ADVERTISEMENT

ಅರ್ಹರಿಗೆ ಮೀಸಲಾತಿ ದೊರೆಯದೆ ಇರುವುದು ವಿಷಾದ

ಆರ್‌ಎಸ್‌ಎಸ್‌ ಕಾರ್ಯಕರ್ತರಿಂದ ಪಥಸಂಚಲನ

​ಪ್ರಜಾವಾಣಿ ವಾರ್ತೆ
Published 6 ಅಕ್ಟೋಬರ್ 2019, 15:10 IST
Last Updated 6 ಅಕ್ಟೋಬರ್ 2019, 15:10 IST
ವಿಜಯದಶಮಿ ಅಂಗವಾಗಿ ಆರ್‌ಎಸ್‌ಎಸ್‌ ಕಾರ್ಯಕರ್ತರು ಕೋಲಾರದಲ್ಲಿ ಭಾನುವಾರ ಪಥಸಂಚಲನ ನಡೆಸಿದರು.
ವಿಜಯದಶಮಿ ಅಂಗವಾಗಿ ಆರ್‌ಎಸ್‌ಎಸ್‌ ಕಾರ್ಯಕರ್ತರು ಕೋಲಾರದಲ್ಲಿ ಭಾನುವಾರ ಪಥಸಂಚಲನ ನಡೆಸಿದರು.   

ಕೋಲಾರ: ‘ಸಮಾಜದ ಕಟ್ಟ ಕಡೇಯ ವ್ಯಕ್ತಿ ಸಮಾಜದ ಮುಖ್ಯವಾಹಿನಿಗೆ ಬರುವವರೆಗೂ ಮೀಸಲಾತಿ ಮುಂದುವರಿಯಬೇಕು ಎಂಬುದು ಆರ್‌ಎಸ್‌ಎಸ್‌ ನಿಲುವು’ ಎಂದು ತುಮಕೂರು ವಿಭಾಗದ ಪ್ರಚಾರಕ ಅಕ್ಷಯ್ ತಿಳಿಸಿದರು.

ನಗರದಲ್ಲಿ ವಿಜಯದಶಮಿ ಅಂಗವಾಗಿ ಭಾನುವಾರ ಸಂಜೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಬೌದ್ಧಿಕ್ ನೀಡಿ ಮಾತನಾಡಿ, ‘ಮೀಸಲಾತಿ ಸೇರಬೇಕಾದವರಿಗೆ ಇದುವರೆಗೂ ತಲುಪಿಲ್ಲ. ಬಿ.ಆರ್.ಅಂಬೇಡ್ಕರ್ 10 ವರ್ಷಗಳಷ್ಟೇ ಮೀಸಲಾತಿ ಸಾಕು ಎಂದಿದ್ದರು. ಆದರೆ ದೇಶಕ್ಕೆ ಸ್ವಾತಂತ್ರ್ಯ ಬಂದು 70 ವರ್ಷ ಕಳೆದರೂ ಸಮಾನತೆ ದೊರೆತಿಲ್ಲ’ ಎಂದು ವಿಷಾದಿಸಿರು.

‘2,400 ವರ್ಷಗಳಿಂದ ಭಾರತದ ಮೇಲೆ ಸಾವಿರಾರು ಬಾರಿ ದಾಳಿ ಆಗಿದೆ. 6 ಕೋಟಿ ಹಿಂದುಗಳ ಬಲಿದಾನ ಆಗಿದೆ. ಜಗತ್ತಿನ ಯಾವುದೇ ರಾಷ್ಟ್ರದಲ್ಲಿ ಇಂತಹ ಬಲಿದಾನ ನೀಡಿದ ಇತಿಹಾಸ ಇಲ್ಲ. ಇಂದಿಗೂ 120 ಕೋಟಿ ಜನ ಇದ್ದೇವೆ. ಇದು ವಿಜಯದ ಇತಿಹಾಸವಲ್ಲವೇ’ ಎಂದು ಪ್ರಶ್ನಿಸಿದರು.

ADVERTISEMENT

‘ಜಗತ್ತಿನಲ್ಲಿ 53 ಸಂಸ್ಕೃತಿಗಳಿದ್ದವು, ಎಲ್ಲವೂ ಮುಸ್ಲಿಂ, ಕ್ರಿಶ್ಚಿಯನ್ನರ ಆಕ್ರಮಣಕ್ಕೆ ಒಳಗಾಗಿದೆ. ಈಗ ಉಳಿದಿರುವುದು ಭಾರತದ ಹಿಂದು ಸಂಸ್ಕೃತಿ. ಇತರೆ ಸಂಸ್ಕೃತಿಗಳು ಪರಕೀಯರ ದಾಳಿಯ 35 ವರ್ಷದೊಳಗೆ ಬಿಟ್ಟು ಮುಸ್ಲಿಂ, ಕ್ರಿಶ್ಚಿಯನ್ನರಾದರು. 104 ದೇಶಗಳು ಕ್ರಿಶ್ಚಿಯನ್, 57 ದೇಶಗಳು ಮುಸ್ಲಿಂ ರಾಷ್ಟ್ರಗಳಾದವು. ಅಲ್ಲಿ ಯಾವುದೇ ಸಂಸ್ಕೃತಿ ಉಳಿದಿಲ್ಲ’ ಎಂದರು

‘ರಾಮ ರಾವಣರ ಯುದ್ಧದಲ್ಲಿ ಅಂತಿಮ ವಿಜಯ ಸಿಕ್ಕಿದ್ದು ವಿಜಯದಶಮಿಯಂದು. ಧರ್ಮ -ಅರ್ಧಮದಲ್ಲಿ ಪಾಂಡವ -ಕೌರವರ ನಡುವಿನ ಕುರುಕ್ಷೇತ್ರದಲ್ಲಿ ಪಾಂಡವರಿಗೆ ಜಯ ಸಿಕ್ಕಿದ್ದು ವಿಜಯದಶಮಿಯಂದೇ. ಪಠ್ಯಪುಸ್ತಕದಲ್ಲಿರುವಂತೆ ದೇಶದ ಇತಿಹಾಸ ಸೋಲಿನ ಇತಿಹಾಸವಲ್ಲ. ಬ್ರಿಟೀಷರ ಮಾನಸಿಕತೆಯ ವ್ಯಕ್ತಿಗಳು ನಮ್ಮ ದೆಶದ ಇತಿಹಾಸವನ್ನು ನಿಶ್ಚಯ ಮಾಡಿದರೇ ಹೊರತು ಇಲ್ಲಿನ ಸಂಸ್ಕೃತಿಯ ವಾರಸುದಾರರು ಮಾಡಿದ ಇತಿಹಾಸವಲ್ಲ’ ಎಂದು ಹೇಳಿದರು.

ನಿವೃತ್ತ ಯೋಧ ಭಾಸ್ಕರ್ ಮಾತನಾಡಿ, ‘ದೇಶದ ಸೈನಿಕರು ಒಗ್ಗಟ್ಟಾಗಿದ್ದುಕೊಂಡು ರಾಷ್ಟ್ರಕ್ಕಾಗಿ ಕಾಯುತ್ತಿದ್ದಾರೆ. ಅಂತೆಯೇ ನಮ್ಮ ಊರೊಳಗೆ ಎಲ್ಲರೂ ಒಗ್ಗಟ್ಟಾಗಿದ್ದರೆ ಮಾತ್ರ ವಿಜಯ ಸಾಧಿಸಬಹುದು’ ಎಂದರು.

ಕಾರ್ಯಕ್ರಮಕ್ಕೂ ಮುನ್ನ ನಗರದ ಒಕ್ಕಲಿಗರ ಸಂಘದ ಹಾಸ್ಟೆಲ್ ಬಳಿಯಿಂದ ನೂರಾರು ಗಣವೇಷಧಾರಿಗಳು ನಗರದ ಪ್ರಮುಖ ರಸ್ತೆಗಳಲ್ಲಿ ಪಥಸಂಚಲನ ನಡೆಸಿದರು. ಮಾರ್ಗದ ವಿವಿಧೆಡೆ ಪುಷ್ಪವೃಷ್ಠಿ ಗರೆಯುವ ಮೂಲಕ ಗಣವೇಷಧಾರಿಗಳನ್ನು ಸ್ವಾಗತಿಸಿದರು. ಸಂಸದ ಎಸ್. ಮನಿಸ್ವಾಮಿ ಗಣವೇಷಧಾರಿಯಾಗಿ ಪಾಲ್ಗೊಂಡು ಗಮನ ಸೆಳೆದರು.

ಆರ್‌ಎಸ್‌ಎಸ್‌ ತುಮಕೂರು ವಿಭಾಗ ಸಂಘ ಚಾಲಕ ಡಾ.ಶಂಕರ್ ನಾಯಕ್, ನಗರ ಸಂಘಚಾಲಕ ಡಾ.ಬಾಲಸುಂದರ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.