ಕೋಲಾರ: ‘ಅನಿಲ ಭಾಗ್ಯ ಯೋಜನೆಯಡಿ ಅರಣ್ಯ ಇಲಾಖೆ ಮೂಲಕ ಪರಿಶಿಷ್ಟರಿಗೆ ಗ್ಯಾಸ್ ಸೌಲಭ್ಯ ಕಲ್ಪಿಸುವಲ್ಲಿ ನಡೆದಿರುವ ಅಕ್ರಮದ ಬಗ್ಗೆ ಸಮಗ್ರ ತನಿಖೆ ನಡೆಸಿ’ ಎಂದು ಶಾಸಕ ಕೆ.ಶ್ರೀನಿವಾಸಗೌಡ ತಾಲ್ಲೂಕು ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿ ಬಾಬು ಅವರಿಗೆ ಸೂಚಿಸಿದರು.
ಇಲ್ಲಿ ಶುಕ್ರವಾರ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿ, ‘ಸರ್ಕಾರ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರ ಅನುಕೂಲಕ್ಕಾಗಿ 2016-17ನೇ ಸಾಲಿನಲ್ಲಿ ಅನಿಲ ಭಾಗ್ಯ ಯೋಜನೆಯಡಿ ನೀಡಿರುವ ಅನುದಾನ ಏಕೆ ಖರ್ಚು ಮಾಡಿಲ್ಲ. ಉಳಿಕೆಯಾಗಿರುವ ₹ 25 ಲಕ್ಷವನ್ನು ಏಕೆ ಕೇದಾರ್ ಗ್ಯಾಸ್ ಏಜೆನ್ಸಿ ಖಾತೆಯಲ್ಲಿ ಇಟ್ಟಿದ್ದೀರಿ?’ ಎಂದು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
‘ಅನಿಲ ಭಾಗ್ಯ ಯೋಜನೆಯಡಿ ಎಷ್ಟು ಮಂದಿಗೆ ಗ್ಯಾಸ್ ಸೌಲಭ್ಯ ಕಲ್ಪಿಸಿದ್ದೀರಿ? ಎಷ್ಟು ಅನುದಾನ ಉಳಿಕೆಯಾಗಿದೆ ಎಂಬ ಬಗ್ಗೆ 3 ದಿನದಲ್ಲಿ ಸಂಪೂರ್ಣ ಮಾಹಿತಿ ನೀಡಬೇಕು. ಕಾಟಾಚಾರಕ್ಕೆ ಸಭೆ ನಡೆಸುತ್ತಿಲ್ಲ. ಅಧಿಕಾರಿಗಳು ಅಗತ್ಯ ಮಾಹಿತಿಯೊಂದಿಗೆ ಸಭೆಗೆ ಬರಬೇಕು. ಸಭೆಗೆ ಗೈರಾಗಿರುವ ಅಧಿಕಾರಿಗಳಿಗೆ ಶೋಕಾಸ್ ನೋಟಿಸ್ ಕೊಡಿ’ ಎಂದು ಆದೇಶಿಸಿದರು.
‘ಅರಣ್ಯ ಇಲಾಖೆಯಿಂದ ವಿಶೇಷ ಘಟಕ ಯೋಜನೆ ಮತ್ತು ಗಿರಿಜನ ಉಪ ಯೋಜನೆಯಡಿ ಕೇದಾರ್ ಗ್ಯಾಸ್ ಏಜೆನ್ಸಿಗೆ ₹ 20 ಲಕ್ಷ ನೀಡಲಾಗಿದೆ. ಆದರೆ, ಅರ್ಹ ಫಲಾನುಭವಿಗಳಿಗೆ ಗ್ಯಾಸ್ ಸೌಲಭ್ಯ ಕೊಟ್ಟಿಲ್ಲ. ಆ ಹಣ ಏಜೆನ್ಸಿ ಖಾತೆಯಲ್ಲೇ ಉಳಿದಿದ್ದು, 4 ವರ್ಷದಿಂದ ಈ ವಿಷಯ ಪ್ರಸ್ತಾಪಿಸುತ್ತಿದ್ದರೂ ತಾರ್ಕಿತ ಅಂತ್ಯ ಕಂಡಿಲ್ಲ’ ಎಂದು ತಾ.ಪಂ ಅಧ್ಯಕ್ಷ ಎಂ.ಆಂಜಿನಪ್ಪ ಅಸಮಾಧಾನ ವ್ಯಕ್ತಪಡಿಸಿದರು.
ಪ್ರಚಾರ ನಡೆಸಿ: ‘ಬೆಂಬಲ ಬೆಲೆಯಲ್ಲಿ ರಾಗಿ ಖರೀದಿಸುತ್ತಿರುವ ಸಂಗತಿ ನನಗೆ ಗೊತ್ತಿಲ್ಲ. ಈ ವಿಷಯ ಗಮನಕ್ಕೆ ಬಂದಿದ್ದರೆ ನಾನೂ ಹೆಸರು ನೋಂದಣಿ ಮಾಡಿಸುತ್ತಿದೆ. ಅಧಿಕಾರಿಗಳು ಸರ್ಕಾರದ ಯೋಜನೆಗಳ ಬಗ್ಗೆ ವ್ಯಾಪಕ ಪ್ರಚಾರ ನಡೆಸಿ ಸಾರ್ವಜನಿಕರಿಗೆ ಮಾಹಿತಿ ಕೊಡಬೇಕು’ ಎಂದು ಶ್ರೀನಿವಾಸಗೌಡ ಹೇಳಿದರು.
ಇದಕ್ಕೆ ಪ್ರತಿಕ್ರಿಯಿಸಿದ ಕೃಷಿ ಇಲಾಖೆ ಸಹಾಯ ನಿರ್ದೇಶಕ ನಾಗರಾಜ್, ‘ಬೆಂಬಲ ಬೆಲೆಯಲ್ಲಿ ರಾಗಿ ಖರೀದಿಸುವ ಪ್ರಕ್ರಿಯೆ ಪ್ರಗತಿಯಲ್ಲಿದೆ. ಪ್ರತಿ ಕ್ವಿಂಟಾಲ್ ರಾಗಿಗೆ ₹ 3,295 ನಿಗದಿಪಡಿಸಲಾಗಿದ್ದು, ತಾಲ್ಲೂಕಿನಲ್ಲಿ 3,421 ರೈತರು ಹೆಸರು ನೋಂದಾಯಿಸಿದ್ದಾರೆ. ಈಗಾಗಲೇ 130 ರೈತರಿಂದ 1,987 ಕ್ವಿಂಟಾಲ್ ರಾಗಿ ಖರೀದಿಸಲಾಗಿದೆ’ ಎಂದು ವಿವರಿಸಿದರು.
‘ಕೃಷಿ ಯಂತ್ರೋಪಕರಣ ಖರೀದಿಗೆ ₹ 3.16 ಕೋಟಿ ಮಂಜೂರಾಗಿದ್ದು, 355 ಫಲಾನುಭವಿಗಳಿಗೆ ಹಿರಿತನದ ಆಧಾರದಲ್ಲಿ ಸಹಾಯಧನ ನೀಡಲಾಗುವುದು. 160 ರೈತರಿಗೆ ನೀರಾವರಿ ಸಬ್ಸಿಡಿ ಲಭ್ಯವಿದೆ. ಟಾರ್ಪಲ್ಗೆ ಬೇಡಿಕೆ ಹೆಚ್ಚಿದೆ’ ಎಂದು ಮಾಹಿತಿ ನೀಡಿದರು.
ಹಾಸ್ಟೆಲ್ ದುರಸ್ತಿ: ‘ನಚಿಕೇತ ವಿದ್ಯಾರ್ಥಿನಿಲಯದ ದುರಸ್ತಿ ನಡೆಯುತ್ತಿದೆ. ಹೀಗಾಗಿ ಅಲ್ಲಿನ ವಿದ್ಯಾರ್ಥಿಗಳನ್ನು ಬೇರೆ ಹಾಸ್ಟೆಲ್ಗೆ ಸ್ಥಳಾಂತರಿಸಬೇಕು’ ಎಂದು ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಚೌಡಪ್ಪ ಹೇಳಿದರು. ಆಗ ಶಾಸಕರು, ‘ಏ.14ರೊಳಗೆ ಹಾಸ್ಟೆಲ್ ದುರಸ್ತಿ ಕಾಮಗಾರಿ ಪೂರ್ಣಗೊಳಿಸಿ ಉದ್ಘಾಟಿಸಬೇಕು’ ಎಂದು ಸೂಚಿಸಿದರು.
‘ಗಂಗಾ ಕಲ್ಯಾಣ ಯೋಜನೆಯಡಿ 2018-19ನೇ ಸಾಲಿನಲ್ಲಿ 74 ಕೊಳವೆ ಬಾವಿ ಕೊರೆಸುವ ಗುರಿಯಿತ್ತು. ಆದರೆ, 47 ಕೊಳವೆ ಬಾವಿ ಮಾತ್ರ ಕೊರೆಸಲಾಗಿದೆ. 27 ಕೊಳವೆ ಬಾವಿ ಕೊರೆಸಬೇಕಿದೆ. ನೀರು ಸಿಕ್ಕಿರುವ ಕೊಳವೆ ಬಾವಿಗಳ ಫಲಾನುಭವಿಗಳಿಗೆ ಪಂಪ್ ಮೋಟರ್ ವಿತರಣೆ ಸಂಬಂಧ ಟೆಂಡರ್ದಾರರು ನ್ಯಾಯಾಲಯದ ಮೆಟ್ಟಿಲೇರಿದ್ದಾರೆ’ ಎಂದು ಅಂಬೇಡ್ಕರ್ ಅಭಿವೃದ್ಧಿ ನಿಗಮದ ತಾಲ್ಲೂಕು ಅಧಿಕಾರಿ ನಾರಾಯಣಸ್ವಾಮಿ ತಿಳಿಸಿದರು.
ಕೆಡಿಪಿ ನಾಮನಿರ್ದೇಶಿತ ಸದಸ್ಯರಾದ ಶ್ರೀನಿವಾಸ್, ಸೈಯದ್ ಷಫೀವುಲ್ಲಾ, ಮಾಲಾ ಹಾಜರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.