ADVERTISEMENT

ಕೋಲಾರದ ಪ್ರತಿ ತಾಲೂಕು ಪಂಚಾಯಿತಿ ಕ್ಷೇತ್ರದಲ್ಲಿ ಜೆಡಿಯು ಸ್ಪರ್ಧೆ

​ಪ್ರಜಾವಾಣಿ ವಾರ್ತೆ
Published 1 ಏಪ್ರಿಲ್ 2021, 14:55 IST
Last Updated 1 ಏಪ್ರಿಲ್ 2021, 14:55 IST

ಕೋಲಾರ: ‘ಜಿಲ್ಲಾ ಪಂಚಾಯಿತಿ ಮತ್ತು ತಾಲ್ಲೂಕು ಪಂಚಾಯಿತಿ ಚುನಾವಣೆಯಲ್ಲಿ ಪ್ರತಿ ಕ್ಷೇತ್ರದಲ್ಲೂ ಪಕ್ಷದ ಅಭ್ಯರ್ಥಿಗಳನ್ನು ಕಣಕ್ಕಿಳಿಸುತ್ತೇವೆ’ ಎಂದು ಸಂಯುಕ್ತ ಜನತಾದಳ (ಜೆಡಿಯು) ರಾಜ್ಯ ಯುವ ಘಟಕದ ಅಧ್ಯಕ್ಷ ನಾಗರಾಜ್‌ ತಿಳಿಸಿದರು.

ಇಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ದೇಶ ಮತ್ತು ರಾಜ್ಯದಲ್ಲಿ ರಾಜಕೀಯ ವ್ಯವಸ್ಥೆ ಕಲುಷಿತಗೊಂಡಿದೆ. ಪಕ್ಷವು ಸಾವಯವ ರಾಜಕೀಯ ಪದ್ಧತಿಯಿಂದ ವ್ಯವಸ್ಥೆ ಸರಿಪಡಿಸುವ ಕೆಲಸ ಮಾಡುತ್ತದೆ’ ಎಂದು ಹೇಳಿದರು.

‘ತಾ.ಪಂ, ಜಿ.ಪಂ ಚುನಾವಣೆಗೆ ಪಕ್ಷದಿಂದ ಸೂಕ್ತ ಅಭ್ಯರ್ಥಿಗಳನ್ನು ಕಣಕ್ಕಿಳಿಸುತ್ತೇವೆ. ರಾಜಕೀಯದಲ್ಲಿ ಪ್ರಾಮಾಣಿಕತೆ, ನೀತಿ, ಭ್ರಷ್ಟಾಚಾರರಹಿತ ಆಡಳಿತ ಮರೀಚಿಕೆಯಾಗಿದೆ. ಬಿಹಾರದಲ್ಲಿ ಪಕ್ಷ ಬಲಿಷ್ಠವಾಗಿದೆ. ಇದೇ ರೀತಿ ರಾಜ್ಯದಲ್ಲೂ ಮುಂದೆ ಪಕ್ಷ ಅಧಿಕಾರಕ್ಕೆ ಬರಲಿದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ADVERTISEMENT

‘ಪಕ್ಷ ರೈತರು, ಮಹಿಳೆಯರು, ಕಾರ್ಮಿಕರ ಪರವಾಗಿದೆ. ಅಭಿವೃದ್ಧಿ ಕರ್ನಾಟಕ ನಿರ್ಮಾಣಕ್ಕೆ, ರೈತರ ಸಮಸ್ಯೆಗಳ ಪರಿಹಾರಕ್ಕೆ ಧ್ವನಿ ಎತ್ತಿ ಪಾದಯಾತ್ರೆ ಮಾಡಿದ್ದೇವೆ. ಜನರನ್ನು ಸೇರಿಸಿ ಬಹಿರಂಗ ಸಭೆ ನಡೆಸಿದರೆ ಪ್ರಚಾರ ಸಿಗಲ್ಲ. ಯೋಜನೆಗಳನ್ನು ಅನುಷ್ಠಾನಕ್ಕೆ ತಂದು ಜನರ ವಿಶ್ವಾಸ ಗಳಿಸಬೇಕು. ಬಿಜೆಪಿ, ಕಾಂಗ್ರೆಸ್, ಜೆಡಿಎಸ್‌ನವರು ಹಣ, ಹೆಂಡ ಕೊಟ್ಟು ಮತದಾರರನ್ನು ಖರೀದಿಸುತ್ತಿದ್ದಾರೆ’ ಎಂದು ಟೀಕಿಸಿದರು.

‘ಮಹಿಳಾ ಸಬಲೀಕರಣವು ಪಕ್ಷದ ಪ್ರಮುಖ ಅಜೆಂಡಾ. ರಾಜ್ಯದಲ್ಲಿ ಪಕ್ಷ ಅಧಿಕಾರಕ್ಕೆ ಬಂದರೆ ಮಹಿಳೆಯನ್ನೇ ಮುಖ್ಯಮಂತ್ರಿಯಾಗಿ ಮಾಡುವ ಉದ್ದೇಶವಿದೆ. ಚುನಾವಣೆಯಲ್ಲಿ ಬಂಡವಾಳ ಹಾಕಿ ದುಡ್ಡು ಮಾಡುವವರಿಗೆ ಟಿಕೆಟ್ ಕೊಡಲ್ಲ. ಸಮಾಜದ ಅಭಿವೃದ್ಧಿಗೆ ದೂರದೃಷ್ಟಿಯಿರುವ ಅಭ್ಯರ್ಥಿಗಳನ್ನು ಆಯ್ಕೆ ಮಾಡುತ್ತೇವೆ. ಮದ್ಯ ನಿಷೇಧಕ್ಕೆ ಒತ್ತಾಯಿಸಿ ಸದ್ಯದಲ್ಲೇ ಬೈಕ್‌ ರ್‌್ಯಾಲಿ ನಡೆಸುತ್ತೇವೆ’ ಎಂದರು.

ಪಕ್ಷದ ರಾಜ್ಯ ಯುವ ಘಟಕದ ಪ್ರಧಾನ ಕಾರ್ಯದರ್ಶಿ ಧನಂಜಯ, ಕಾರ್ಯಾಧ್ಯಕ್ಷ ಲಕ್ಕಣ್ಣ, ರಾಜ್ಯ ಮಹಿಳಾ ಘಟಕದ ಅಧ್ಯಕ್ಷೆ ಕಲಾವತಿ, ಉಪಾಧ್ಯಕ್ಷೆ ಶಾಂತಕುಮಾರಿ, ರೈತ ಘಟಕ ಅಧ್ಯಕ್ಷ ಡಿ.ಕೆ.ಶ್ರೀನಿವಾಸ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.