ಬಂಧನ
(ಪ್ರಾತಿನಿಧಿಕ ಚಿತ್ರ)
ಕನಕಪುರ: ಕಾಡು ಪ್ರಾಣಿಗಳನ್ನು ಅಕ್ರಮವಾಗಿ ಬೇಟೆಯಾಡಿ ಸಾಗಾಣೆ ಮಾಡುತ್ತಿದ್ದ ಆರೋಪಿಗಳನ್ನು ಅರಣ್ಯಾಧಿಕಾರಿಗಳು ಶಿವನಹಳ್ಳಿಯಲ್ಲಿ ಶನಿವಾರ ಬಂಧಿಸಿದ್ದಾರೆ.
ಹಾರೋಹಳ್ಳಿ ತಾಲ್ಲೂಕಿನ ಅಣೆದೊಡ್ಡಿ ಗ್ರಾಮದ ನಾಗೇಂದ್ರ (32), ನಾರಾಯಣಸ್ವಾಮಿ (26), ನಂಜುಂಡಸ್ವಾಮಿ (27), ನವೀನ್ (26) ಬಂಧಿತ ಆರೋಪಿಗಳು. ಉಳಿದ ಆರೋಪಿಗಳಾದ ನಂಜುಂಡಸ್ವಾಮಿ, ಮುನಿರಾಜು, ಕಾಳಪ್ಪಸ್ವಾಮಿ ದಾಳಿ ವೇಳೆ ತಪ್ಪಿಸಿಕೊಂಡು ಪರಾರಿಯಾಗಿದ್ದಾರೆ.
ಆರೋಪಿಗಳು ಮಂಡ್ಯ ಜಿಲ್ಲೆ, ಬನ್ನೂರು ಕಡೆಯಿಂದ ಬೇಟೆಯಾಡಿದ ಕಾಡು ಪ್ರಾಣಿಗಳನ್ನು ವಾಹನದಲ್ಲಿ ಸಾಗಾಣೆ ಮಾಡುತ್ತಿದ್ದಾರೆ ಎಂಬ ಖಚಿತ ಮಾಹಿತಿ ಮೇರೆಗೆ ಅರಣ್ಯಾಧಿಕಾರಿಗಳು ದಾಳಿ ನಡೆಸಿದ್ದಾರೆ. ಶಿವನಹಳ್ಳಿ ಬಳಿ ವಾಹನ ತಡೆದು ದಾಳಿ ನಡೆಸಿದಾಗ ಎರಡು ಮುಳ್ಳು ಹಂದಿ, ಒಂದು ಕಾಡು ಬೆಕ್ಕು, ಒಂದು ಮೊಲದ ಮೃತದೇಹ ದೊರೆತಿದೆ.
ಅರಣ್ಯಾಧಿಕಾರಿಗಳು ಆರೋಪಿಗಳನ್ನು ಬಂಧಿಸಿ ಕಾಡುಪ್ರಾಣಿಗಳ ಮೃತದೇಹ, ಎರಡು ನಾಡ ಬಂದೂಕು, ಮದ್ದು ಸೇರಿದಂತೆ ಹಲವು ವಸ್ತುಗಳನ್ನು ವಶಕ್ಕೆ ಪಡೆದಿದ್ದಾರೆ.
ಆರೋಪಿಗಳ ವಿರುದ್ಧ ವನ್ಯಜೀವಿ ಕಾಯ್ದೆಯಡಿ ಪ್ರಕರಣ ದಾಖಲಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಜೊತೆಗೆ ಪರಾರಿಯಾಗಿರುವ ಆರೋಪಿಗಳ ಬಂಧನಕ್ಕೆ ಬಲೆ ಬೀಸಿದ್ದಾರೆ.
ಜಿಲ್ಲಾ ಉಪ ಅರಣ್ಯ ಸಂರಕ್ಷಣಾಧಿಕಾರಿ ರಾಮಕೃಷ್ಣಪ್ಪ, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಚೈತ್ರ ಅವರ ಮಾರ್ಗದರ್ಶನದಲ್ಲಿ ರವಿ, ಶಿವಕುಮಾರ್, ಅಣ್ಣಯ್ಯ, ಮಲ್ಲಿಕಾರ್ಜುನ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.