
ಕೆಜಿಎಫ್: ಬಿಜಿಎಂಎಲ್ ಮುಚ್ಚಿದ ನಂತರ ನಗರದ ಆರ್ಥಿಕ ಮತ್ತು ಸಾಮಾಜಿಕ ಪರಿಸ್ಥಿತಿ ಕೆಳಮಟ್ಟಕ್ಕೆ ಕುಸಿದಿದೆ. ಕೆಜಿಎಫ್ ಜನರು ಕಳೆದುಕೊಂಡಿರುವುದನ್ನು ವಾಪಸ್ ಪಡೆಯಲು ಸುಮಾರು 1.5 ಲಕ್ಷ ಸಹಿ ಸಂಗ್ರಹ ಮಾಡಿ ಒತ್ತಡ ತರಲಾಗುವುದು ಎಂದು ಸಿಪಿಐ ಕಾರ್ಮಿಕ ಮುಖಂಡ ಜ್ಯೋತಿಬಸು ಹೇಳಿದರು.
ಕೆಜಿಎಫ್ ಸೇವ್ ಸಮಿತಿಯಿಂದ ಗುರುವಾರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿವಾಂಶು ರಜಪೂತ ಅವರಿಗೆ ಮನವಿ ಸಲ್ಲಿಸಲಾಯಿತು.
ಬಳಿಕ ಮಾತನಾಡಿದ ಅವರು, ಚಿನ್ನದ ಗಣಿ ಮುಚ್ಚಿ 25 ವರ್ಷ ಆಗಿದೆ. ಈವರೆಗೆ ಅವರಿಗೆ ಬರಬೇಕಾದ ಆರ್ಥಿಕ ಸವಲತ್ತು ಸಿಕ್ಕಿಲ್ಲ. ಬೆಮಲ್ನಲ್ಲಿ ಉದ್ಯೋಗ ಸೃಷ್ಟಿಯಾಗಬೇಕು. ಬೇತಮಂಗಲ ಜಲಾಶಯದಿಂದ ನೀರು ಸಮರ್ಪಕವಾಗಿ ಸರಬರಾಜು ಮಾಡಬೇಕು. ಎಂ.ಜಿ.ಮಾರುಕಟ್ಟೆಯನ್ನು ಸರಿಯಾಗಿ ನಿರ್ವಹಿಸಬೇಕು. ಜಿಮ್ಖಾನ ಮೈದಾನವನ್ನು ಸಾರ್ವಜನಿಕ ಸೇವೆಗೆ ಬಿಡಬೇಕು. ಗಣಿ ಕಾರ್ಮಿಕರು ವಾಸ ಮಾಡುತ್ತಿರುವ ಮನೆಗಳನ್ನು ಅವರಿಗೇ ನೀಡಬೇಕು ಎಂಬುದು ಸಮಿತಿಯ ಪ್ರಮುಖ ಒತ್ತಾಯವಾಗಿದೆ ಎಂದರು.
ಬಿಜಿಎಂಎಲ್ ಮುಚ್ಚಿ 25 ವರ್ಷ ಪೂರೈಸಲಿರುವ ಮಾರ್ಚ್ 1ರಂದು ಕಪ್ಪು ಬಾವುಟ ಪ್ರದರ್ಶಿಸಲಾಗುವುದು. ಈ ನಿಟ್ಟಿನಲ್ಲಿ ಹಲವು ಬೇಡಿಕೆಗಳ ಪಟ್ಟಿಯನ್ನು ಎಸ್ಪಿ ಅವರಿಗೆ ಸಲ್ಲಿಸಲಾಗಿದೆ ಎಂದರು.
ನಗರಸಭೆ ಮಾಜಿ ಅಧ್ಯಕ್ಷ ದಯಾನಂದ್ ಮಾತನಾಡಿ, ಸಹಿ ಸಂಗ್ರಹ ಮಾಡಿ ಅದರ ಪ್ರತಿಯನ್ನು ಸಂಸದ ಮಲ್ಲೇಶಬಾಬು ಮತ್ತು ಶಾಸಕಿ ಎಂ. ರೂಪಕಲಾ ಅವರಿಗೆ ಸಲ್ಲಿಸಲಾಗುವುದು. ನಮ್ಮಲ್ಲಿ ಉದ್ಯೋಗ ಸೃಷ್ಟಿ, ಅಭಿವೃದ್ಧಿ ಕಾರ್ಯಗಳು ಭರದಿಂದ ನಡೆಯಬೇಕು ಎಂಬುದು ಸೇವ್ ಕೆಜಿಎಫ್ ಸಂಘಟನೆ ಆಶಯ ಎಂದು ಹೇಳಿದರು.
ಮುಖಂಡ ಪೊನ್ ಚಂದ್ರಶೇಖರ್, ಸಂಪತ್ ಕುಮಾರ್, ದಕ್ಷಿಣಾಮೂರ್ತಿ, ದಾಡಿ ಅನ್ಬಳಗನ್, ಇರುದಯರಾಜ್, ಕರುಣಾಮೂರ್ತಿ, ತಿಲಗರಾಜ್, ಜಯಶೀಲನ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.