಲ್ಲಿ ವಿವೇಕಾನಂದರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದರು.   

ಕೋಲಾರ: ‘ಯುವಕರ ಗುರಿ ಸಾಧನೆಗೆ ಸ್ವಾಮಿ ವಿವೇಕಾನಂದರ ತತ್ವ, ಆದರ್ಶಗಳು ಸ್ಪೂರ್ತಿ’ ಎಂದು ಪಿಯು ಕನ್ನಡ ಉಪನ್ಯಾಸಕರ ವೇದಿಕೆಯ ಜಿಲ್ಲಾ ಘಟಕದ ಅಧ್ಯಕ್ಷ ಜೆ.ಜಿ.ನಾಗರಾಜ್ ಅಭಿಪ್ರಾಯಪಟ್ಟರು.

ನಗರದ ಬಾಲಕರ ಪದವಿಪೂರ್ವ ಕಾಲೇಜಿನಲ್ಲಿ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ ವತಿಯಿಂದ ಶನಿವಾರ ಏರ್ಪಡಿಸಿದ್ದ ಸ್ವಾಮಿ ವಿವೇಕಾನಂದರ ಜಯಂತಿ ಕಾರ್ಯಕ್ರಮದಲ್ಲಿ ವಿವೇಕಾನಂದರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಮಾತನಾಡಿದರು.

‘ಆಧುನಿಕ ಯುಗದಲ್ಲಿ ಯುವಕರು ಮೌಢ್ಯ ಮತ್ತು ದೌರ್ಬಲ್ಯಗಳನ್ನು ಕಿತ್ತೊಗೆದು ಜ್ಞಾನದ ಮೂಲಕ ರಾಷ್ಟ್ರೀಯ ಅಭಿವೃದ್ಧಿಯಲ್ಲಿ ತೊಡಗಿಸಿಕೊಳ್ಳುವ ಮೂಲಕ ದೇಶದ ಸತ್ಪ್ರಜೆಗಳಾಗಬಹುದು. ಸ್ವಾಮಿ ವಿವೇಕಾನಂದರು ಹಿಂದೂ ಧರ್ಮ ಮತ್ತು ಸಂಸ್ಕೃತಿ ಎಂಬ ನಂದಾದೀಪವನ್ನು ಜಗತ್ತಿನಾದ್ಯಂತ ಬೆಳಗಿಸಿದ ದೃವತಾರೆ’ ಎಂದರು.

ADVERTISEMENT

‘ವಿವೇಕನಂದರು ಚಿಕ್ಕ ವಯಸ್ಸಿನಲ್ಲಿ ದೇಶದ ಸಮಸ್ಯೆಯನ್ನು ಅರ್ಥೈಸಿಕೊಳ್ಳಲು ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ ಪಾದಯಾತ್ರೆ ಮಾಡಿದರು. ಧರ್ಮ ಮತ್ತು ವೈಚಾರಿಕತೆಯ ಬಗ್ಗೆ ಯುವಕರಿಗೆ ಅರಿವು ಮೂಡಿಸಿದರು’ ಎಂದು ಹೇಳಿದರು.

‘ಹೆತ್ತ ತಾಯಿಯಷ್ಟೆ ಭೂತಾಯಿಗೂ ಗೌರವ ನೀಡುವುದನ್ನು ವಿವೀಕಾನಂದರು ಕಲಿಸಿದರು. ಅವರು ನಿಜ ಜೀವನದ ಬದುಕು ದೇಶದ ಇತಿಹಾಸ ಪುಟಗಳಲ್ಲಿ ಶಾಶ್ವತವಾಗಿ ದಾಖಲಾಗಿದೆ. ದಾರಿ ತಪ್ಪುತ್ತಿರುವ ಯುವಕರನ್ನು ಎಚ್ಚರಿಸುವ ಕೆಲಸ ಮಾಡಿದರು’ ಎಂದರು.

‘ದೇಶದಲ್ಲಿ ಬಡತನ ತಾಂಡವಾಡುತ್ತಿದೆ. ಶಿಕ್ಷಣ ಮತ್ತು ಆರೋಗ್ಯ ಮಾರಾಟದ ವಸ್ತುಗಳಾಗಿವೆ. ದೇಶದಲ್ಲಿ ನಿರುದೋಗ್ಯ ಸಮಸ್ಯೆ ಹೆಚ್ಚಾಗಿದೆ. ಯುವಕರು ಮೊಬೈಲ್, ಫೇಸ್‌ ಬುಕ್‌ ಬಳಕೆಯಿಂದ ದಿನಗಳನ್ನು ಕಳೆಯುತ್ತಿದ್ದಾರೆ’ ಎಂದು ವಿಷಾದಿಸಿದರು.

‘ಇತ್ತೀಚಿಗೆ ಜಾತಿಗೊಂದು ಜಯಂತಿ ನಡೆಯುವ ಪದ್ದತಿ ಹೆಚ್ಚಾಗುತ್ತಿದ್ದು, ನಾಲ್ಕು ಗೋಡೆಗಳ ಮಧ್ಯೆ ಸೀಮಿತಗೊಳಿಸುವುದನ್ನು ತೊರೆದು ಶಾಲಾ ಕಾಲೇಜುಗಳಲ್ಲಿ ಆಚರಣೆಯಾಗಬೇಕು. ಇದರಿಂದ ಗಣ್ಯರ ಬಗ್ಗೆ ವಿದ್ಯಾರ್ಥಿಗಳಿಗೆ ಅರಿವು ಮೂಡಿಸಲು ಸಹಕಾರಿಯಾಗುತ್ತದೆ’ ಎಂದು ಹೇಳಿದರು.

ಚುಟುಕು ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷ ಎ.ನಾರಾಯಣಪ್ಪ ಮಾತನಾಡಿ, ‘ವಿದ್ಯಾರ್ಥಿಗಳು ಶಿಕ್ಷಣದ ಜತೆಗೆ ಸಾಹಿತ್ಯ, ಭಾಷೆ, ಕಲೆ ಸಂಸ್ಕೃತಿ, ಜನಪದ ಕಲೆಗಳ ಬಗ್ಗೆ ಅರಿತಾಗ ಮಾತ್ರ ಶಿಕ್ಷಣ ಸಾರ್ಥಕತೆ ಹೊಂದ್ದುತ್ತದೆ ’ ಎಂದರು.

ಶಿಕ್ಷಕರಾದ ಸುಬ್ಬರಾಮಯ್ಯ, ಕೆ.ಎನ್.ಪರಮೇಶ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.