ಕೆಜಿಎಫ್: ನಗರದ ಎಸ್ಟಿ ಬ್ಲಾಕ್ನಲ್ಲಿರುವ ಮುತ್ತು ಮಾರಿಯಮ್ಮ ದೇವಾಲಯದಲ್ಲಿ ನವರಾತ್ರಿ ಪೂಜೆ ಕಾರ್ಯಕ್ರಮದ ಅಂಗವಾಗಿ ಕನ್ಯಾ ಮತ್ತು ಸುಮಂಗಲಿ ಪೂಜೆ ಸೋಮವಾರ ಆರಂಭವಾಯಿತು.
ದೇವಾಲಯದಲ್ಲಿ ಪ್ರತಿ ವರ್ಷ ಒಂಬತ್ತು ದಿನಗಳು ನಡೆಯುವ ಕನ್ಯಾ ಮತ್ತು ಸುಮಂಗಲಿ ಪೂಜೆ ಅತ್ಯಂತ ಜನಪ್ರಿಯವಾಗಿದೆ. ಪ್ರತಿದಿನ ನಡೆಯುವ ಧಾರ್ಮಿಕ ಕಾರ್ಯಕ್ರಮದಲ್ಲಿ ಸಾವಿರಾರು ಭಕ್ತರು ಭಾಗವಹಿಸುತ್ತಾರೆ. ಬಾಲ್ಯದಲ್ಲಿರುವ ಹೆಣ್ಣು ಮಕ್ಕಳು ದುರ್ಗೆಯ ವೇಷ ಹಾಕಿಕೊಂಡು ಸಂಭ್ರಮಿಸುತ್ತಾರೆ. ಇಂತಹ ಕನ್ಯೆಯರಿಗೆ ವಿಶೇಷ ಪೂಜೆಯನ್ನು ನೆರವೇರಿಸಲಾಗುತ್ತದೆ. ನಂತರ ಎಪ್ಪತ್ತು ವರ್ಷ ದಾಟಿದ ಮಹಿಳೆಯರನ್ನು ಸುಮಂಗಲಿ ಎಂದು ಕರೆದು, ಅವರಿಗೂ ಪೂಜೆ ಸಲ್ಲಿಸಲಾಗುತ್ತದೆ. ಅನೇಕ ಹಿರಿಯ ಮಹಿಳೆಯರು ಕೆಂಪು ಮತ್ತು ಹಳದಿ ಸೀರೆಯನ್ನುಟ್ಟುಕೊಂಡು ಪೂಜೆಯಲ್ಲಿ ಭಾಗವಹಿಸುತ್ತಾರೆ.
ನವರಾತ್ರಿಯ ಮೊದಲ ದಿನದಂದು ನಡೆದ ಜಯ ವಿಜಯ ಸಮೇತ ಮಹಾದುರ್ಗೆ ಪೂಜೆ ಮತ್ತು ಸುಮಂಗಲಿ ಪೂಜೆಗೆ ಅತ್ಯಂತ ಶ್ರದ್ಧಾಭಕ್ತಿಯಿಂದ ನಡೆಯಿತು.
ಕನ್ಯೆ ಮತ್ತು ಸುಮಂಗಲಿಯರಿಗೆ ಪೂಜೆ ಸಲ್ಲಿಸಲು ಭಕ್ತಾಧಿಗಳು ವಿಶೇಷ ಕಾಣಿಕೆ ತಂದು, ಭಕ್ತಿಯಿಂದ ಭಜನೆ ಮಾಡುತ್ತಾರೆ ಎಂದು ದೇವಾಲಯದ ಅರ್ಚಕ ಸುರೇಶ್ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.