ADVERTISEMENT

ಮಾಲೂರು ಶಾಸಕ ನಂಜೇಗೌಡ ಆಯ್ಕೆ ಅಸಿಂಧು: ಮರು ಮತ ಎಣಿಕೆಗೆ ಹೈಕೋರ್ಟ್ ಆದೇಶ

ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸುತ್ತೇನೆ: ನಂಜೇಗೌಡ

​ಪ್ರಜಾವಾಣಿ ವಾರ್ತೆ
Published 16 ಸೆಪ್ಟೆಂಬರ್ 2025, 11:47 IST
Last Updated 16 ಸೆಪ್ಟೆಂಬರ್ 2025, 11:47 IST
<div class="paragraphs"><p>ನಂಜೇಗೌಡ </p></div>

ನಂಜೇಗೌಡ

   

ಕೋಲಾರ: ಶಾಸಕ ಸ್ಥಾನ ಅಸಿಂಧುಗೊಳಿಸಿ ಮರು ಮತ ಎಣಿಕೆ ಮಾಡುವಂತೆ ಹೈಕೋರ್ಟ್‌ ಆದೇಶ ಮಾಡಿದ್ದು, ತುಂಬಾ ಬೇಸರ ಉಂಟಾಗಿದೆ ಎಂದು ಮಾಲೂರು ಕ್ಷೇತ್ರದ ಕಾಂಗ್ರೆಸ್‌ ಶಾಸಕ ಕೆ.ವೈ.ನಂಜೇಗೌಡ ಹೇಳಿದರು.

ಅಸಿಂಧುಗೊಳಿಸಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ‘ಕ್ಷೇತ್ರದ ಮತದಾರರು ಯಾವುದೇ ಕಾರಣಕ್ಕೂ ಗಾಬರಿ ಆಗುವ ಅವಶ್ಯವಿಲ್ಲ. 30 ದಿನಗಳ ಅವಧಿಗೆ ತಡೆಯಾಜ್ಞೆಯನ್ನು ಹೈಕೋರ್ಟ್‌ ನೀಡಿದ್ದು, ಸುಪ್ರೀಂ ಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿಸುತ್ತೇನೆ. ನಾನು ಧೈರ್ಯವಾಗಿ ಹೋರಾಟ ಮಾಡುತ್ತೇನೆ’ ಎಂದರು.

ADVERTISEMENT

‘ಶಾಸಕರಿಲ್ಲದೆ ಮಾಲೂರು ಕ್ಷೇತ್ರ ತಬ್ಬಲಿ ಆಗಿದೆ ಎಂಬುದಾಗಿ ಪರಾಜಿತ ಅಭ್ಯರ್ಥಿ ಹೇಳಿಕೊಂಡಿದ್ದಾರೆ. ಆದರೆ, ಸುಪ್ರೀಂ ಕೋರ್ಟ್‌ನಲ್ಲಿ ನನಗೆ ಜಯ ಸಿಗಲಿದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

2023ರ ವಿಧಾನಸಭೆ ಚುನಾವಣೆಯಲ್ಲಿ 248 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದ ನಂಜೇಗೌಡ ಅವರ ಆಯ್ಕೆ ಪ್ರಶ್ನಿಸಿ ಸಮೀಪ ಪ್ರತಿಸ್ಪರ್ಧಿ ಬಿಜೆಪಿಯ ಮಂಜುನಾಥಗೌಡ ನ್ಯಾಯಾಲಯಕ್ಕೆ ತಕರಾರು ಅರ್ಜಿ ಸಲ್ಲಿಸಿದ್ದರು. ಮತ ಎಣಿಕೆಯಲ್ಲಿ ಲೋಪವುಂಟಾಗಿದ್ದು, ನಂಜೇಗೌಡ ಆಯ್ಕೆ ಅಸಿಂಧುಗೊಳಿಸಬೇಕು, ಮರ ಮತ ಎಣಿಕೆ ನಡೆಸಬೇಕು ಎಂದು ಮನವಿ ಮಾಡಿದ್ದರು.

ಆಯ್ಕೆ ಅಸಿಂಧುಗೊಳಿಸಿ ಆದೇಶ ನೀಡುತ್ತಿದ್ದಂತೆಯೇ ಇದಕ್ಕೆ ತಡೆ ನೀಡುವಂತೆ ನಂಜೇಗೌಡರ ಪರ ವಕೀಲರು ಮನವಿ ಮಾಡಿದರು. ಇದನ್ನು ಪುರಸ್ಕರಿಸಿದ ನ್ಯಾಯಾಲಯ, 30 ದಿನಗಳವರೆಗೆ ತನ್ನದೇ ತೀರ್ಪಿಗೆ ತಡೆ ನೀಡಿದೆ.

ಕಳ್ಳಕಾಕರಿಗೆ ಶಿಕ್ಷೆ ಆಗಬೇಕು: ಮಂಜುನಾಥಗೌಡ

ಕೋಲಾರ: ‘ನಾನು ಮತ್ತೆ ಶಾಸಕ ಆಗುವುದು ಮುಖ್ಯವಲ್ಲ; ಕಳ್ಳಕಾಕರಿಗೆ ಶಿಕ್ಷೆ ಆಗಬೇಕು ಎಂಬುದು ನನ್ನ ಉದ್ದೇಶ. ನಾನು ಹಿಂದೆ ಶಾಸಕನಾಗಿ ಅಧಿಕಾರ ಅನುಭವಿಸಿದ್ದೇನೆ. ಆದರೆ, ಮತ ಎಣಿಕೆಯಲ್ಲಿ ಮೋಸ ಮಾಡುವ ಮೂಲಕ ಕೆಲವರು ಪ್ರಜಾಭುಪ್ರತ್ವದ ಕೊಲೆ ಮಾಡಿದ್ದಾರೆ’ ಎಂದು ಮಾಲೂರು ಕ್ಷೇತ್ರದ ಮಾಜಿ ಶಾಸಕ ಬಿಜೆಪಿಯ ಮಂಜುನಾಥಗೌಡ ಆರೋಪಿಸಿದರು.

2023ರ ವಿಧಾನಸಭೆ ಚುನಾವಣೆಯಲ್ಲಿ ನಂಜೇಗೌಡರ ಆಯ್ಕೆ ಪ್ರಶ್ನಿಸಿ ತಕರಾರು ಅರ್ಜಿ ಸಲ್ಲಿಸಿದ್ದ ಅವರು, ‘ನ್ಯಾಯದಾನ ವಿಳಂಬವಾದರೂ ನ್ಯಾಯದ ಪರ ಸಿಕ್ಕಿದೆ. ಮತ ಕಳ್ಳತನದ ಬಗ್ಗೆ ರಾಹುಲ್‌ ಗಾಂಧಿ ಹೋರಾಟ ಮಾಡುತ್ತಿದ್ದಾರೆ. ಅವರು ಮಾಲೂರು ಕ್ಷೇತ್ರಕ್ಕೆ ಬಂದು ಹೋರಾಟ ನಡೆಸಬೇಕು’ ಎಂದು ಆಗ್ರಹಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.