
ಸಾವು
(ಪ್ರಾತಿನಿಧಿಕ ಚಿತ್ರ)
ಕೋಲಾರ: ತಾಲ್ಲೂಕಿನ ಹೊಗರಿಗೊಲ್ಲಹಳ್ಳಿ ಗ್ರಾಮದಲ್ಲಿ ಶನಿವಾರ ಕೃಷಿ ಹೊಂಡಕ್ಕೆ ಬಿದ್ದು ತಾಯಿ ಹಾಗೂ ಮಗು ಮೃತಪಟ್ಟಿದ್ದಾರೆ.
ಗ್ರಾಮದ ಮಂಜುನಾಥ್ ಎಂಬುವರ ಪತ್ನಿ ಮಾಲಾ (30) ಹಾಗೂ ಪುತ್ರ ಚಕ್ರವರ್ತಿ (6) ಮೃತರು. ತಾಯಿ ಜಾನುವಾರುಗಳಿಗೆ ಮೇವು ತರಲು ಹೊಲಕ್ಕೆ ಹೋಗಿದ್ದರು. ಅಂಗನವಾಡಿ ಮುಗಿಸಿಕೊಂಡು ಬಂದ ಪುತ್ರ ಕೂಡ ಜೊತೆಯಲ್ಲಿ ತೆರಳಿದ್ದಾನೆ. ಇವರಿಬ್ಬರು ರಾತ್ರಿಯಾದರೂ ವಾಪಸ್ ಬಂದಿಲ್ಲ. ಅವರಿಗಾಗಿ ಕುಟುಂಬಸ್ಥರು ರಾತ್ರಿಯೆಲ್ಲಾ ಹುಡುಕಾಡಿದ್ದು, ಪತ್ತೆಯಾಗಿರಲಿಲ್ಲ. ಸಂಬಂಧಿಕರ ಮನೆಗೆ ಹೋಗಿರಬಹುದೆಂದು ದೂರವಾಣಿ ಕರೆ ಮಾಡಿ ವಿಚಾರಿಸಿದ್ದಾರೆ. ಇಷ್ಟಾಗಿಯೂ ಯಾವುದೇ ರೀತಿ ಸುಳಿವು ಸಿಕ್ಕಿರಲಿಲ್ಲ.
ಭಾನುವಾರ ಬೆಳಿಗ್ಗೆ ಎದ್ದು ಹೊಲದ ಕಡೆ ಹೋಗಿ ನೋಡಿದರೆ ಮಾಲಾ ಹಾಗೂ ಮಗು ಇಬ್ಬರೂ ಹೊಲದಲ್ಲಿದ್ದ ಕೃಷಿ ಹೊಂಡದಲ್ಲಿ ಶವವಾಗಿ ಪತ್ತೆಯಾಗಿದ್ದಾರೆ.
ಕಾಲು ಜಾರಿ ಕೃಷಿ ಹೊಂಡದಲ್ಲಿ ಬಿದ್ದ ತನ್ನ ಮಗುವನ್ನು ಕಾಪಾಡಲು ಹೋಗಿ ತಾಯಿ ಕೂಡ ನೀರಿನಲ್ಲಿ ಮುಳುಗಿರಬಹುದೆಂದು ಶಂಕೆ ವ್ಯಕ್ತಪಡಿಸಿದ್ದಾರೆ.
ಕೋಲಾರ ಗ್ರಾಮಾಂತರ ಠಾಣಾ ಪೊಲೀಸರು ಸ್ಥಳಕ್ಕೆ ಬೇಟಿ ನೀಡಿ ಪರಿಶೀಲನೆ ನಡೆಸಿದ್ದು, ದೂರು ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.