ADVERTISEMENT

ಕೀಲುಕುದುರೆ ಕುಣಿತಕ್ಕೆ ಒಲಿದ ರಾಜ್ಯೋತ್ಸವ

ಜಾನಪದ ಕಲಾವಿದ, ವೇಮಗಲ್‌ ಹೋಬಳಿಯ ತೋಪಣ್ಣಗೆ ರಾಜ್ಯ ಸರ್ಕಾರದ ಗೌರವ

ಕೆ.ಓಂಕಾರ ಮೂರ್ತಿ
Published 31 ಅಕ್ಟೋಬರ್ 2025, 3:00 IST
Last Updated 31 ಅಕ್ಟೋಬರ್ 2025, 3:00 IST
ತೋಪಣ್ಣ ಅವರು ಕೀಲುಕುದುರೆ ಕುಣಿತ ಪ್ರದರ್ಶನ ನೀಡಿದ್ದ ಸಂದರ್ಭ
ತೋಪಣ್ಣ ಅವರು ಕೀಲುಕುದುರೆ ಕುಣಿತ ಪ್ರದರ್ಶನ ನೀಡಿದ್ದ ಸಂದರ್ಭ   

ಕೋಲಾರ: ಜಿಲ್ಲೆಯ ಜಾನಪದ ಕಲಾವಿದ ಎಂ.ತೋಪಣ್ಣ (ಜಾನಪದ) ಅವರಿಗೆ ರಾಜ್ಯಮಟ್ಟದ ಕರ್ನಾಟಕ ರಾಜ್ಯೋತ್ಸವ–2025 ಪ್ರಶಸ್ತಿ ಒಲಿದಿದೆ. ಅವರು ಸುಮಾರು 50 ವರ್ಷಗ‌ಳಿಂದ ಕೀಲುಕುದುರೆ ಕುಣಿತ, ಗಾರುಡಿ ಗೊಂಬೆ ಕಲೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.

ಅವರಿಗೆ ನ.1ರಂದು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ನಡೆಯುವ ಸಮಾರಂಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರಶಸ್ತಿ ಫಲಕ ಹಾಗೂ ನೆನಪಿನ ಕಾಣಿಕೆ ನೀಡಿ ಗೌರವಿಸಲಿದ್ದಾರೆ. ರಾಜ್ಯೋತ್ಸವ ಪ್ರಶಸ್ತಿಯು ₹ 5 ಲಕ್ಷ ನಗದು ಮತ್ತು 25 ಗ್ರಾಂ ಚಿನ್ನದ ಪದಕವನ್ನು ಒಳಗೊಂಡಿದೆ. ಪ್ರಶಸ್ತಿಗೆ ಆಯ್ಕೆಯಾದವರ ಪಟ್ಟಿಯನ್ನು ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ್‌ ತಂಗಡಗಿ ಗುರುವಾರ ಬೆಂಗಳೂರಿನಲ್ಲಿ ಪ್ರಕಟಿಸಿದರು.

ಕೋಲಾರ ತಾಲ್ಲೂಕಿನ ವೇಮಗಲ್‌ ಹೋಬಳಿಯ ಮಂಚಂಡಹಳ್ಳಿ ಕುರುಗಲ್‌ ಗ್ರಾಮ ತೋಪಣ್ಣ ಅವರಿಗೆ ಈಗ 63 ವರ್ಷ ವಯಸ್ಸು.

ADVERTISEMENT

ಕೀಲುಕುದುರೆ, ಗಾರುಡಿ ಗೊಂಬೆ, ಜಾನಪದ ನೃತ್ಯ ಕಲಾ ಸೇವೆಯನ್ನು ಬಾಲ್ಯದಲ್ಲಿಯೇ ರೂಢಿಸಿಕೊಂಡು ಬೆಳೆದವರು. ಅವರು ಪ್ರಶಸ್ತಿ ಸಂಭ್ರಮದ ನಡೆದು ಬಂದ ಹಾದಿಯನ್ನು ಹಂಚಿಕೊಂಡಿದ್ದಾರೆ.

‘ತಾಯಿಯ ಅಣ್ಣ (ಮಾವ) ಜಂಗಮಕೋಟೆಯ ದಿವಂಗತ ಕೆ.ಎಸ್‌.ಮುನಿಯಪ್ಪ ಅವರಿಂದ ನನಗೆ ಈ ಕಲೆ ಒಲಿಯಿತು. ಅವರು ಕೂಡ ರಾಜ್ಯ ಪ್ರಶಸ್ತಿ ಪುರಸ್ಕೃತರು. ಅವರು ಕೀಲುಕುದುರೆ, ಗಾರುಡಿಗೊಂಬೆ, ನವಿಲು, ಹಾಸ್ಯ ಮುಖವಾಡಗಳು, ಭುಜ ಕಿರೀಟಗಳನ್ನು ಪೇಪರ್‌ ಮತ್ತು ಹುಣಸೆಪುಡಿ ಪೇಸ್ಟಿನಿಂದ ಮಾಡುತ್ತಿದ್ದರು. ಅವರಿಂದ ನಾನೂ ಕಲಿತ. ಎಸ್‌ಎಸ್‌ಎಲ್‌ಸಿ ಬಳಿಕ ಶಾಲೆ ಬಿಟ್ಟು ಈ ಕಲೆಯಲ್ಲಿ ತೊಡಗಿದೆ. ಗುರು ಇಲ್ಲದೆ ಜಾನಪದ ಕಲೆ ಒಲಿಯುವುದಿಲ್ಲ. ಈ ಕಲೆಯಿಂದಲೇ ನಾನು ಮತ್ತು ನನ್ನ ಬಳಗ ಬದುಕು ಕಟ್ಟಿಕೊಂಡಿದ್ದೇವೆ. ಕುಟುಂಬದ ಸಹಕಾರ ಮರೆಯುವಂತಿಲ್ಲ’ ಎಂದು ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ಜಿಲ್ಲೆ, ರಾಜ್ಯ ಹಾಗೂ ಹೊರರಾಜ್ಯದ ವಿವಿಧೆಡೆ ಹಲವಾರು ಸಂಘಟನೆಗಳು ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ಅವರು ಭಾಗವಹಿಸಿ ಪ್ರದರ್ಶನ ನೀಡಿದ್ದಾರೆ. ಸರ್ಕಾರದ ಕಾರ್ಯಕ್ರಮಗಳಲ್ಲಿ ಕಲಾ ಪ್ರದರ್ಶನ ನೀಡಿರುತ್ತಾರೆ.

‘ಮೈಸೂರು ದಸರಾ, ಹಂಪಿ ಉತ್ಸವ, ಕೇರಳ, ಆಂಧ್ರಪ್ರದೇಶ, ನವದೆಹಲಿ ಸೇರಿದಂತೆ ಹಳ್ಳಿಯಿಂದ ದೂರದ ನಗರಗಳಲ್ಲಿ ಕಾರ್ಯಕ್ರಮ ನೀಡಿದ್ದೇನೆ. ಮರಗೋಲು, ಕಾವಾಡಿ ಕುಣಿತದಲ್ಲೂ ತೊಡಗಿದ್ದೆ. ಈಗ ಹುಡುಗರಿಗೆ ಕಲಿಸಿಕೊಡುತ್ತಿದ್ದೇನೆ. 30 ಮಂದಿಗೆ ತರಬೇತಿ ನೀಡಿದ್ದೇನೆ. ಅವರು ಕೂಡ ತಂಡ ಕಟ್ಟಿಕೊಂಡು ಕಲಾ ಸೇವೆಯಲ್ಲಿ ತೊಡಗಿದ್ದಾರೆ’ಎಂದರು.

ತೋಪಣ್ಣ ನೇತೃತ್ವದ ವಿನಾಯಕ ಕೀಲುಕುದುರೆ ನೃತ್ಯ ಯುವಕರ ಕ್ಷೇಮಾಭಿವೃದ್ಧಿ ಸಂಘದ ತಂಡ ಮೈಸೂರು ದಸರಾ ಮಹೋತ್ಸವ ಸೇರಿದಂತೆ ವಿವಿಧ ಉತ್ಸವಗಳಲ್ಲಿ ಪಾಲ್ಗೊಂಡ ಹೆಗ್ಗಳಿಕೆ ಹೊಂದಿದೆ. ಕೀಲುಕುದುರೆ ಜೊತೆ ಗಾರುಡಿಗೊಂಬೆ, ಕಾವಡಿ ಕುಣಿತಗಳನ್ನು ಪ್ರದರ್ಶಿಸುತ್ತಾರೆ. ಗೊಂಬೆ ತಯಾರಿಸುವುದರಲ್ಲೂ ಎತ್ತಿದ ಕೈ. ಇವರ ಕಲೆಯನ್ನು ಗುರುತಿಸಿ ಕರ್ನಾಟಕ ಜಾನಪದ ಪರಿಷತ್‌ ಜಾನಪದ ಲೋಕಕ್ಕೆ ಆಹ್ವಾನಿಸಿ ಲೋಕಸಿರಿ–97ರ ತಿಂಗಳ ಅತಿಥಿ ಕಾರ್ಯಕ್ರಮದಲ್ಲಿ ಗೌರವಿಸಿದೆ.

ಕೀಲುಕುದುರೆ ಕುಣಿತ ರಾಜ್ಯದ ಜನಪ್ರಿಯ ಜನಪದ ಕಲೆಯಾಗಿದೆ. ಮರದಿಂದ ಮಾಡಿದ ಕೀಲುಗಳಿಂದ ರಚಿತವಾದ ಕುದುರೆಯನ್ನು ಸೊಂಟಕ್ಕೆ ಕಟ್ಟಿಕೊಂಡು ಕುಣಿಯುವ ಕಲೆ ಇದಾಗಿದೆ. ಕೀಲುಕುದುರೆ ಆಡಿಸುವವರು ಕಾಲಿಗೆ ಎರಡು ಅಡಿ ಉದ್ದದ ಮರಗಾಲು ಕಟ್ಟಿಕೊಂಡಿರುತ್ತಾರೆ. ಈ ಮರದ ಕಾಲುಗಳನ್ನು ಹಗುರದ ಹಾಗೂ ಗಟ್ಟಿಯಾದ ಮರದಿಂದ ಮಾಡಿ ಅದರ ಮೇಲೆ ಕಾಲು ಕೂರಿಸಲು ಅನುಕೂಲವಾಗುವಂತೆ ಮಾಡಿರುತ್ತಾರೆ. ಅದಕ್ಕೆ ಸಿಂಗಾರ ಮಾಡಿರುತ್ತಾರೆ.

‌ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ, ಕರ್ನಾಟಕ ಜಾನಪದ ಅಕಾಡೆಮಿಯ ವಾರ್ಷಿಕ ಪ್ರಶಸ್ತಿ, ಕರ್ನಾಟಕ ಜಾನಪದ ಪರಿಷತ್ತಿನ ಲೋಕಸಿರಿ ಪ್ರಶಸ್ತಿ ಸೇರಿದಂತೆ ಹಲವಾರು ಸಂಘ ಸಂಸ್ಥೆಗಳು ಇವರ ಕಲಾ ಸೇವೆ ಗುರುತಿಸಿ ಗೌರವಿಸಿವೆ.

ಎಂ.ತೋಪಣ್ಣ
ನನ್ನನ್ನು ಗುರುತಿಸಿ ಪ್ರಶಸ್ತಿ ನೀಡಿದ್ದಾರೆ ಎನ್ನುವುದಕ್ಕಿಂತ ಕಲೆಗೆ ಒಲಿದ ಗೌರವವಿದು. ತುಂಬಾ ಖುಷಿ ಆಗಿದೆ. ನನ್ನ ಉಸಿರಿರುವವರೆಗೆ ಈ ಕಲಾ ಸೇವೆ ಮುಂದುವರಿಸುತ್ತೇನೆ
ಎಂ.ತೋಪಣ್ಣ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ

ಕೀಲುಕುದುರೆ ಕಲೆ ನನ್ನ ಉಸಿರು ಬದುಕು...

 ‘ಬಾಲ್ಯದಲ್ಲಿ ನಾನು ಮಂಚಂಡಹಳ್ಳಿಯಲ್ಲಿ ಇದ್ದುದ್ದಕ್ಕಿಂತ ತಾಯಿಯ ತವರು ಮನೆ ಜಂಗಮಕೋಟೆಯಲ್ಲಿ ಕಾಲ ಕಳೆದಿದ್ದೇ ಹೆಚ್ಚು. ಆಗ ನವಿಲು ಮುಖವಾಡ ಹಾಕಿಕೊಂಡು ನೃತ್ಯ ಮಾಡುತ್ತಿದ್ದೆ. ಸೋದರ ಮಾವ (ತಾಯಿ ಅಣ್ಣ) ಮುನಿಯಪ್ಪ ಜೊತೆ ಕಾರ್ಯಕ್ರಮಗಳಿಗೆ ಹೋಗುತ್ತಿದ್ದೆ. ಅವರೇ ನನ್ನ ಮೊದಲ ಗುರು. 15ನೇ ವಯಸ್ಸಿನಲ್ಲಿ ಕೀಲುಕುದುರೆ ಕುಣಿತ ಕಲೆಯಲ್ಲಿ ತೊಡಗಿಸಿಕೊಂಡೆ. ನಂತರ ಹುಟ್ಟೂರಿಗೆ ಬಂದು  ನಿರಂತರವಾಗಿ ಈ ಕಲೆಯನ್ನು ಮುಂದುವರಿಸಿಕೊಂಡು ಬಂದಿದ್ದೇನೆ. ಈ ಕಲೆಯೇ ನನ್ನ ಉಸಿರಾಗಿದೆ ಬದುಕಾಗಿದೆ’ ಎಂದು ತೋಪಣ್ಣ ಭಾವುಕರಾಗಿ ನುಡಿದರು. ‘ಎಲ್ಲಾ ಕಲಾವಿದರಿಗೆ ಸಿಕ್ಕಿದ ಗೌರವವಿದು. ಊರಿನವರಿಗೂ ಖುಷಿ. ಸೋದರ ಮಾವ ಇದ್ದಿದ್ದರೆ ತುಂಬಾ ಖುಷಿಪಡುತ್ತಿದ್ದರು’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.