ಕೆಜಿಎಫ್: ಪೊಲೀಸ್ ಜಿಲ್ಲೆಯ ವಿವಿಧ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮಂಗಳವಾರ ಅಪರಾಧ ತಡೆ ಮಾಸಾಚರಣೆಯನ್ನು ಜನರ ಮತ್ತು ವಿದ್ಯಾರ್ಥಿಗಳ ಸಮ್ಮುಖದಲ್ಲಿ ಆಚರಣೆ ಮಾಡಲಾಯಿತು.
ಉರಿಗಾಂ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮೈನಿಂಗ್ ಪ್ರದೇಶದ ಸಿ.ಎ. ಬ್ಲಾಕ್ ನಲ್ಲಿ ಸಹಾಯಕ ಸಬ್ ಇನ್ಸ್ಪೆಕ್ಟರ್ ಕೃಷ್ಣಮೂರ್ತಿ , ಆಂಡರಸನ್ಪೇಟೆ ಬಸ್ ನಿಲ್ದಾಣದ ಬಳಿ ಸಬ್ ಇನ್ಸ್ಪೆಕ್ಟರ್ ಮಂಜುನಾಥ್, ಆಟೊ ಚಾಲಕರಿಗೆ ರಸ್ತೆ ಸುರಕ್ಷತೆ, ರಸ್ತೆ ಸಂಚಾರ ನಿಯಮಗಳ ಕುರಿತು ಮತ್ತು ಅಪರಾಧಗಳನ್ನು ತಡೆಗಟ್ಟುವ ಬಗ್ಗೆ ಜಾಗೃತಿಯನ್ನು ಮೂಡಿಸಿದರು.
ಬೇತಮಂಗಲ ಪೊಲೀಸ್ ಠಾಣೆ ವ್ಯಾಪ್ತಿಯ ಸುಂದರಪಾಳ್ಯದಲ್ಲಿ ಸಬ್ ಇನ್ಸ್ಪೆಕ್ಟರ್ ದೇವರಾಜ್ ಅವರು ಸುಂದರಪಾಳ್ಯ ಗ್ರಾಮದಲ್ಲಿ ಸಾರ್ವಜನಿಕರಿಗೆ ತಿಳಿವಳಿಕೆ ಮೂಡಿಸಿದರು. ಕ್ಯಾಸಂಬಳ್ಳಿ ಸಮೀಪದ ಜಕ್ಕರಸಕುಪ್ಪ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳಿಗೆ ಸಬ್ ಇನ್ಸ್ಪೆಕ್ಟರ್ ಶ್ಯಾಮಲ, ಬೆಮಲ್ ನಗರದ ಡಾ.ಅಂಬೇಡ್ಕರ್ ಶಾಲೆಯಲ್ಲಿ ಸಬ್ ಇನ್ಸ್ಪೆಕ್ಟರ್ ವಿದ್ಯಾಶ್ರೀ, ಕಾಮಸಮುದ್ರ ಪೊಲೀಸ್ ಠಾಣೆಯ ದೊಡ್ಡಪೊನ್ನಾಂಡಹಳ್ಳಿಯಲ್ಲಿ ಗ್ರಾಮಸ್ಥರಿಗೆ ಸಬ್ ಇನ್ಸ್ಪೆಕ್ಟರ್ ವೆಂಕಟಮುನಿಯಪ್ಪ ಅವರು ಅಪರಾಧ ತಡೆಗಟ್ಟುವ ಕುರಿತು ಜಾಗೃತಿ ಮೂಡಿಸಿದರು.
ಮಾದಕ ವಸ್ತುಗಳಿಂದ ಆಗುವಂತಹ ಅನಾಹುತಗಳ ಬಗ್ಗೆ, ಪೋಕ್ಸೊ ಕಾಯ್ದೆಯ ಕುರಿತು, ಬಾಲ್ಯವಿವಾಹ ನಿರ್ಮೂಲನೆ, ಮಹಿಳೆಯರ ಮತ್ತು ಮಕ್ಕಳ ಹಕ್ಕುಗಳ ಕುರಿತು ಪೊಲೀಸ್ ಅಧಿಕಾರಿಗಳು ಜಾಗೃತಿ ಮೂಡಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.